ADVERTISEMENT

ಸೋಮವಾರ, 23–6–1969

​ಪ್ರಜಾವಾಣಿ ವಾರ್ತೆ
Published 22 ಜೂನ್ 2019, 19:45 IST
Last Updated 22 ಜೂನ್ 2019, 19:45 IST
   

ತೆಲಂಗಾಣ ಬಿಕ್ಕಟ್ಟು: ಒಂದೆರಡು ದಿನಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ನಾಯಕರ ಆಗ್ರಹ

ನವದೆಹಲಿ, ಜೂನ್ 22– ತೆಲಂಗಾಣ ಜನರ ಮೇಲೆ ಪರಿಣಾಮವನ್ನುಂಟು ಮಾಡುವಂತಹ ಕ್ರಮವೊಂದನ್ನು ಕೇಂದ್ರವು ಕೈಗೊಂಡರೆ ಮಾತ್ರ ತೆಲಂಗಾಣ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಮಾತುಕತೆಯನ್ನು ಮುಂದುವರಿಸುವುದು ಸಾಧ್ಯ ಎಂದು ತೆಲಂಗಾಣದ ನಾಲ್ವರು ನಾಯಕರೂ ಕಾಂಗ್ರೆಸ್ ಅಧ್ಯಕ್ಷ ಶ್ರೀ ನಿಜಲಿಂಗಪ್ಪನವರಿಗೆ ಸ್ಪಷ್ಟಪಡಿಸಿದ್ದಾರೆ.

ತೆಲಂಗಾಣದ ಬಂಡಾಯಗಾರ ಕಾಂಗ್ರೆಸ್ ನಾಯಕರೊಡನೆ ಮಾತುಕತೆ ಮುಂದುವರೆಸಲು ಉಪಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಅಥವಾ ಶ್ರೀ ಕಾಮರಾಜರನ್ನು ಹೈದರಾಬಾದಿಗೆ ಕಳುಹಿಸುವ ನಿರೀಕ್ಷೆ ಇದೆಯೆಂದು ಯು.ಎನ್.ಐ. ವರದಿ ತಿಳಿಸಿದೆ.

ADVERTISEMENT

ಅದ್ಭುತಗಳನ್ನು ಸಾಧಿಸಬಲ್ಲ ತಜ್ಞರು ನಮ್ಮಲ್ಲಿರುವಾಗ ಆಮದು ಇನ್ನು ಸಾಕು

ಬೆಂಗಳೂರು, ಜೂನ್ 22– ‘ಭಾರತೀಯ ಎಂಜಿನಿಯರುಗಳು, ವಿಜ್ಞಾನಿಗಳು ಹಾಗೂ ತಂತ್ರಜ್ಞರು ಪವಾಡಗಳನ್ನೇ ಸಾಧಿಸಬಲ್ಲರು. ಆದರೆ ನಾಡು ಅವರಲ್ಲಿ ನಂಬಿಕೆ ವಿಶ್ವಾಸವಿಟ್ಟು ಉತ್ತೇಜನ ನೀಡಬೇಕಾಗಿದೆ’ ಎಂದು ಖ್ಯಾತ ಎಂಜಿನಿಯರ್ ಹಾಗೂ ಕೈಗಾರಿಕೋದ್ಯಮಿ ಶ್ರೀ ಟಿ.ಆರ್. ಗುಪ್ತ ಅವರು ಇಂದು ಇಲ್ಲಿ ನುಡಿದರು.

ಭಾರತೀಯ ಇನ್‌ಸ್ಟಿಟೂಷನ್ ಆಫ್ ಎಂಜಿನಿಯರ್ಸ್‌ನ ಅಧ್ಯಕ್ಷರಾದ ಶ್ರೀ ಗುಪ್ತ ಅವರು ಯಾವುದೇ ರಾಷ್ಟ್ರತಂತ್ರಜ್ಞರು ವಿಜ್ಞಾನಿಗಳಿಲ್ಲದೆ ಪ್ರಗತಿ ಸಾಧಿಸಲು ಸಾಧ್ಯವಿಲ್ಲವೆಂದೂ ಆದರೆ ಅವರಿಗೆ ಕ್ರಿಯಾತ್ಮಕ ಚಟುವಟಿಕೆಗಳಿಗೆ ಸೂಕ್ತ ಸನ್ನಿವೇಶ ಕಲ್ಪಿಸುವುದು ರಾಷ್ಟ್ರದ ಹೊಣೆಗಾರಿಕೆಯೆಂದೂ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಅನುಮತಿಗಿಂತ ಹೆಚ್ಚು ಉತ್ಪಾದನೆ ಮಾಡುತ್ತಿರುವ ಕೈಗಾರಿಕೆಗಳಿಗೆ ನೋಟೀಸ್

ನವದೆಹಲಿ, ಜೂನ್ 22– ಲೈಸನ್ಸ್‌ನಲ್ಲಿ ನಮೂದಿಸಿರುವ ಸಾಮರ್ಥ್ಯಕ್ಕಿಂತ ಹೆಚ್ಚು ಉತ್ಪಾದನೆಯನ್ನು ಮಾಡುತ್ತಿರುವ ಅನೇಕ ಪ್ರಮುಖ ಕೈಗಾರಿಕಾ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರವು ಆ ಸಂಸ್ಥೆಗಳಿಗೆ ಷೋಕಾಸ್ ನೋಟೀಸ್ ಇತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.