
ನೀರು ಬಳಕೆದಾರರ ಸಹಕಾರ ಸಂಘ ಮಸೂದೆಗೆ ಒಪ್ಪಿಗೆ
ಬೆಂಗಳೂರು, ನ. 14– ರಾಜ್ಯದಾದ್ಯಂತ ನೀರು ಬಳಕೆದಾರರ ಸಹಕಾರ ಸಂಘಗಳನ್ನು ಅಸ್ತಿತ್ವಕ್ಕೆ ತರಲು ಅವಕಾಶ ಕಲ್ಪಿಸುವ ಕರ್ನಾಟಕ ನೀರಾವರಿ ಮತ್ತು ಇತರ ಕೆಲವು ಕಾನೂನು (ತಿದ್ದುಪಡಿ) ಮಸೂದೆಯನ್ನು ವಿಧಾನಸಭೆ ಅಂಗೀಕರಿಸಿತು.
ಈಗಾಗಲೇ, ಈ ಮಸೂದೆಯು ಸುಗ್ರೀವಾಜ್ಞೆ ರೂಪದಲ್ಲಿ ಜಾರಿಯಲ್ಲಿದೆ.
ಪ್ರತಿಯೊಬ್ಬ ಅಚ್ಚುಕಟ್ಟುದಾರನೂ (ನೀರಿನ ಬಳಕೆದಾರ) ಈ ಸಹಕಾರ ಸಂಘಗಳ ಸದಸ್ಯನಾಗುವ ಹಕ್ಕನ್ನು ಹೊಂದಿರುತ್ತಾನೆ. ಪರಿಶಿಷ್ಟ ಜಾತಿ ಮತ್ತು ವರ್ಗದ ಸದಸ್ಯರ ಷೇರು ಹಣವನ್ನು ಸರ್ಕಾರವೇ ತುಂಬುತ್ತದೆ ಎಂದು ಭಾರಿ ನೀರಾವರಿ ಸಚಿವ ಎಚ್.ಕೆ. ಪಾಟೀಲ ಅವರು ಮಾಹಿತಿ ನೀಡಿದರು.
_____________________
ಪಾಲಿಕೆ: ಕುರ್ಚಿಗಾಗಿ ಕಿತ್ತಾಟ
ಹುಬ್ಬಳ್ಳಿ, ನ. 14– ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಸೇವೆಯಿಂದ ಈಗಾಗಲೇ ಬಿಡುಗಡೆ ಹೊಂದಿರುವ ಹಿಂದಿನ ಆರೋಗ್ಯಾಧಿಕಾರಿ ಡಾ. ಹೀರಾ ರಾಯ್ಕರ್ ಅವರು, ಮತ್ತೆ ಆರೋಗ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳುವ ಪ್ರಕರಣ ಎರಡನೆ ದಿನವಾದ ಇಂದೂ ಮುಂದುವರಿಯಿತು.
ಆರೋಗ್ಯಾಧಿಕಾರಿ ಹುದ್ದೆಯನ್ನು ವಹಿಸಿಕೊಳ್ಳಲು ಅನುಮತಿ ನೀಡುವವರೆಗೆ ತಾವು ವಿರಮಿಸುವುದಿಲ್ಲ ಎಂದು ಸ್ಪಷ್ಟವಾಗಿ ಪಾಲಿಕೆಯ ಆಯುಕ್ತರಿಗೆ ತಿಳಿಸಿರುವ ರಾಯ್ಕರ್ ಅವರು, ಈ ಹುದ್ದೆಯಲ್ಲಿ ಮುಂದುವರಿಯಲು ರಾಜ್ಯದ ಆಡಳಿತ ನ್ಯಾಯಮಂಡಳಿ ಆದೇಶದ ಬೆಂಬಲ ತಮಗಿದೆ ಎಂದು ಹೇಳಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.