ಬೆಂಗಳೂರು, ಅ. 19– ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬಡ ಕೂಲಿಕಾರ ಮಹಿಳೆಗೆ ನಂತರ ಗಂಡು ಮಗು ಆಗಿದ್ದು, ಈಗ ಆಕೆ ಮಗುವಿನ ಪಾಲನೆ, ವಿದ್ಯಾಭ್ಯಾಸ ಮತ್ತಿತರ ಖರ್ಚನ್ನು ಸಂಬಂಧಪಟ್ಟ ವೈದ್ಯರು ಭರಿಸುವಂತೆ ಆದೇಶಿಸಬೇಕೆಂದು ಕೋರಿ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಕಲ್ಮನೆ ಗ್ರಾಮದ ನಾಗೇಂದ್ರಾಚಾರಿ ಅವರ ಪತ್ನಿ ಮಂಜುಳಾ ರಿಟ್ ಅರ್ಜಿ ಸಲ್ಲಿಸಿದವರು. ಕೃಷಿ ಕಾರ್ಮಿಕರಾದ ತಮಗೆ ಎರಡು ಹೆಣ್ಣು, ಒಂದು ಗಂಡು ಮಗುವಿದೆ. ಅವರನ್ನು ಸಾಕುವುದು ಕಷ್ಟವಾಗಿರುವುದರಿಂದ ಇನ್ನು ಮಕ್ಕಳು ಬೇಡ ಎಂಬ ತೀರ್ಮಾನಕ್ಕೆ ಬಂದು ಶಿಕಾರಿಪುರದ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ 1998ನೇ ಜನವರಿ 7ರಂದು ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದುದಾಗಿ ವಾದಿಸಿದ್ದಾರೆ.
ನವದೆಹಲಿ, ಅ. 19– ಗಾಜನೂರಿನಲ್ಲಿದ್ದಾಗ ರಾಜ್ಕುಮಾರ್ ಅವರಿಗೆ ಸೂಕ್ತ ಭದ್ರತೆ ನೀಡುವಲ್ಲಿ ವಿಫಲವಾಗಿರುವ ತಮಿಳುನಾಡು ಸರ್ಕಾರದ ಕ್ರಮ ‘ಅಕ್ಷಮ್ಯ’ ಎಂದು ಸುಪ್ರೀಂ ಕೋರ್ಟ್ ಇಂದು ತರಾಟೆಗೆ ತೆಗೆದುಕೊಂಡು ಟಾಡಾ ಕೈದಿಗಳ ಬಿಡುಗಡೆಗೆ ಸದ್ಯಕ್ಕೆ ಅವಕಾಶವಿಲ್ಲ ಎಂಬ ಇಂಗಿತ ವ್ಯಕ್ತಪಡಿಸಿತು.
ಟಾಡಾ ಕೈದಿಗಳ ಬಿಡುಗಡೆಯನ್ನು ಪ್ರಶ್ನಿಸಿ ಸಲ್ಲಿಸಲಾದ ವಿಶೇಷ ಮನವಿ ಅರ್ಜಿ ಮತ್ತು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿರುವ ನ್ಯಾಯಮೂರ್ತಿಗಳಾದ ಎಸ್.ಪಿ. ಭರೂಚಾ, ಡಿ.ಪಿ. ಮಹಾಪಾತ್ರ ಮತ್ತು ವೈ.ಕೆ. ಸಬರ್ವಾಲಾ ಅವರನ್ನು ಒಳಗೊಂಡ ನ್ಯಾಯಪೀಠ, ‘ರಾಜ್ಕುಮಾರ್ ಅವರಿಗೆ ಭದ್ರತೆ ನೀಡದ ತಮಿಳುನಾಡು ಸರ್ಕಾರದ ಕ್ರಮ ಅಕ್ಷಮ್ಯ’ ಎಂದು ಹೇಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.