ADVERTISEMENT

ನುಡಿ ಬೆಳಗು: ದಾರಿದ್ರ್ಯ ದೀಕ್ಷೆ

ರೇಣುಕಾ ನಿಡಗುಂದಿ
Published 26 ಫೆಬ್ರುವರಿ 2026, 23:30 IST
Last Updated 26 ಫೆಬ್ರುವರಿ 2026, 23:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಲಂಡನ್‌ನ ಗಿಲ್ಡ್ ಹೌಸಿನಲ್ಲಿ ಒಂದು ದೊಡ್ಡ ಸಭೆ. ಅಲ್ಲಿ ಗಾಂಧೀಜಿ ಅವರ ಉಪನ್ಯಾಸ ನಡೆದಿರುತ್ತದೆ. ವಿಷಯ: ‘ದಾರಿದ್ರ್ಯ ದೀಕ್ಷೆ’. ಸಭೆಯಲ್ಲಿ ಕಿಕ್ಕಿರಿದು ಜನ ಸೇರಿರುತ್ತಾರೆ. ಸಭಾಂಗಣ ತುಂಬಿ ಸಾವಿರಾರು ಜನ ಬೀದಿಯಲ್ಲಿ ನಿಂತಿರುತ್ತಾರೆ. ದಾರಿದ್ರ್ಯ ದೀಕ್ಷೆ ಎಂದರೆ ಸ್ವಯಂ ಇಚ್ಛೆಯಿಂದ ಸರಳ ಜೀವನವನ್ನು ಅಳವಡಿಸಿಕೊಂಡು,  ಐಶ್ವರ್ಯ ಸಂಪತ್ತಿನ ಆಸೆಗಳನ್ನು ತ್ಯಜಿಸಿ ಸಮಾಜ ಸೇವೆ, ಆತ್ಮಶುದ್ಧಿ ಅಥವಾ ಧಾರ್ಮಿಕ–ನೈತಿಕ ಮೌಲ್ಯಗಳಿಗಾಗಿ ಬದುಕುವ ಸಂಕಲ್ಪ, ಪ್ರತಿಜ್ಞೆ. ಆ ದೀಕ್ಷೆಯನ್ನು ತೆಗೆದುಕೊಂಡು ಆ ರೀತಿ ಬಾಳಿದವರ ಬದುಕಿನ ಪ್ರೇರಣಾದಾಯಕ ಸಂಗತಿಗಳನ್ನು ಜನ ಆಲಿಸುತ್ತಿದ್ದರು. ಉಪನ್ಯಾಸ ಮುಗಿದ ಮೇಲೆ ಅನೇಕರು ಅನೇಕ ಪ್ರಶ್ನೆಗಳನ್ನು ಕೇಳಿದರು. ಗಾಂಧೀಜಿ ಅವುಗಳಿಗೆಲ್ಲ ಸೂಕ್ತವಾದ ಉತ್ತರವನ್ನು ಕೊಡುತ್ತಿದ್ದರು. ಸರಿಯಾದ ಅರ್ಥವನ್ನು ಹೇಳುತ್ತಿದ್ದರು. ಏನನ್ನೂ ಸಂಗ್ರಹಿಸಿಟ್ಟುಕೊಳ್ಳಬಾರದು ಎನ್ನುವ ಬಗ್ಗೆ ಚರ್ಚೆಯಾಗುತ್ತದೆ. ಅಸಂಗ್ರಹದ ವಿಷಯ ಬಂದಾಗ ‘ನಮ್ಮದು ಎನ್ನುವ ಏನನ್ನೂ ಇಟ್ಟುಕೊಳ್ಳದೇ ಇರುವುದು ಹೇಗೆ’ ಎಂಬ ಪ್ರಶ್ನೆ ಬರುತ್ತದೆ.

ಆಗ ಗಾಂಧೀಜಿ ಹೇಳುತ್ತಾರೆ: ‘ನಮ್ಮದೆನ್ನುವ ಏನನ್ನೂ ಇಟ್ಟುಕೊಳ್ಳದೇ ಇರುವುದು ಎಂದರೆ, ನಿಮ್ಮ ಮೇಲಿನ ಬಟ್ಟೆಗಳನ್ನು ಕಳಚಿಬಿಡುವುದು ಎಂದರ್ಥವಲ್ಲ. ನಿಮ್ಮ ಎಲುಬಿನ ಹಂದರಕ್ಕೆ ಅಂಟಿದ ಮಾಂಸವನ್ನೇ ತೆಗೆದಿಟ್ಟಂತೆ. ನೀವು ಕೇಳಬಹುದು, ನಿಮ್ಮ ಮೇಲಿನ ಬಟ್ಟೆ ಇದೆಯಲ್ಲ, ಇಲ್ಲ ಎನ್ನುವುದು ಹೇಗೆ? ಎಂದು. ಅದಕ್ಕೆ ನಾನನ್ನುವುದಿಷ್ಟೇ; ಈ ದೇಹವಿರುವ ತನಕ ಅದಕ್ಕೆ ಏನಾದರೂ ಹೊದಿಸಬೇಕು ಎಂದು ಕಾಣುತ್ತದೆ.’

ADVERTISEMENT

ಗಾಂಧಿ ಒಳಗೊಳಗೇ ನಗುತ್ತಿದ್ದರು. ನಗುತ್ತಲೇ ಮುಂದುವರಿದು ಹೇಳುತ್ತಾರೆ: ‘ಇಲ್ಲಿರುವವರಿಗೆ ಬೇಕಾದರೆ ಅದನ್ನೂ ತೆಗೆದುಕೊಳ್ಳಬಹುದು, ನಾನೇನು ಪೊಲೀಸರನ್ನು ಕರೆಯುವುದಿಲ್ಲ’.

ಸೇರಿದ ಜನರೆಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿಬಿಡುತ್ತಾರೆ ಗಾಂಧಿ. ಲಂಡನ್‌ನಲ್ಲಿದ್ದಾಗ ಮೈಗಾವಲಿಗಾಗಿ ಬ್ರಿಟಿಷ್ ಸರ್ಕಾರದವರು ಪೊಲೀಸ್ ದಳವನ್ನು ಕೊಟ್ಟಿರುತ್ತಾರೆ. ಗಾಂಧಿ ಅವರ ವಿನೋದದ ಮಾತಿಗೆ ಪೊಲೀಸರೂ ನಗತೊಡಗುತ್ತಾರೆ.

ಲೋಕದಲ್ಲಿ ಎರಡು ಬಗೆಯ ಜನರಿರುತ್ತಾರೆ. ಒಂದು ಬಗೆಯವರಿಗೆ ಅದು ಇದು ಬೇಕುಬೇಡದ್ದನ್ನೆಲ್ಲ ಮನೆ ಹಿಡಿಸಲಾರದಂತೆ ಸಂಗ್ರಹಿಸಿಟ್ಟುಕೊಳ್ಳುವ ಅಭ್ಯಾಸ. ಇನ್ನೊಂದು ಬಗೆಯವರಿಗೆ ಇದ್ದುದನ್ನೆಲ್ಲ ತೊರೆದು ಆದಷ್ಟೂ ಹೊರೆ ಕಡಿಮೆ ಮಾಡಿಕೊಳ್ಳುವ ಬಯಕೆ. ಗಾಂಧಿ ಬಯಸಿದ್ದರೆ ದೊಡ್ದ ಬಂಗಲೆಯಲ್ಲಿಯೇ ವಾಸಿಸಬಹುದಿತ್ತು. ಅವರು ಎಲ್ಲವನ್ನೂ ತೊರೆದು ಆಶ್ರಮ ವಾಸಿಯಾಗುತ್ತಾರೆ. ಸ್ವಂತ ದುಡಿಮೆಯಾಗಿ ಚರಕವನ್ನು ನೂಲಲು ಕಲಿಸುತ್ತಾರೆ. ಇತರರಿಗೂ ಸರಳ ಜೀವನವನ್ನು ಅನುಸರಿಸಲು ಪ್ರೇರಣೆಯಾಗುತ್ತಾರೆ.

ದೇಶದ ಬಹುಸಂಖ್ಯಾತರು ದಾರಿದ್ರ್ಯದಲ್ಲಿ ಬದುಕುತ್ತಿದ್ದಾರೆ, ಉದ್ಯೋಗವಿಲ್ಲ. ಬಡತನದಲ್ಲಿ, ಒಪ್ಪೊತ್ತಿನ ಊಟಕ್ಕೂ ಹೋರಾಟ ಮಾಡಬೇಕಾದ ಸ್ಥಿತಿ ಇದೆ. ಅಸಂಖ್ಯಾತ ಮಕ್ಕಳಿಗೆ ಸರಿಯಾದ ಪೌಷ್ಟಿಕ ಆಹಾರವಿಲ್ಲ. ಸರಿಯಾದ ಶಿಕ್ಷಣ ಸಿಗುತ್ತಿಲ್ಲ. ದೇಶದ ಸಂಪತ್ತಿನ ಬಹುಪಾಲು ಉದ್ಯಮಿಗಳ ಕೈಯಲ್ಲಿದೆ. ದಾರಿದ್ರ್ಯ ದೀಕ್ಷೆಯನ್ನು ಅಥವಾ ಸನ್ಯಾಸ ಜೀವನವನ್ನು ಸ್ವೀಕರಿಸಿದವರು ಅನುಸರಿಸುವ ಒಂದು ವ್ರತವೆಂದು ನೋಡುವಾಗ ಅವರೆಲ್ಲ ಐಷಾರಾಮಿ ಜೀವನವನ್ನು ನಡೆಸುತ್ತಿರುವುದನ್ನು ಕಾಣುತ್ತೇವೆ. ನಮ್ಮ ದೇಶದ ಬಾಬಾಗಳು, ಸಾಧುಗಳು, ಸನ್ಯಾಸಿಗಳು, ಸಂತರು, ಮಠಾಧಿಪತಿಗಳು ನಡೆಸುವ ವೈಭವದ ಜೀವನ ಶೈಲಿಯನ್ನು ನೋಡಿದಾಗ ಗಾಂಧೀಜಿ ನೆನಪಾಗುತ್ತಾರೆ. ಸಮಾಜ ಸೇವೆಯ ಹೆಸರಿನಲ್ಲಿ ಕೋಟ್ಯಂತರ ಸಂಪತ್ತನ್ನು ಸಂಗ್ರಹಿಸಿಕೊಳ್ಳುವ ಈ ಎಲ್ಲಾ ಜನರು ನಿಜವಾಗಿ ಜನಸೇವೆ, ಸಮಾಜ ಸೇವೆ ಮಾಡಿದ್ದೆಷ್ಟು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.