ರಾಜ್ಯಗಳ ವಿಭಜನೆ ಸಲ್ಲ ಐಕ್ಯಭಂಗದ ವಿರುದ್ಧ ಎಸ್ಸೆನ್ ಎಚ್ಚರಿಕೆ
ಬೆಂಗಳೂರು, ಫೆ. 6– ‘ರಾಜ್ಯಗಳನ್ನು ಇಬ್ಭಾಗ ಮಾಡುವ ಯತ್ನ ಇನ್ನು ಸಾಕು’ ಎಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ನುಡಿದರು.
ಅದರಿಂದ ರಾಷ್ಟ್ರೀಯ ಐಕ್ಯಕ್ಕೆ ಭಂಗ ಬಂದೀತೆಂದು ಎಚ್ಚರಿಸಿದ ಅವರು ‘ಇನ್ನು ಹೊಸ ರಾಜ್ಯಗಳನ್ನು ನಿರ್ಮಿಸುವ ಪ್ರಮೇಯವೇ ಇಲ್ಲ. ದೇಶದ ಹಿತದೃಷ್ಟಿಯಿಂದ ಅದಕ್ಕೆ ಅವಕಾಶ ನೀಡುವುದು ಸರಿಯಲ್ಲ’ ಎಂದು
ಹೇಳಿದರು.
ದಕ್ಷಿಣದಲ್ಲಿ ಸಂಸತ್: ದೆಹಲಿ ವರದಿ ಸರಿಯಲ್ಲ– ಕೆಂಗಲ್
ಬೆಂಗಳೂರು, ಫೆ. 6– ದಕ್ಷಿಣದಲ್ಲಿ ಸಂಸತ್ ಅಧಿವೇಶನ ಸಾಧ್ಯವಿಲ್ಲ ಎಂಬುದು ಶ್ರೀ ರಾಣೆ ಸಮಿತಿಯ ಒಟ್ಟು ಅಭಿಪ್ರಾಯವಾಗಿದೆ ಎಂಬ ದೆಹಲಿ ವರದಿಯನ್ನು ಸರಿಯಾದುದಲ್ಲ ಎಂದು ನಿರಾಕರಿಸಿದ, ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಶ್ರೀ ಕೆಂಗಲ್ ಹನುಮಂತಯ್ಯ ಅವರು ‘ಈ ಪ್ರಶ್ನೆ ಇನ್ನೂ ಪರಿಶೀಲನೆಯ ಘಟ್ಟದಲ್ಲಿದೆ’ ಎಂದಿದ್ದಾರೆ.
‘ಮಾರ್ಚ್ 25ರಂದು ಸಮಿತಿಯು ಸಭೆ ಸೇರಲಿದ್ದು, ಅದರಲ್ಲಿ ಮತ್ತೆ ಈ ಬಗ್ಗೆ ಚರ್ಚೆ ನಡೆಯಲಿದೆ. ಅದಾದ ಮೇಲೆ ಸ್ಪಷ್ಟ ಚಿತ್ರ ತಿಳಿದೀತು’ ಎಂದು ತಿಳಿಸಿದ್ದಾರೆ.
ವರುಣಾ ನಾಲೆ: ಮಂಡ್ಯದಲ್ಲಿ ಭಾರಿ ವಿರೋಧ
ಮಂಡ್ಯ, ಫೆ. 6– ಮಂಡ್ಯ ಜಿಲ್ಲಾ ರೈತರಿಗೆ ‘ವಿನಾಶಕಾರಿ’ ವರುಣಾ ನಾಲೆ ನಿರ್ಮಾಣದ ವಿರುದ್ಧ ಐವರು ನ್ಯಾಯವಾದಿಗಳು ನಿನ್ನೆ ಜಿಲ್ಲಾ ಕಚೇರಿ ಮುಂದೆ ಆರಂಭಿಸಿದ್ದ ಉಪವಾಸ ಮುಷ್ಕರವನ್ನು ಇಂದು ಬೆಳಿಗ್ಗೆ 11 ಗಂಟೆಗೆ ಮುಕ್ತಾಯಗೊಳಿಸಿದರು.
ಹೆಚ್.ಕೆ. ವೀರಣ್ಣಗೌಡ ಅವರು ಸತ್ಯಾಗ್ರಹಿಗಳಿಗೆ ಪುಷ್ಪಹಾರಗಳನ್ನು ಹಾಕಿ ಹಣ್ಣಿನ ರಸ ನೀಡಿದರು. ನ್ಯಾಯವಾದಿಗಳಾರೂ ಇಂದು ಕೋರ್ಟಿಗೆ ಹೋಗಲಿಲ್ಲ.
ಪಾಕಿಸ್ತಾನಿಗಳ ಅತೃಪ್ತಿ ಅಯೂಬ್ಗೆ ಭಾರೀ ಸವಾಲು
ನವದೆಹಲಿ, ಫೆ. 6– ಪಾಕಿಸ್ತಾನದ ಜನತೆಯಲ್ಲಿರುವ ಈಗಿನ ಅಸಂತೃಪ್ತಿ ಅಪರಿಮಿತವಾಗಿದೆ. ಅಧ್ಯಕ್ಷ ಅಯೂಬ್ ಖಾನರ ಅಧಿಕಾರಕ್ಕೆ ಒಡ್ಡಿರುವ ಈ ಸವಾಲನ್ನು ಅವರು ನಿವಾರಿಸಿಕೊಳ್ಳಬಲ್ಲರೆಂದು ಭರವಸೆ ಹೇಳಲು ಬರುವಂತಿಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.