
ರಾಜ್ಯದಲ್ಲಿ ಜನಗಣತಿ ಆರಂಭ
ಬೆಂಗಳೂರು, ಫೆ. 9– ರಾಷ್ಟ್ರೀಯ ಮಹತ್ವವುಳ್ಳ ಜನಗಣತಿ ಕಾರ್ಯವು ರಾಜ್ಯವ್ಯಾಪಿ ಇಂದು ಬೆಳಗ್ಗೆ ಆರಂಭವಾಯಿತು. ಎಲ್ಲ ಜನರ ಸ್ಥಿತಿಗತಿ ಬಗ್ಗೆ ವಿವರಗಳನ್ನು ಸಂಗ್ರಹಿಸುವ ಈ ಗಣತಿಯು ಈ ತಿಂಗಳ 28ರವರೆಗೆ ನಡೆಯಲಿದೆ.
ರಾಜಭವನದಲ್ಲಿ ರಾಜ್ಯಪಾಲರಾದ ವಿ.ಎಸ್. ರಮಾದೇವಿ ಹಾಗೂ ‘ಅನುಗ್ರಹ’ದಲ್ಲಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ತಮ್ಮ ತಮ್ಮ ಕುಟುಂಬದ ವಿವರಗಳನ್ನು ಉತ್ಸಾಹದಿಂದಲೇ ಗಣತಿ ಸಿಬ್ಬಂದಿಗೆ ತಿಳಿಸಿದರು. ಆ ಮೂಲಕ ಗಣತಿ ಕಾರ್ಯಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು.
ಅವಶೇಷಗಳ ಅಡಿಯಿಂದ ಹೊರಬಂದ ರೂ. 20 ಕೋಟಿ
ಬಚಾವ್, ಫೆ. 9– ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬಚಾವ್ ಶಾಖೆಯ ಕಟ್ಟಡದ ಅವಶೇಷಗಳಡಿ ಹೂತು ಹೋಗಿದ್ದ 20 ಕೋಟಿ ರೂಪಾಯಿಗಳನ್ನು ಹೊರ ತೆಗೆಯಲು ಸೇನೆ ನಿರಂತರ ಎಂಟು ಗಂಟೆಗಳ ಯಶಸ್ವಿ ಕಾರ್ಯಾಚರಣೆ ನಡೆಸಿತು.
ಸೈನಿಕರು ಭಗ್ನಾವಶೇಷಗಳನ್ನು ತೆರವುಗೊಳಿಸಿದರು. ಗೋದ್ರೆಜ್ ಕಂಪನಿಯ ಬೀಗ ತೆರೆಯುವ ಪರಿಣತರನ್ನು ಕರೆಯಿಸಿ ಭದ್ರತಾ ಕೋಣೆಯ ಬೀಗ ತೆರೆದು ಭಾರಿ ಮೊತ್ತ ಪಡೆಯಲಾಯಿತು. ಕಾರ್ಯಾಚರಣೆಯಲ್ಲಿ ಗ್ರಾಹಕರಿಗೆ ಸೇರಿದ ಮೂರು ಲಾಕರ್ಗಳನ್ನೂ ವಶಕ್ಕೆ ತೆಗೆದುಕೊಳ್ಳಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.