ಇಂದಿರಾ ಕೃತ್ಯ ತೀರಾ ಅಶಿಸ್ತಿನ ಅಕ್ಷಮ್ಯ ಅಪರಾಧ: ಎಸ್ಸೆನ್ ಆರೋಪ
ನವದೆಹಲಿ, ನ. 3– ‘ತೀರಾ ಅಶಿಸ್ತಿನ ಅಕ್ಷಮ್ಯ ವರ್ತನೆ’ಯನ್ನು ಶ್ರೀಮತಿ ಇಂದಿರಾ ಗಾಂಧಿ ಅವರು ಎಸಗಿದ್ದಾರೆಂದೂ ನವದೆಹಲಿಯಲ್ಲಿ ‘ಎ.ಐ.ಸಿ.ಸಿ.’ ವಿಶೇಷ ಅಧಿವೇಶನ ಕರೆಯುವ ಅವರ ನಿರ್ಧಾರ ಪಕ್ಷದ ಸಂವಿಧಾನದ ಸ್ಪಷ್ಟ ಉಲ್ಲಂಘನೆಯೆಂದೂ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರು ಆರೋಪಿಸಿದ್ದಾರೆ.
ಪ್ರಧಾನ ಮಂತ್ರಿಗಳ ಕಾರ್ಯ ಚಟುವಟಿಕೆಗಳು ಪಕ್ಷ ಹಾಗೂ ಸರ್ಕಾರದಲ್ಲಿ ‘ಏಕ ವ್ಯಕ್ತಿಯ ಆಡಳಿತ’ಕ್ಕೆ ಎಡೆಮಾಡಿಕೊಡುವುದೇ ಹೊರತು ಪ್ರಜಾಸತ್ತಾತ್ಮಕ ಸಮಾಜವಾದವನ್ನು ಬಲಪಡಿಸದೆಂದೂ ಶ್ರೀ ನಿಜಲಿಂಗಪ್ಪ ಆಪಾದಿಸಿದ್ದಾರೆ.
ಸಂಧಾನದ ಬಾಗಿಲಿಗೆ ಬೀಗಮುದ್ರೆ
ನವದೆಹಲಿ, ನ. 3– ಐಕಮತ್ಯಕ್ಕಾಗಿ ನಡೆಸಿದ ಪ್ರಯತ್ನ ವಿಫಲವಾಗಿದೆಯೆಂದು ಕಾಂಗ್ರೆಸ್ ಮುಖ್ಯಮಂತ್ರಿಗಳು ಪ್ರಕಟಿಸಿರುವುದರ ಜೊತೆಗೆ ಕಾಂಗ್ರೆಸ್ ಅಧ್ಯಕ್ಷ ಶ್ರೀ ನಿಜಲಿಂಗಪ್ಪ ಮತ್ತು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ನಡುವೆ ಉದ್ರಿಕ್ತ ಭಾವನೆಗಳ ಪತ್ರ ವಿನಿಮಯವಾಗಿರುವುದರಿಂದ ರಾಜಿ ಬಗೆಗೆ ನಿನ್ನೆಯವರೆಗೆ ಇದ್ದಂತಹ ಅಲ್ಪಸ್ವಲ್ಪ ನಂಬಿಕೆಯೂ ನಶಿಸಿತು.
ಎರಡು ಕಾಂಗ್ರೆಸ್ ಪಕ್ಷಗಳ ಉದಯ ಖಚಿತವೆನ್ನುವಂತೆಯೇ ಇಂದು ರಾತ್ರಿ ತೋರುತ್ತಿತ್ತು.ತಾವು ಅ. 28ರಂದು ಮತ್ತು ಇಂದು ಶ್ರೀಮತಿ ಗಾಂಧಿ ಅವರಿಗೆ ಬರೆದಿರುವ ಪತ್ರಗಳನ್ನು ಶ್ರೀ ನಿಜಲಿಂಗಪ್ಪನವರು ಬಹಿರಂಗಪಡಿಸಿದರು. ‘ಈ ಪತ್ರಗಳ ವೈಖರಿ ಎಷ್ಟು ಕಟುವಾಗಿ ಮತ್ತು ಸಂಧಾನ ಬಾಹಿರವಾಗಿದೆಯೆಂದರೆ ಇವುಗಳಿಂದ ಮಾತುಕತೆಯ ವಾತಾವರಣ ಇನ್ನೂ ಕಲುಷಿತಗೊಂಡಿದೆ’ ಎಂದು ಶ್ರೀ ಸುಖಾಡಿಯಾ ಹೇಳಲೇಬೇಕಾಯಿತು.
ಎಸ್ಸೆನ್ ವಿರುದ್ಧ ಇಂದಿರಾ ಆರೋಪ
ನವದೆಹಲಿ, ನ. 3– ಸಿಂಡಿಕೇಟ್ ಬುಡ ಭದ್ರಪಡಿಸುವ ತವಕದಲ್ಲಿ ಕಾಂಗ್ರೆಸ್ ಸಂಸ್ಥೆಯ ಅಂಗರಚನೆಯನ್ನು ಕಾಲಕಸ ಮಾಡಿದ್ದೀರಿ ಎಂದು ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಇಂದು ಕಾಂಗ್ರೆಸ್ ಅಧ್ಯಕ್ಷ ನಿಜಲಿಂಗಪ್ಪನವರನ್ನು ದೂಷಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.