
75 ವರ್ಷಗಳ ಹಿಂದೆ ಈ ದಿನ
ರಾಜಾ ತ್ರಿಭುವನ್ ಮತ್ತೆ ನೇಪಾಳ ಸಿಂಹಾಸನಕ್ಕೆ ನವದೆಹಲಿ, ಜ. 8– ರಾಜಾ ತ್ರಿಭುವನರು ಮುಂದೆಯೂ ನೇಪಾಳದ ರಾಜರಾಗಿರುವರೆಂದು ನೇಪಾಳದ ಪ್ರಧಾನಿ ಮಹಾರಾಜಾ ಮೋಹನ್ ಷಂಷೀರ್ಜಂಗ್ ಬಹದ್ದೂರರು ಖಟ್ಮುಂಡುವಿನಲ್ಲಿ ಪ್ರಕಟಿಸಿದರು.
1952ಕ್ಕಿಂತ ವಿಳಂಬವಾಗದಂತೆ ರಾಜ್ಯಾಂಗದ ಸಭೆಯೊಂದನ್ನು ಕರೆದು ಹದಿನಾಲ್ಕು ಮಂದಿಯನ್ನೊಳಗೊಂಡ ತಾತ್ಕಾಲಿಕ ಸಚಿವ ಸಂಪುಟವನ್ನು ಆದಷ್ಟು ಶೀಘ್ರವಾಗಿ ರಚಿಸಬೇಕೆಂಬ ನಿರ್ಧಾರವನ್ನೂ ಪ್ರಧಾನಿ ಘೋಷಿಸಿದರು.
ಮಧ್ಯಂತರ ಕಾಲದಲ್ಲಿ ರಚಿತವಾಗಬೇಕಾದ ತಾತ್ಕಾಲಿಕ ಸಚಿವ ಸಂಪುಟದಲ್ಲಿ ಏಳು ಮಂದಿ ಜನತಾ ಪ್ರತಿನಿಧಿಗಳಿರಬೇಕು. ಸಚಿವ ಸಂಪುಟವು ಜಂಟಿ ಜವಾಬ್ದಾರಿ ತತ್ತ್ವದ ಮೇಲೆ ಕಾರ್ಯ ನಿರ್ವಹಿಸಬೇಕು ಎಂದು ಏಳು ಪುಟಗಳಷ್ಟು ವಿಸ್ತಾರವಾಗಿರುವ ಘೋಷಣೆಯಲ್ಲಿ ತಿಳಿಸಲಾಗಿದೆ.
ಅತೃಪ್ತ ಪಾಕಿಸ್ತಾನಿಗಳ ಕಣ್ಣೊರೆಸುವ ಕುತಂತ್ರ
ಮುಂಬೈ, ಜ. 8– ಕಾಮನ್ವೆಲ್ತ್ ಪ್ರಧಾನಿಗಳ ಸಮ್ಮೇಳನದಲ್ಲಿ ಕಾಶ್ಮೀರ ಪ್ರಶ್ನೆ ಚರ್ಚೆಗೆ ಬರಬೇಕೆಂದು ಪ್ರಧಾನಿ ಲಿಯಾಕತ್ ಅಲಿಖಾನರು ಮಾಡಿದ ಪ್ರಯತ್ನ ಪಾಕಿಸ್ತಾನದ ಜನತೆಯ ವಿಶ್ವಾಸಗಳಿಸಲಿಕ್ಕಲ್ಲದೆ ಬೇರೆಯಲ್ಲ ಎಂಬುವುದಾಗಿ ಕಾಶ್ಮೀರ ಪ್ರಧಾನಿ ಶೇಖ್ ಮಹಮದ್ ಅಬ್ದುಲ್ಲಾರವರು ಮುಂಬೈನಲ್ಲಿ ತಿಳಿಸಿದರು.
ಪಾಕಿಸ್ತಾನದ ಪ್ರಸ್ತುತ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳು ಪಾಕಿಸ್ತಾನದ ಜನತೆಯಲ್ಲಿ ತೀವ್ರವಾದ ಅತೃಪ್ತಿ ಮತ್ತು ಅಸಮಾಧಾನ ಉಂಟು ಮಾಡಿವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.