ADVERTISEMENT

ನುಡಿ ಬೆಳಗು | ಕಲ್ಲನ್ನೂ ಸವೆಸುವ ಹಗ್ಗ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 21:44 IST
Last Updated 9 ಡಿಸೆಂಬರ್ 2025, 21:44 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಆ ಗುರುಕುಲದ ಕಟ್ಟುನಿಟ್ಟಿನ ಎಲ್ಲ ನಿಯಮಗಳನ್ನೂ ಆ ಬಾಲಕ ಸಹಿಸಬಲ್ಲ. ಹತ್ತು ಹಲವು ಶಾಸ್ತ್ರಗ್ರಂಥಗಳ ಬಗ್ಗೆ ಪಾಠವನ್ನು ಕೇಳುತ್ತ ಅಭ್ಯಾಸ ಮಾಡುತ್ತಿದ್ದ, ಆದರೆ ಉಳಿದ ಸರೀಕರ ಹಾಗೆ ಅವು ತಲೆಗೆ ಹತ್ತುತ್ತಿರಲಿಲ್ಲ. ಬುದ್ಧಿಗೆ ದಕ್ಕುತ್ತಿರಲಿಲ್ಲ. ಗುರುವಿಗೂ ಕಲಿಸಿ ಕಲಿಸಿ ಸಾಕಾಗಿಹೋಗಿತ್ತು. ಅದೆಷ್ಟು ಬಾರಿ ಪುನರಾವರ್ತನೆ ಮಾಡಿದರೂ ಅರಿವಿಗೇ ಬಾರದಂತಿದ್ದ ಆ ಹುಡುಗನನ್ನು ಗುರುಕುಲದಿಂದ ‘ನಿನಗೆ ಈ ವಿದ್ಯೆ ಹತ್ತುವುದಿಲ್ಲ ಕಂದ. ಮನೆಗೆ ಹೋಗಿ ಬಿಡು. ನಿನ್ನ ತಂದೆಯ ಕೃಷಿ ಇತ್ಯಾದಿ ಕೆಲಸಗಳಿಗೆ ಸಹಾಯ ಮಾಡು’ ಎಂದು ಗುರುಗಳು ನಯವಾಗೇ ಹೊರಗೆ ಕಳಿಸಿದರು. ಸಹಪಾಠಿಗಳ ಜೋರಾದ ನಗೆಗೆ ಮನಸ್ಸು ಘಾಸಿಗೊಂಡಿತು. ಬಾಲಕ ಊರಿಗೆ ಹಿಂದಿರುಗಲು ಗುರುಕುಲದಾಚೆ ಹೊರಟೇಬಿಟ್ಟ. ಮನಸ್ಸು, ಹೃದಯ ಭಾರವಾಗಿತ್ತು. ತಾನು ಸೋತೆನೇ ಎಂದು ಕಣ್ಣೀರಿಡುತ್ತ ಭಾರವಾದ ಹೆಜ್ಜೆ ಹಾಕುತ್ತ ನಡೆದ. ಹಾದಿಯಲ್ಲಿ ಬಹಳ ನೀರಡಿಕೆಯಾಗಿ ಎದುರಾದ ಹಳ್ಳಿಯ ಒಳಗೆ ಹೋದ. ಮಧ್ಯವಯಸ್ಕ ಮಹಿಳೆಯೊಬ್ಬಳು ಬಾವಿಯಿಂದ ನೀರು ಸೇದುತ್ತಾ ಇದ್ದಳು. ಸುಡು ಬಿಸಿಲಿತ್ತು. ಬಾಲಕ ನೀರಿಗಾಗಿ ಬೊಗಸೆ ಒಡ್ಡಿದ್ದ. ಮಹಿಳೆ ಬಹಳ ಅಕ್ಕರೆಯಿಂದಲೇ ನೀರನ್ನು ಊಡಿಸಿದಳು.

ಆ ಹಳೆಯ ಬಾವಿಯನ್ನು ಒಮ್ಮೆ ಸುತ್ತುಹಾಕಿ ನೋಡಿದ ಬಾಲಕ ಆಶ್ಚರ್ಯಪಟ್ಟ ಮತ್ತು ಆ ಮಹಿಳೆಗೆ ಕೇಳಿದ. ‘ಅಮ್ಮ ಇಷ್ಟು ಒರಟಾದ ಈ ಬಾವಿ ಕಟ್ಟೆಯ ಕಲ್ಲಿನ ಮೇಲೆ ಇಷ್ಟು ಗೆರೆಗಳನ್ನು ಯಾರು ಕೊರೆದರು? ಇಷ್ಟು ಕಲೆಗಳು ಹೇಗೆ ಉಳಿದವು ಇಲ್ಲಿ’ ಎಂದು ಕೇಳಿದ. ಆ ಬಾಲಕನ ಮಾತಿಗೆ ನಕ್ಕು ಉತ್ತರಿಸುತ್ತ ಆ ಮಹಿಳೆ ‘ಅಯ್ಯೋ ಕಂದ, ಇದು ಯಾರೂ ಕೊರೆದದ್ದೂ ಅಲ್ಲ ಎಳೆದದ್ದೂ ಅಲ್ಲ. ನೀರು ಸೇದುವಾಗ ಕೊಡಕ್ಕೆ ಕಟ್ಟಿದ್ದ ಹಗ್ಗಗಳು ಮೂಡಿಸಿದ್ದ ಗೆರೆಗಳು’ ಅಂದಳು. ಒಂದು ಹಗ್ಗ ಇಷ್ಟು ಬಲಿಷ್ಟವಾದ ಕರ್ಗಲ್ಲನು ಹೀಗೆ ಸವೆಸಿ ಗುರುತು ಬೀಳಿಸಬಲ್ಲದೇ?’ ಎಂದೆಲ್ಲ ಆಲೋಚಿಸಿದ.

ADVERTISEMENT

‘ಒಂದು ಮೃದು ಮೈಯ ಹಗ್ಗ ಪದೇ ಪದೇ ತಾಕುತ್ತ ತೀಡುತ್ತ ಕಲ್ಲಿನ ಮೇಲೆ ಗುರುತು ಉಳಿಸಬಲ್ಲುದಾದರೆ, ಸತತವಾದ ಅಭ್ಯಾಸವು ನನ್ನ ಮೇಲೆ ಜ್ಞಾನದ ಗುರುತು ಏಕೆ ಉಳಿಸಲಾರದು’ ಎಂದೆಲ್ಲ ಯೋಚಿಸುತ್ತ ಪುನಃ ಗುರುಕುಲಕ್ಕೆ ಹೋಗಿ ಗುರುವಿನ ಎದುರು ನಿಂತ. ಮತ್ತೆ ಇವನು ಹಿಂದುರುಗಿ ಬಂದದ್ದಕ್ಕೆ ಗುರುವಿಗೆ ಗಾಬರಿ ಮತ್ತು ಬೆರಗು ಒಟ್ಟಿಗೆ. ಬಾಲಕ ದಾರಿಯಲ್ಲಿ ಕಂಡ ಆ ಬಾವಿ ಅದರ ಮೇಲೆ ಹಗ್ಗಗಳು ಮೂಡಿಸಿದ್ದ ಗೆರೆಗಳ ಕತೆ ಹೇಳಿದ. ತಾನು ಏಕೆ ಬೇಗ ಸೋಲನ್ನು ಒಪ್ಪಿಕೊಳ್ಳಬೇಕು? ಸತತ ಅಧ್ಯಯನ ಪರಿಶ್ರಮದಲ್ಲಿ ತೊಡಗುವ ಬಗ್ಗೆ ನಿರ್ಧಾರ ಕೈಗೊಂಡ. ಒಂದು ಮೆದುವಾದ ಹಗ್ಗ ಆ ಬಂಡೆಯ ಮೇಲೆ ಅಚ್ಚಳಿಯದ ಗುರುತು ಉಳಿಸಬಲ್ಲುದಾದರೆ ಓದು ಬರಹ ಪ್ರಯತ್ನ ನನ್ನ ಮೇಲೆ ಪ್ರಭಾವ ಬೀರರಲಾರದೇ ಎಂಬ ಹಟದ ಪ್ರಶ್ನೆಯೊಂದಿಗೆ ಕೂತ.

ಅಸಾಮಾನ್ಯವನ್ನು ಸಾಧಿಸುವ ಸಾಮಾನ್ಯ ಸಂಗತಿಗಳು ಹೇಗಾದರೂ ಯಾವ ಮೂಲೆಯಿಂದಲಾದರೂ ನಮ್ಮ ಮನೋಧರ್ಮವನ್ನು ಬದಲಾಯಿಸುವುದಾದರೆ ಅಂತಹುದಕ್ಕೆ ಎದೆಗೊಡಬೇಕು.

(ಲಘು ಸಿದ್ಧಾಂತ ಕೌಮುದಿ, ಮಧ್ಯ ಸಿದ್ಧಾಂತ ಕೌಮುದಿ ಎಂಬ ಸಂಸ್ಕೃತ ವ್ಯಾಕರಣ ಕೃತಿಗಳನ್ನು ರಚಿಸಿದ 17ನೇ ಶತಮಾನದ ವರದರಾಜಾಚಾರ್ಯರ ಬಾಲ್ಯದ ಪ್ರಸಂಗ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.