ಮಹಾಜನ್ ಶಿಫಾರಸು ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಕರೆ
ಬೆಂಗಳೂರು, ಡಿ. 28– ಕೇಂದ್ರ ಸರ್ಕಾರ ಈಗಲಾದರೂ ‘ತಪ್ಪು ತಿದ್ದಿಕೊಂಡು’ ಮಹಾಜನ್ ಆಯೋಗದ ಶಿಫಾರಸುಗಳನ್ನೊಳಗೊಂಡ ವಿಧೇಯಕವನ್ನು ತಂದು ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಶಿಕ್ಷಣ ಸಚಿವರೂ ಸಭಾ ನಾಯಕರೂ ಆದ ಶ್ರೀ ಕೆ.ವಿ.ಶಂಕರಗೌಡರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.
ಶನಿವಾರ ಅರ್ಥ ಸಚಿವ ಶ್ರೀರಾಮಕೃಷ್ಣ ಹೆಗಡೆಯವರು ಮಂಡಿಸಿದ ಪ್ರಸ್ತಾಪದ ಮೇಲಿನ ಚರ್ಚೆಗೆ ಉತ್ತರ ನೀಡಿದ ಶ್ರೀ ಶಂಕರಗೌಡರು, ಗಡಿ ಆಯೋಗಗಳ ಶಿಫಾರಸುಗಳ ಸಂಬಂಧದಲ್ಲಿ ಕೇಂದ್ರ ಸರ್ಕಾರ ‘ಒಂದೊಂದು ರಾಜ್ಯಕ್ಕೆ ಒಂದೊಂದು ಅಳತೆಗೋಲು ಉಪಯೋಗಿಸುತ್ತಿರುವುದಕ್ಕಾಗಿ’ ವಿಷಾದಿಸಿದರು.
ಸಚಿವರ ಉತ್ತರದ ನಂತರ ಸಭೆಯು ಪ್ರಸ್ತಾಪವನ್ನು ಸರ್ವಾನುಮತದಿಂದ ಅಂಗೀಕರಿಸಿತು.
ಆಕಾಶವಾಣಿಯಲ್ಲಿ ಪಕ್ಷಗಳಿಗೆ ಪ್ರಚಾರಾವಕಾಶ
ನವದೆಹಲಿ, ಡಿ. 28– ಆಕಾಶವಾಣಿಯಲ್ಲಿ ಚುನಾವಣಾ ಪ್ರಚಾರ ಮಾಡುವುದಕ್ಕೆ ದೊರೆಯುವ ಕಾಲಾವಕಾಶ ಕುರಿತು ಮಾನ್ಯತೆ ಪಡೆದ ಎಲ್ಲ ರಾಜಕೀಯ ಪಕ್ಷಗಳ ನಾಯಕರಿಗೆ ಚುನಾವಣಾ ಆಯೋಗ ಪತ್ರ ಬರೆದಿದೆ.
ತಲಾ ಹತ್ತು ನಿಮಿಷಗಳ ಅವಧಿಯ ನಾಲ್ಕು ಬಾರಿ ಪ್ರಸಾರಕ್ಕೆ ಪ್ರತಿಯೊಂದು ಪಕ್ಷಕ್ಕೂ ಅನುಮತಿ ಕೊಡಲಾಗುವುದೆಂದು ಸೂಚಿಸಲಾಗಿದೆ.
ಆಯೋಗದ ಈ ಸಲಹೆಗೆ ಸಂಸ್ಥಾ ಕಾಂಗ್ರೆಸ್ ಮಾತ್ರ ಉತ್ತರ ಬರೆದಿದೆ. ಅಲ್ಲದೆ ಅದು ಈ ಸಲಹೆಯನ್ನು ತತ್ವಶಃ ಒಪ್ಪಿಕೊಂಡಿದ್ದರೂ ಕೆಲವು ಸ್ಪಷ್ಟೀಕರಣಗಳನ್ನು ಕೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.