ಉಪಗ್ರಹ ತರಬೇತಿ ಚಾನೆಲ್ ಆರಂಭ
ಬೆಂಗಳೂರು, ಫೆ. 23: ಇನ್ಸಾಟ್ 2ಬಿ ಉಪಗ್ರಹದ ವಿಶೇಷ ‘ತರಬೇತಿ ಮತ್ತು ಅಭಿವೃದ್ಧಿ ಸಂಪರ್ಕ ಚಾನೆಲ್’ ಒಂದನ್ನು ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ಇಂದು ದೆಹಲಿಯಲ್ಲಿ ನಡೆದ ವಿಶಿಷ್ಟ ಸಮಾರಂಭದಲ್ಲಿ ದೇಶಕ್ಕೆ ಸಮರ್ಪಿಸಿದರು.
ಏಕಕಾಲದಲ್ಲಿ ದೆಹಲಿ ಮತ್ತು ಬೆಂಗಳೂರಿನಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಬಳಿಕ ರಾಜ್ಯದ 19 ಜಿಲ್ಲಾ ಕೇಂದ್ರಗಳಲ್ಲಿ ‘ಆಲಿಸುತ್ತಿದ್ದ’ ಪಂಚಾಯಿತಿಯ ಚುನಾಯಿತ ಮಹಿಳಾ ಪ್ರತಿನಿಧಿಗಳು, ನೀರಾವರಿ ನಿರ್ವಹಣಾ ಕಾರ್ಯಕರ್ತರು, ಪ್ರಗತಿಪರ ರೈತರು ಹಾಗೂ ಆರೋಗ್ಯ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಹಾಗೂ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಮಾತನಾಡಿದರು.
ಉಪಗ್ರಹ ಸಂಪರ್ಕದ ಮೂಲಕ ಕಾರ್ಯಕ್ರಮ ವೀಕ್ಷಕರನ್ನು ಉದ್ದೇಶಿಸಿ ದೆಹಲಿಯ ‘ಇಸ್ರೊ’ ಕೇಂದ್ರದಿಂದ ಪ್ರಧಾನಿ ಅವರು, ನಗರದಲ್ಲಿ ವಿಶೇಷವಾಗಿ ಸಜ್ಜುಗೊಳಿಸಿದ್ದ ದೂರ ಸಂಪರ್ಕ ಇಲಾಖೆಯ ಸ್ಟುಡಿಯೊದಿಂದ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಅವರು ಮಾತನಾಡಿದರು.
ಬಡವರ ವೈದ್ಯ ವೆಚ್ಚಕ್ಕೆ ನೂರು ಕೋಟಿ ನಿಧಿ
ಬೆಂಗಳೂರು, ಫೆ. 23: ರಾಜ್ಯದ ಬಡ ಜನತೆಯ ವೈದ್ಯಕೀಯ ವೆಚ್ಚ ಭರಿಸಲು 100 ಕೋಟಿ ರೂಪಾಯಿಯ ಆವರ್ತನ ನಿಧಿ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಇಂದು ಪ್ರಕಟಿಸಿದರು.
ಹೃದಯ ಹಾಗೂ ಗಂಟಲು ರೋಗ ಶಸ್ತ್ರಚಿಕಿತ್ಸಕರ ಸಂಘ ಏರ್ಪಡಿಸಿದ್ದ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮೂತ್ರಪಿಂಡ ಜೋಡಣೆ, ಹೃದಯ ಶಸ್ತ್ರಚಿಕಿತ್ಸೆ ಮೊದಲಾದ ಕಾಯಿಲೆಗಳಿಂದ ಬಳಲುವ ರಾಜ್ಯದ ಬಡಜನತೆಯ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಈ ನಿಧಿಯಿಂದ ಭರಿಸಲಾಗುವುದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.