ಹೊಸ ಪ್ರಧಾನಿಯನ್ನು ಕರುಣಿಸೈ ವೆಂಕಟೇಶ್ವರಾ!
ತಿರುಪತಿ, ಜುಲೈ 21– ‘ಈ ದೇಶಕ್ಕೊಬ್ಬರು ಹೊಸ ಪ್ರಧಾನಿ ದೊರೆಯುವಂತೆ ಆಶೀರ್ವಾದ ಮಾಡಪ್ಪಾ’ ಎಂದು ಸಂಸ್ಥಾ ಕಾಂಗ್ರೆಸ್ಸಿನ ಅಧ್ಯಕ್ಷ ಶ್ರೀ ಎಸ್.ನಿಜಲಿಂಗಪ್ಪನವರು ಇಂದು ತಿರುಪತಿ ವೆಂಕಟೇಶ್ವರ ಸ್ವಾಮಿಯನ್ನು ಪ್ರಾರ್ಥಿಸಿಕೊಂಡರು.
ಮುಂದಿನ ಪ್ರಧಾನಿ ಯಾರು ಎಂಬುದನ್ನು ತಿರುಪತಿಯಲ್ಲಿ ನಿರ್ಧರಿಸಲಾಗುವುದೆಂದು ಅವರು ಪ್ರಕಟಿಸಿದರು.
ತಮ್ಮ ಪ್ರಥಮ ಸಂಯುಕ್ತ ಸಭೆ ಇಲ್ಲಿ ನಡೆದುದು ಶುಭ ಸೂಚನೆಯೆಂದು ದಕ್ಷಿಣ ಪ್ರದೇಶ ಕಾಂಗ್ರೆಸ್ ಸಮಿತಿಗಳ ಮುಕ್ತಾಯ ಅಧಿವೇಶನದಲ್ಲಿ ನುಡಿದ ಅವರು, ‘ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ದೈವಕೃಪೆಯಿಂದ ನಾವು ಆರಿಸಿದ್ದು ಇಲ್ಲಿಯೇ. ಅವರು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದರು. ಆದರೆ ದುರದೃಷ್ಟವಶಾತ್ ಶ್ರೀಮತಿ ಇಂದಿರಾ ಗಾಂಧಿ ಅವರನ್ನು ಆಯ್ಕೆ ಮಾಡಿದಾಗ ನಾವು ಇಲ್ಲಿಗೆ ಬರಲಿಲ್ಲ. ಹೊಸಪ್ರಧಾನಿಯೊಬ್ಬರನ್ನು ಆಯ್ಕೆ ಮಾಡಲು ವೆಂಕಟೇಶ್ವರ ಸ್ವಾಮಿಯ ಆಶೀರ್ವಾದ
ದೊಡನೆ ನಾವು ಬೇಗನೆ ಹಿಂತಿರುಗಿ ಬರುತ್ತೇವೆ’ ಎಂದರು.
‘ಖಾಸಗಿ ಶಾಲೆಗೆ ಅಕ್ರಮ ಕಾಣಿಕೆ ಸಲ್ಲಿಸಬೇಡಿ’
ಬೆಂಗಳೂರು, ಜುಲೈ 21– ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವ ಪಾಲಕರು ಯಾವುದೇ ರೀತಿಯ ‘ಅಕ್ರಮ ಕಾಣಿಕೆ’ ಅಥವಾ ಅಧಿಕೃತ ಒಪ್ಪಿಗೆಯಿಲ್ಲದಿರುವ ಫೀಸುಗಳನ್ನು ಕೊಡಬಾರದು ಎಂದು ರಾಜ್ಯ ಶಿಕ್ಷಣ ಇಲಾಖೆಯು ಸೂಚಿಸಿದೆ.
ಈ ರೀತಿ ಕಾಣಿಕೆ ಅಥವಾ ಫೀಸುಗಳನ್ನು ಕೇಳುವ ಶಾಲೆಗಳಿದ್ದರೆ ತಕ್ಷಣ ಅದನ್ನು ಸರ್ಕಾರದ ಗಮನಕ್ಕೆ ತರಬೇಕು ಎಂದು ಪ್ರಕಟಣೆಯೊಂದು ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.