ADVERTISEMENT

ಸಂಗತ: ದೀರ್ಘರಜೆ ಮತ್ತು ಕಲಿಕೆಯ ನಷ್ಟ

ಮಕ್ಕಳು ದೀರ್ಘಕಾಲ ಶಾಲೆಯಿಂದ ಹೊರಗಿದ್ದುದರಿಂದ ಅವರಲ್ಲಿ ಕಲಿಕೆಯ ನಷ್ಟ ಉಂಟಾಗಿದೆ ಎನ್ನಲಾಗುತ್ತಿದೆ. ಆದರೆ ನಮ್ಮ ಸವಾಲಿರುವುದು ಈ ನಷ್ಟವನ್ನು ಲೆಕ್ಕ ಹಾಕುವುದರಲ್ಲಲ್ಲ

ಉದಯ ಗಾಂವಕಾರ
Published 10 ಮಾರ್ಚ್ 2021, 19:30 IST
Last Updated 10 ಮಾರ್ಚ್ 2021, 19:30 IST
   

2020ರ ಮಾರ್ಚ್ ತಿಂಗಳಲ್ಲಿ ಮುಚ್ಚಿಕೊಂಡ ಶಾಲೆಗಳು ಮತ್ತೆ ತೆರೆದದ್ದು ಈ ವರ್ಷದ ಜನವರಿ- ಫೆಬ್ರುವರಿಯಲ್ಲಿ. ಕಿರಿಯ ಪ್ರಾಥಮಿಕ ಶಾಲೆಗಳು ಈಗಲೂ ತೆರೆದಿಲ್ಲ. ಮನೆಯಲ್ಲೇ ಇದ್ದ ಮಕ್ಕಳನ್ನು ತಲುಪಲು ಪ್ರಯತ್ನಿಸಿದ ವಿದ್ಯಾಗಮ ಕಾರ್ಯಕ್ರಮಕ್ಕೆ ಆರಂಭದಲ್ಲೇ ಕಂಟಕ ಎದುರಾಯಿತು. ಶಿಕ್ಷಣ ಇಲಾಖೆಯು ದೂರದರ್ಶನದ ಮೂಲಕ ಸಂವೇಗ ಕಾರ್ಯಕ್ರಮವನ್ನು ಆರಂಭಿಸುವ ಮಹತ್ತರ ಹೆಜ್ಜೆಯನ್ನಿಟ್ಟಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತಾದರೂ ಈ ಕಾರ್ಯಕ್ರಮ ಎಲ್ಲ ‘ಮನೆ’ಗಳನ್ನು ತಲುಪಲಿಲ್ಲ.

ಕೋವಿಡ್-19 ಉಂಟು ಮಾಡಿದ ಆರ್ಥಿಕ ಹೊಡೆತವು ಅನೇಕ ಮಕ್ಕಳನ್ನು ಕೆಲಸಕ್ಕೆ ತಳ್ಳಿದ್ದು ಅರ್ಥವಾಗದಿರುವಂಥದ್ದಲ್ಲ. ಸಾಮಾಜಿಕ ಶ್ರೇಣಿಯ ಕೆಳಕ್ಕಿರುವವರ ಮಕ್ಕಳು, ಬಡ ಕುಟುಂಬದ ಮಕ್ಕಳು, ನಾಗರಿಕ ಸೌಲಭ್ಯಗಳಿಂದ ದೂರವೇ ಉಳಿದ ತೀರಾ ಹಿಂದುಳಿದ ಹಳ್ಳಿಗಳಲ್ಲಿ ವಾಸಿಸುವ ಮಕ್ಕಳು ‘ದೂರ ಕಲಿಕೆ’ಯ ಎಲ್ಲ ಪ್ರಯತ್ನಗಳಿಂದಲೂ ದೂರವೇ ಉಳಿಯುವಂತಾಯಿತು. ನಗರದಲ್ಲಿನ ಅನುಕೂಲವುಳ್ಳ ವಿದ್ಯಾರ್ಥಿಗಳಲ್ಲೂ ವಿಡಿಯೊ ಪಾಠಗಳು ಕಲಿಕೆ ಯನ್ನುಂಟು ಮಾಡಲು ವಿಫಲವಾದವು. ಆದ್ದರಿಂದ, ಈ ಎಂಟು ತಿಂಗಳ ದೀರ್ಘ ರಜೆ ಅನುಭವಿಸಿದ್ದರಿಂದ ಮಕ್ಕಳು ಈ ಹಿಂದೆ ಕಲಿತಿರುವುದರಲ್ಲೂ ಈ ವರ್ಷ ಕಲಿಯಬೇಕಾಗಿರುವುದರಲ್ಲೂ ಬಹಳಷ್ಟು ನಷ್ಟ ಸಂಭವಿಸಿದೆ ಎನ್ನುವುದು ಒಂದು ವಾದ.

ಈ ನಷ್ಟವನ್ನು ಬೇರೆ ಬೇರೆ ‘ಪ್ರಮಾಣ’ಗಳಲ್ಲಿ ನಿರೂಪಿಸಲಾಗುತ್ತಿದೆ. ಕಲಿಕೆಯ ನಷ್ಟ ಪರಿಕಲ್ಪನೆಯು ಮುಂದಿನ ವರ್ಷದ ಶೈಕ್ಷಣಿಕ ನೀತಿ ನಿರೂಪಣೆಯನ್ನು ಪ್ರಭಾವಿಸುವ ಸಾಧ್ಯತೆಯಿದೆ. ಕೋವಿಡ್‌ಪೂರ್ವ ಕಾಲದಲ್ಲೂ ಆಯಾ ತರಗತಿಯಲ್ಲಿ ಗಳಿಸಬೇಕಿದ್ದ ಸಾಮರ್ಥ್ಯಗಳನ್ನು ಬಹುದೊಡ್ಡ ಸಂಖ್ಯೆಯ ಮಕ್ಕಳು ಗಳಿಸಿಲ್ಲ ಎಂಬ ಅಧ್ಯಯನ ವರದಿಗಳನ್ನು ಇಲ್ಲಿ ಸ್ಮರಿಸಬಹುದು. ಮೂರನೇ ತರಗತಿಯ ಶೇ 50.8ರಷ್ಟು ವಿದ್ಯಾರ್ಥಿಗಳು ಒಂದನೇ ತರಗತಿಯ ಪಠ್ಯವನ್ನೂ ಓದಲಾರರು ಎಂದು ಪ್ರಥಮ್ ಸಂಸ್ಥೆಯು ನೀಡಿರುವ 2019ರ ಏಸರ್ (ASER) ವರದಿಯು ಹೇಳುತ್ತದೆ.

ADVERTISEMENT

ಕಲಿಕೆಯೆನ್ನುವುದು ಪಾತ್ರೆಯಲ್ಲಿ ಪದಾರ್ಥವನ್ನು ತುಂಬಿಸಿದಂತೆ ಎಂದು ಭಾವಿಸುವ ಸಾಂಪ್ರದಾಯಿಕ ದೃಷ್ಟಿಕೋನವೇ ‘ಕಲಿಕಾ ನಷ್ಟ’ ಎಂಬ ಪರಿಕಲ್ಪನೆಯ ಮೂಲ. ಬೇಸಿಗೆ ರಜೆಯ ನಂತರ ಶಾಲೆಗೆ ಮರಳುವ ಮಕ್ಕಳು ಕಳೆದ ತರಗತಿಯಲ್ಲಿ ಪಡೆದ ಕೆಲವು ಮಾಹಿತಿಗಳನ್ನು ಮರೆತಿರುತ್ತಾರೆ. ಫಾರ್ಮುಲಾಗಳು, ನಿಯಮಗಳು, ಕವಿತೆ, ಗದ್ಯಭಾಗಗಳು ಮತ್ತು ಅಂಕಿಗಳು ಭಾಗಶಃ ಅಥವಾ ಪೂರ್ತಿಯಾಗಿ ಮರೆತು ಹೋಗಿರುತ್ತವೆ. ಇದು ಅತ್ಯಂತ ಸ್ವಾಭಾವಿಕವಾದ ಪ್ರಕ್ರಿಯೆ. ಮಗ್ಗಿಯನ್ನು ಮರೆತ ಮಗು ಮಗ್ಗಿ ಹೇಗೆ ಉಂಟಾಗುತ್ತದೆ ಎಂಬ, ತಾನೇ ರಚಿಸಿಕೊಂಡ ಜ್ಞಾನ ವನ್ನು ಸಂಪೂರ್ಣವಾಗಿ ಮರೆತಿರುವುದಿಲ್ಲ. ಮುಂದಿನ ವರ್ಷದ ಆರಂಭದಲ್ಲೇ ಜ್ಞಾನವನ್ನು ಮರುರಚಿಸಿಕೊಳ್ಳುವ ಅವಕಾಶ ದೊರೆತಲ್ಲಿ ಮಗು ಮತ್ತೆ ಎಲ್ಲವನ್ನೂ ಹೊಸದಾಗಿಸಿಕೊಳ್ಳುತ್ತದೆ.

ವರ್ಷಗಳ ನಂತರ ಬೈಕ್ ಸವಾರಿ ಮಾಡಬೇಕಾದಾಗ ಗೇರ್ ದಂಡೆಯನ್ನು ಕೆಳಕ್ಕೆ ತಳ್ಳಬೇಕೋ ಮೇಲಕ್ಕೆ ಎತ್ತಬೇಕೋ ಎಂಬ ಗೊಂದಲ ಉಂಟಾಗುವ ಹಾಗೆ, ಪುಟ್ಟ ಪುಟ್ಟ ಸಂಗತಿಗಳಿಗೆ ಮರುಪುಷ್ಟಿಯ ಅವಶ್ಯಕತೆ ಇದ್ದೇ ಇರುತ್ತದೆ. ಇದು ಕಲಿಕೆಯ ಭಾಗವೇ ಆಗಿದೆ. ಆದರೆ, ಈ ಮರೆವು ಬೈಕ್ ಸವಾರಿಯ ಮೂಲಕೌಶಲಗಳಲ್ಲಾದ ನಷ್ಟವೇನಲ್ಲ.

ಕಲಿಕೆಯು ನಿರಂತರ ಕ್ರಿಯೆಯಾಗಿದ್ದು, ಅದು ತರಗತಿಯ ಹೊರಗೂ ನಡೆಯುತ್ತದೆ. ಶಿಕ್ಷಣಶಾಸ್ತ್ರಜ್ಞ ವೈಗೊಸ್ಕಿಯವರ ಸಾಮಾಜಿಕ ರಚನಾವಾದವು ಕಲಿಕೆಯನ್ನು ಸಾಮಾಜಿಕ ಪ್ರಕ್ರಿಯೆ ಎಂದು ಗ್ರಹಿಸುತ್ತದೆ. ಶಾಲೆಗೆ ಬರುವ ಮೊದಲೇ ಮಕ್ಕಳು ಮಾತನಾಡುವುದನ್ನು ಕಲಿತಿರುತ್ತಾರೆ. ಬಣ್ಣಗಳನ್ನು ಗುರುತಿಸುತ್ತಾರೆ, ಸಂಬಂಧಗಳನ್ನು ಅರಿತಿರುತ್ತಾರೆ. ಹೀಗೆ ಶಾಲೆಗಳಲ್ಲಿ ಅನೇಕ ವರ್ಷಗಳೇ ಕಲಿಯಬೇಕಾಗಿದ್ದ ಸಾಮರ್ಥ್ಯಗಳು ಸಾಮಾಜಿಕ ಒಡನಾಟದ ಮಾತ್ರದಿಂದಲೇ ಸಂಭವಿಸಿರು ತ್ತವೆ. ತರಗತಿ ಕೋಣೆಯು ಹೊಸತನ್ನು ಕಲಿಯುವ ಕೌಶಲವನ್ನಷ್ಟೇ ಕಲಿಸಬೇಕಾಗಿರುತ್ತದೆ. ಆಟಗಳು, ಸೋಲು-ಗೆಲುವು ಪ್ರಯತ್ನಗಳು, ವಿಭಿನ್ನ ಮತ್ತು ವಿನೂತನ ಇಂದ್ರಿಯಾನುಭವಗಳು ಪುಟ್ಟ ಮಕ್ಕಳಲ್ಲಿ ಜ್ಞಾನ ರಚನೆಗೆ ನೆರವಾಗುತ್ತವೆ. ಓದು, ಬರಹ, ಅಂಕಗಣಿತದಂತಹ ಕೌಶಲಗಳ ಮೂಲಕ ಮೇಲಿನ ತರಗತಿ ಗಳ ಮಕ್ಕಳು ಅಮೂರ್ತ ಸಂಗತಿಗಳನ್ನು ಗ್ರಹಿಸಿ, ಹೊಸದನ್ನು ಕಲಿಯುತ್ತಾರೆ.

ಕೋವಿಡ್ ನಂತರದ ತರಗತಿಗಳಲ್ಲಿ, ಇಂಟರ್‌ನೆಟ್, ಟಿ.ವಿ.ಯ ಲಭ್ಯತೆಯಿರುವ ಮಕ್ಕಳಿಗೆ ಕೆಲವು ಅನುಭವಗಳು ದಕ್ಕಿದ್ದರೆ, ದಿನಸಿ ಅಂಗಡಿಗೆ ಕೆಲಸಕ್ಕೆ ಹೋಗಿದ್ದ ಮಕ್ಕಳಿಗೂ ಇದಕ್ಕಿಂತ ಭಿನ್ನವಾದ, ಆದರೆ ಅಮೂಲ್ಯವಾದ ಅನುಭವಗಳು ಲಭ್ಯವಾಗಿ ರುತ್ತವೆ. ನಮ್ಮ ಸವಾಲಿರುವುದು ನಷ್ಟವನ್ನು ಲೆಕ್ಕ ಹಾಕುವುದರಲ್ಲಲ್ಲ. ಈ ಸಮೃದ್ಧ ಅನುಭವಗಳನ್ನು ಗುರುತಿಸಲು ಸಾಧ್ಯವಾಗುವಂತಹ ತರಗತಿ ಕೋಣೆಯ ಸಂಸ್ಕಾರವನ್ನು ರೂಪಿಸುವಲ್ಲಿ. ಎಲ್ಲ ಬಗೆಯ ಕಲಿಕೆಯ ಅನುಭವಗಳನ್ನು ಹೊಂದಿರುವ ಮತ್ತು ವಿಭಿನ್ನ ವೇಗದಲ್ಲಿ ಕಲಿಯುತ್ತಿರುವ ಮಕ್ಕಳನ್ನು ಸ್ವೀಕರಿಸುವುದರಲ್ಲಿ!

ಬೇರೆ ಬೇರೆ ಹಣೆಪಟ್ಟಿಗಳ ಮೂಲಕ ಮಕ್ಕಳನ್ನು ನಿರಾಕರಿಸಲು ಆತುರ ತೋರುವ ಕಲಿಕೆಯ ಪರಿಸರವನ್ನು ಸಂವೇದನಾಶೀಲವಾಗಿಸುವ ಪ್ರಯತ್ನ ಅತ್ಯಂತ ತುರ್ತಿನದು. ತನ್ನನ್ನು ಅವಗಣಿಸುತ್ತಿಲ್ಲ ಮತ್ತು ತಾನು ಈ ತರಗತಿಗೆ ಸೇರಿದವಳಲ್ಲ ಎಂಬ ಯೋಚನೆ ಮಗುವಿಗೆ ಬಾರದಂತಹ ಕಲಿಕೆಯ ಪರಿಸರವನ್ನು ನಿರ್ಮಿಸಲು ದೊಡ್ಡ ಪ್ರಯತ್ನ ಬೇಕಿಲ್ಲ. ನಮ್ಮ ಯೋಚನಾಕ್ರಮದಲ್ಲಿ ಬದಲಾವಣೆ
ತರಬೇಕಾಗಿದೆ, ಅಷ್ಟೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.