
75 ವರ್ಷಗಳ ಹಿಂದೆ ಈ ದಿನ
ಸೋಮವಾರ, 19–02–1951
ಕಾನಪುರ, ಫೆ. 18– ಕಾಂಗ್ರೆಸ್ಸಿಗರು ಪರಸ್ಪರ ದ್ವೇಷಾಸೂಯೆ ಮತ್ತು ಸಣ್ಣಪುಟ್ಟ ಜಗಳಗಳನ್ನು ತ್ಯಜಿಸಿ, ಕಾಂಗ್ರೆಸ್ ಸಂಸ್ಥೆಯನ್ನು ಅದು ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ಸಾಧಿಸಿದ್ದಂತಹ ಮಹತ್ತರ ಸ್ಥಾನಕ್ಕೇರಿಸಲು ಒಗ್ಗಟ್ಟಿನಿಂದಲೂ ನಿಸ್ಪೃಹತೆಯಿಂದಲೂ ದುಡಿಯಬೇಕೆಂದು ಮಹಾ ಪ್ರಧಾನಿ ನೆಹರೂರವರು ಕಾನಪುರದ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ತಿಳಿಸಿದರು.
ನೆಹರೂ ಮುಂದುವರಿದು ‘ಸದ್ಯಕ್ಕೆ ದೇಶದಲ್ಲಿ ಕಾಂಗ್ರೆಸ್ಸಿಗೆ ಬದಲಾಗಿ ಆ ಸ್ಥಾನವನ್ನು ವಹಿಸಲು ಶಕ್ತಿಯುಳ್ಳ ಸಂಸ್ಥೆ ಬೇರೊಂದಿಲ್ಲ. ನಮಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಆ ಮಹಾತ್ಮನ ಹೆಸರಿಗೆ ಕಳಂಕ ತರದಂತೆ ನಮ್ಮ ಸಂಸ್ಥೆಯನ್ನು ಬೆಳೆಸಬೇಕು’ ಎಂದು ನುಡಿದರು.
‘ಸ್ವಾತಂತ್ರ್ಯ ತಂದ ಕಾಂಗ್ರೆಸ್ಸಿನ ಕೆಲಸವಿನ್ನೂ ಮುಗಿದಿಲ್ಲ. ದೀನದಲಿತರ ಉದ್ಧಾರವೇ ಆ ಕಾರ್ಯ. ಈ ಕೆಲಸ ಸಾಧಿಸಲು ಎಲ್ಲರೂ ಉತ್ಸಾಹಪೂರಿತ ಒಗ್ಗಟ್ಟಿನಿಂದ ದುಡಿಯಬೇಕು. ಗಾಂಧೀಜಿಯವರ ರಚನಾತ್ಮಕ ಕಾರ್ಯಗಳಿಗೆ ಹೆಚ್ಚು ಗಮನವೀಯಬೇಕು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.