ADVERTISEMENT

ಸಂಗತ | ಗಾಳಕ್ಕೆ ಸಿಲುಕುವುದು ಬೇಡ

ಮನದ ನೋವಿಗೆ ಮುಲಾಮು ಹಚ್ಚುವ ಕೆಲಸ ಮಾಡೋಣ

ರಾಜಕುಮಾರ ಕುಲಕರ್ಣಿ
Published 3 ಆಗಸ್ಟ್ 2022, 21:31 IST
Last Updated 3 ಆಗಸ್ಟ್ 2022, 21:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ರೋಡೆಂಟ್ ಜಾತಿಯ ಕೆಲವು ಪ್ರಾಣಿಗಳನ್ನು ಬಿಟ್ಟರೆ ಕಶೇರುಕ ವರ್ಗದ ಯಾವ ಪ್ರಾಣಿಯೂ ತನ್ನದೇ ವರ್ಗದ ಇನ್ನೊಂದು ಪ್ರಾಣಿಯನ್ನು ಅಭ್ಯಾಸ ಬಲದಿಂದ ಕೊಲ್ಲುವ ಉದಾಹರಣೆಯಿಲ್ಲ. ಕೊಲ್ಲುವ ಸುಖಕ್ಕಾಗಿಯೇ ಕೊಲ್ಲುವ ಪ್ರಾಣಿ ಮನುಷ್ಯನನ್ನು ಬಿಟ್ಟು ಇನ್ನೊಂದಿಲ್ಲ...’ ಎಂದುಮನೋವಿಶ್ಲೇಷಕ, ಲೇಖಕ ಆ್ಯಂಥೋನಿ ಸ್ಟೋರ್ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಿರುವ ಸರಣಿ ಹತ್ಯೆಗಳ ಬಗೆಗಿನ ವರದಿಗಳನ್ನು ಓದಿದಾಗ ಅವರ ಈ ಮಾತು ನೆನಪಾಯಿತು.

ಮನುಷ್ಯ ಮನುಷ್ಯನನ್ನೇ ಬೇಟೆಯಾಡುವ, ಕೊಲ್ಲುವ, ಹಿಂಸಿಸುವ, ಶೋಷಿಸುವ ಪ್ರವೃತ್ತಿ ಇಂದು ನಿನ್ನೆಯದಲ್ಲ. ಅನಾದಿ ಕಾಲದಿಂದಲೂ ಕಾಣಸಿಗುವ ಪ್ರವೃತ್ತಿ ಇದು. ಪ್ರೀತಿ, ಕರುಣೆ, ಅಂತಃಕರಣ ಇರಬೇಕಾದ ಜಾಗದಲ್ಲಿ ದ್ವೇಷ, ಸೇಡು, ಹಿಂಸೆ ವಿಜೃಂಭಿಸುತ್ತಿವೆ. ಮನುಷ್ಯ ಆಧುನಿಕನಾ
ದಂತೆಲ್ಲ ಅವನ ಬುದ್ಧಿ, ಭಾವಗಳು ಸಂಕುಚಿತಗೊಳ್ಳು ತ್ತಿವೆ. ಮನುಷ್ಯ ಸಂಬಂಧಗಳನ್ನು ತಕ್ಕಡಿಯಲ್ಲಿಟ್ಟು ಲಾಭ, ನಷ್ಟಗಳ ಲೆಕ್ಕಾಚಾರದಿಂದ ತೂಗಲಾಗುತ್ತಿದೆ. ಸಮಾಜದಲ್ಲಿ ಸಹಿಷ್ಣುತೆಯು ಮರೆಗೆ ಸರಿದಂತಿದೆ.

ಇನ್ನೊಬ್ಬರ ಮನಸ್ಸಿಗೆ ನೋವು ನೀಡುವ ಪ್ರವೃತ್ತಿ ಸಮಾಜದಲ್ಲಿ ಹೆಚ್ಚುತ್ತಿದೆ. ದೈಹಿಕ ನೋವಿಗಿಂತ ಮಾನಸಿಕ ನೋವು ಅತ್ಯಂತ ಅಪಾಯಕಾರಿ. ಮನುಷ್ಯ ತನ್ನ ದೇಹದ ಮೇಲಿನ ಗಾಯಗಳನ್ನು ಮರೆಯಬಹುದು. ಆದರೆ ಮನಸ್ಸಿಗಾಗುವ ಗಾಯ ಬೇಗ ಮಾಯುವಂತಹದ್ದಲ್ಲ. ಮನುಷ್ಯ, ನಗುವಿನ ಮುಖವಾಡದ ಹಿಂದೆ ಹಲ್ಲುಮಸೆತದ ಕ್ರೌರ್ಯವನ್ನು ಪ್ರದರ್ಶಿಸುತ್ತಿದ್ದಾನೆ.

ADVERTISEMENT

ಮನಶಾಸ್ತ್ರಜ್ಞ ಎರಿಕ್ ಬರ್ನ್ ಪರಿಚಯಿಸಿದ ‘ಟ್ರಾನ್ಸಾಕ್ಷನಲ್ ಅನ್ಯಾಲಿಸಿಸ್’ (Transactional Analysis) ಎನ್ನುವ ಪರಿಕಲ್ಪನೆಯು ಮನುಷ್ಯನೇ ಸೃಷ್ಟಿಸಿಕೊಂಡಿರುವ ಈ ಕ್ರೂರ ವ್ಯವಸ್ಥೆಯಲ್ಲಿ ಮನುಷ್ಯ ಮನುಷ್ಯನಂತೆ ಬದುಕುವುದನ್ನು ಹೇಳಿಕೊಡುತ್ತದೆ. ಈ ಪರಿಕಲ್ಪನೆ ಅನ್ವಯ ಮನುಷ್ಯ ಬೇರೆಯವರೊಂದಿಗೆ ಮಾತನಾಡುವ ಪೂರ್ವದಲ್ಲಿ ವರ್ತನೆ, ಆಲೋಚನೆ, ತನ್ನೊಳಗಿನ ಸಂಘರ್ಷ ಇವುಗಳ ಬಗ್ಗೆ ವಿಶೇಷ ಎಚ್ಚರ ವಹಿಸಬೇಕು ಎನ್ನುತ್ತಾರೆ ಮನೋವಿಜ್ಞಾನಿ ಗಳು. ಸಂಭಾಷಣೆಯ ಸಂದರ್ಭ ತನ್ನ ಮಾತು ಮತ್ತು ವರ್ತನೆ ಎದುರಿಗಿರುವ ವ್ಯಕ್ತಿಗೆ ನೋವನ್ನು ಉಂಟುಮಾಡದಂತೆ ಪೂರ್ವಸಿದ್ಧತೆಯೊಂದಿಗೆ ಮಾತಿಗಿಳಿಯುವುದೇ ‘ಟ್ರಾನ್ಸಾಕ್ಷನಲ್ಅನ್ಯಾಲಿಸಿಸ್’ನ ಪ್ರಮುಖ ಲಕ್ಷಣ. ನಾಗರಿಕತೆಯ ವೇಷ ತೊಟ್ಟು ಅನಾಗರಿಕರಂತೆ ಮನುಷ್ಯರು ವರ್ತಿಸುತ್ತಿರುವ ಇವತ್ತಿನ ದಿನಗಳಲ್ಲಿ ಎರಿಕ್‌ ಪರಿಚಯಿಸಿದ ಈ ಪರಿಕಲ್ಪನೆ ಬಗೆಗೆ ಅರಿಯುವುದು ಅಗತ್ಯ.

ನನ್ನ ಪರಿಚಯದ ಹಿರಿಯರೊಬ್ಬರು ಆಗಾಗ ಹೇಳುವ ಮಾತಿದು- ‘ನನ್ನ ಮನಸ್ಸಿಗೆ ನೋವಾದಾಗ ಅಥವಾ ಮಾಡಬೇಕೆಂದಿರುವ ಕೆಲಸದಲ್ಲಿ ಸೋಲು ಎದುರಾದಾಗ ನಾನು ಶಿವರಾಮ ಕಾರಂತರ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಕೃತಿಯನ್ನು ಓದುತ್ತೇನೆ. ನೋವು ಮತ್ತು ಸೋಲನ್ನು ಮೆಟ್ಟಿ ನಿಲ್ಲುವ ಶಕ್ತಿಯನ್ನು ಈ ಕೃತಿಯ ಓದು ನನಗೆ ತಂದು ಕೊಡುತ್ತದೆ...’ ಈ ಮಾತು, ಸಾಹಿತ್ಯಕ್ಕೆ ಇರುವ ಶಕ್ತಿಗೆ ಒಂದು ದೃಷ್ಟಾಂತ. ಅನುದಿನದ ಅಂತರಗಂಗೆಯಂತೆ ಸಾಹಿತ್ಯವು ಜನ ಮಾನಸದಲ್ಲಿ ಹಾಸುಹೊಕ್ಕಾಗಿ ಪ್ರವಹಿಸುತ್ತಲೇ ಇದೆ. ಅದಕ್ಕಾಗಿಯೇ ಓದು ಬಹು ಮುಖ್ಯ. ಅದನ್ನು ಎಲ್ಲರೂ ರೂಢಿಸಿಕೊಳ್ಳಬೇಕು.

ಸಾರ್ವಜನಿಕ ಜೀವನದಲ್ಲಿ ಟೀಕೆ– ಟಿಪ್ಪಣಿಗಳ ಗುಣ ಮಟ್ಟ ಕುಸಿದಿರುವುದಕ್ಕೆ ಓದಿನ ಕೊರತೆಯೂ ಒಂದು ಪ್ರಮುಖ ಕಾರಣ. ಶಾಸನಸಭೆ ಕಲಾಪದ ಗುಣಮಟ್ಟ ಕೆಟ್ಟಿರುವುದಕ್ಕೆ ಕೂಡ ಇದೇ ಕಾರಣ. ಭಾಷೆಗೆ ಇರುವ ಸೊಬಗು ಮತ್ತು ಘನತೆಯನ್ನು ಅರಿಯದವರು ಅದನ್ನು ಹೇಗೆ ಬೇಕಾದರೂ ಬಳಸಬಲ್ಲರು. ‘ನುಡಿದರೆ ಮುತ್ತಿನ ಹಾರದಂತಿರಬೇಕು...’ ಎನ್ನುವ ಬಸವಣ್ಣನವರ ವಚನವು ನಮ್ಮ ನುಡಿ ಹೇಗಿರಬೇಕು ಮತ್ತು ಮನುಷ್ಯ ಹೇಗೆ ಬಾಳಬೇಕು ಎನ್ನುವುದನ್ನು ಸೂಚಿಸುತ್ತದೆ. ದಿನಕರ ದೇಸಾಯಿ ಅವರ ‘ಹಚ್ಚುವುದಾದರೆ ದೀಪ ಹಚ್ಚು, ಬೆಂಕಿ ಹಚ್ಚಬೇಡ. ಆರಿಸುವುದಾದರೆ ಬೆಂಕಿ ಆರಿಸು, ದೀಪ ಆರಿಸಬೇಡ’ ಎಂಬ ಈ ಸಾಲು, ಬದುಕಿನ ಸಾರ್ಥಕ್ಯದ ಬಗೆಗೆ, ಬದುಕನ್ನು ಗ್ರಹಿಸುವ ದೃಷ್ಟಿಕೋನ ಹೇಗಿರಬೇಕು ಎಂಬುದರ ಕುರಿತು ಹೇಳುತ್ತದೆ.

ಕಾಮನ್‌ವೆಲ್ತ್‌ ಕ್ರೀಡಾಕೂಟ ನಡೆಯುತ್ತಿದೆ. ಅಲ್ಲಿನ ಆಟೋಟಗಳಿಂದ ಸ್ಫೂರ್ತಿ ಪಡೆಯೋಣ. ಮಕ್ಕಳನ್ನು ಆ ದಾರಿಯಲ್ಲಿ ನಡೆಯುವಂತೆ ಹುರಿ ದುಂಬಿಸೋಣ. ಕನ್ನಡದ ಸಿನಿಮಾಗಳು ರಾಷ್ಟ್ರಮಟ್ಟ ದಲ್ಲಿ ಸುದ್ದಿಯಾಗುತ್ತಿವೆ. ಒಳ್ಳೆಯ ಸಿನಿಮಾ ನೋಡಿ ಖುಷಿಪಡೋಣ. ರಾಜಕಾರಣವನ್ನು ಸಹನೀಯ
ಗೊಳಿಸಿದ ಮಹನೀಯರನ್ನು ನೆನೆದು ಅಂತಹವರಿಗಾಗಿ ಹುಡುಕೋಣ. ಇದು, ಈ ಕ್ಷಣದ ಅಗತ್ಯ.

‘ನಾವು ಎಷ್ಟೇ ಸಮರ್ಥಿಸಿಕೊಂಡರೂ ನಮ್ಮ ಬೈಗುಳಕ್ಕೆ- ದ್ವೇಷಕ್ಕೆ ಪಾತ್ರವಾದ ವ್ಯಕ್ತಿಯಾಗಲಿ, ವಸ್ತುವಾಗಲಿ ಜಗತ್ತಿನಲ್ಲಿ ಇಲ್ಲ. ದ್ವೇಷಕ್ಕೆ ಅಧಿಕಾರಿ ಇದ್ದಾನೆ, ವಸ್ತು ಇಲ್ಲ. ಇಲ್ಲಿ ಎಲ್ಲವೂ ಪ್ರೀತಿಗೆ ಯೋಗ್ಯವಾದದ್ದೇ ಪ್ರೀತಿಸುವ ತಾಕತ್ತು ನಮಗೆ ಇದ್ದಲ್ಲಿ’ ಎಂದಿರುವರು ಯಶವಂತ ಚಿತ್ತಾಲ. ರಾಜಕೀಯ ಲಾಭಕ್ಕಾಗಿ ಕೆಲವರು ಒಡಕಿನ ಬೀಜಗಳನ್ನು ಬಿತ್ತುತ್ತಾರೆ. ಚುನಾವಣೆ ಸಮೀಪಿಸುತ್ತಿರುವುದರಿಂದ ಇಂತಹ ರಾಜಕೀಯದಾಟಗಳು ಮತ್ತೂ ಹೆಚ್ಚಬಹುದು. ಮತ ಗಳಿಕೆಯ ಗಾಳಕ್ಕೆ ನಾವು ಸಿಲುಕುವುದು ಬೇಡ. ಮನದ ನೋವಿಗೆ ಮುಲಾಮು ಹಚ್ಚುವ ಕೆಲಸ
ಮಾಡೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.