ಬೆಂಗಳೂರು, ಜುಲೈ 25– ಗ್ರಾಮೀಣ ಕೃಪಾಂಕ ನೀಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ತಲೆದೋರಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ಈ ತಿಂಗಳು 31ರ ನಂತರ ಸಂದರ್ಶನಗಳನ್ನು ಮುಂದುವರಿಸಬಾರದು ಎಂದು ರಾಜ್ಯ ಸರ್ಕಾರ ಅಭಿಪ್ರಾಯಪಟ್ಟಿದೆ.
ಈ ಅವಧಿಯ ನಂತರ ಆಯೋಗವು ಭರ್ತಿ ಮಾಡಲಿರುವ ಹುದ್ದೆಗಳ ಅಗತ್ಯತೆ ಕುರಿತು ಈಗಾಗಲೇ ರಾಜ್ಯ ಸರ್ಕಾರವು ಲೋಕಸೇವಾ ಆಯೋಗಕ್ಕೆ ಸಲ್ಲಿಸಿರುವ ಕೋರಿಕೆಯನ್ನು ಅಮಾನತಿನಲ್ಲಿ ಇಡಲು ಉದ್ದೇಶಿಸಲಾಗಿದೆ ಎಂದು ವಾರ್ತಾ ಸಚಿವ ಪ್ರೊ.ಬಿ.ಕೆ. ಚಂದ್ರಶೇಖರ ಇಂದು ರಾತ್ರಿ ತಿಳಿಸಿದರು.
ಕಡುಬಡವರಿಗೆ ಕಡಿಮೆ ದರದಲ್ಲಿ ಅಕ್ಕಿ, ಗೋಧಿ
ಬೆಂಗಳೂರು, ಜುಲೈ 25– ರಾಜ್ಯದ ಬಡತನ ರೇಖೆಗಿಂತ ಕೆಳಗಿರುವ ಸುಮಾರು 30 ಲಕ್ಷ ಕುಟುಂಬಗಳಿಗೆ ರೂ. 3.50ಕ್ಕೆ ಒಂದು ಕೆ.ಜಿಯಂತೆ ಎಂಟು ಕೆ.ಜಿ ಅಕ್ಕಿ ಮತ್ತು ರೂ. 2.75ರಂತೆ ಎರಡು ಕೆ.ಜಿ ಗೋಧಿಯನ್ನು ಮಾರಾಟ ಮಾಡಲು ರಾಜ್ಯ ಸಚಿವ ಸಂಪುಟ ಇಂದು ನಿರ್ಧರಿಸಿತು.
ಸಚಿವ ಸಂಪುಟ ಸಭೆಯ ನಂತರ ಗ್ರಾಮೀಣಾಭಿವೃದ್ಧಿ ಸಚಿವ ಎಂ.ವೈ. ಘೋರ್ಪಡೆ ಈ ವಿಚಾರವನ್ನು ತಿಳಿಸಿ, ಇನ್ನು ಹತ್ತು ಕೆ.ಜಿ ಧಾನ್ಯವನ್ನು ಅವರು ಹೊಸ ದರದಲ್ಲಿ ಖರೀದಿಸಬೇಕಾಗುತ್ತದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.