ನವದೆಹಲಿ, ಜುಲೈ 18– ಸುಮಾರು ರೂ. 800 ಕೋಟಿ ಅಂದಾಜು ವೆಚ್ಚದಲ್ಲಿ ಎಚ್ಎಂಟಿ ಕಾರ್ಖಾನೆಯ ಪುನರ್ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ.
ನಷ್ಟದಲ್ಲಿರುವ ಎಚ್ಎಂಟಿಯ ಕಾಯಕಲ್ಪದ ಬಗ್ಗೆ ಅಧ್ಯಯನ ನಡೆಸಲು ಸರ್ಕಾರ ರಚಿಸಿದ್ದ ಸಚಿವರ ತಂಡ ಇತ್ತೀಚೆಗೆ ನೀಡಿದ ಶಿಫಾರಸುಗಳನ್ನು ಇಂದು ಸಚಿವ ಸಂಪುಟ ಅಂಗೀಕರಿಸಿದೆ ಎಂದು ತಂಡದ ಸದಸ್ಯರಲ್ಲೊಬ್ಬರಾದ ಕೇಂದ್ರ ಸಂಸ್ಕೃತಿ ಸಚಿವ ಅನಂತಕುಮಾರ್ ಇಂದು ‘ಪ್ರಜಾವಾಣಿ’ಗೆ ತಿಳಿಸಿದರು.
ಪೌರ ಕಾರ್ಮಿಕರ ಮುಷ್ಕರ ಅಂತ್ಯ
ಬೆಂಗಳೂರು, ಜುಲೈ 18– ಕಳೆದ 18 ದಿನಗಳಿಂದ ರಾಜ್ಯದಾದ್ಯಂತ ಮುಷ್ಕರ ನಡೆಸುತ್ತಿರುವ ಪೌರ ಕಾರ್ಮಿಕರು ನಗರಾಭಿವೃದ್ಧಿ ಸಚಿವರ ಸಮ್ಮುಖದಲ್ಲಿ ಇಂದು ಆದ ಒಪ್ಪಂದಕ್ಕೆ ಅನುಸಾರವಾಗಿ ನಾಳೆಯಿಂದ ತಮ್ಮ ಮುಷ್ಕರವನ್ನು ವಾಪಸ್ ತೆಗೆದುಕೊಂಡು ಕೆಲಸಕ್ಕೆ ಹಾಜರಾಗಲು ನಿರ್ಧರಿಸಿದ್ದಾರೆ.
ಇಂದು ಸಂಜೆ 4ಗಂಟೆಯಿಂದ ಸುಮಾರು ಮೂರು ಗಂಟೆ, ಸಚಿವರಾದ ಬಿ.ಬಿ. ಚಿಮ್ಮನಕಟ್ಟಿ ಮತ್ತು ಮಲ್ಲಿಕಾರ್ಜುನ ನಾಗಪ್ಪ ಅವರು ತಮ್ಮ ಅಧಿಕಾರಿಗಳೊಂದಿಗೆ ರಾಜ್ಯ ಪೌರಸೇವಾ ನೌಕರರ ಸಂಘದ ಪ್ರತಿನಿಧಿಗಳ ಜೊತೆಗೆ ಮಾತುಕತೆ ನಡೆಸಿದರು.
ಅವರ 18 ಬೇಡಿಕೆಗಳ ಪೈಕಿ ಐದು ಬೇಡಿಕೆಗಳನ್ನು ಈಡೇರಿಸುವ ಕುರಿತು ಇಂದೇ ಆದೇಶವನ್ನು ಹೊರಡಿಸಲಾಗಿದ್ದು, ಅದಕ್ಕೆ ಅನುಸಾರವಾಗಿ ಮುಷ್ಕರವನ್ನು ಕೈಬಿಡಲು ನೌಕರರ ಪ್ರತಿನಿಧಿಗಳು ಒಪ್ಪಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.