ADVERTISEMENT

ವಾಚಕರ ವಾಣಿ: ಮಕ್ಕಳು ಶಾಲೆಯಲ್ಲಿ ಸುರಕ್ಷಿತವಾಗಿರಲಿ!

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 19:31 IST
Last Updated 21 ಸೆಪ್ಟೆಂಬರ್ 2020, 19:31 IST

ವಿದ್ಯಾಗಮ ಕಾರ್ಯಕ್ರಮವು ಈ.ಬಸವರಾಜ್ ಅವರು ಹೇಳಿರುವಂತೆ (ಸಂಗತ, ಸೆ. 19) ನಿಜಕ್ಕೂ ಸರ್ಕಸ್‌ನಂತೆಯೇ ಆಗಿದೆ. ಎಲ್ಲ ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲೂ 6ರಿಂದ 12ನೇ ತರಗತಿವರೆಗೆ, ಒಂದು ಬಾರಿಗೆ ಶೇ 50ರಷ್ಟು ಮಕ್ಕಳನ್ನು ಮಾತ್ರ ಒಂದು ತರಗತಿಯಲ್ಲಿ ತುಸು ದೂರ ದೂರ ಕುಳ್ಳಿರಿಸಿ, ಪಾಳಿಯಲ್ಲಿ ಪಾಠ ಮಾಡಬಹುದಾದ ಎಲ್ಲ ಅವಕಾಶ ಇದೆ.

ಲಾಕ್‌ಡೌನ್‌ ನಿಯಮವು ಬರೀ ಶಾಲೆ, ಕಾಲೇಜು ಪ್ರಾರಂಭಕ್ಕೆ ಸೀಮಿತವಾಗಿರುವಂತೆ ಕಾಣುತ್ತಿದೆ. ಸರ್ಕಾರಿ ಸಾರಿಗೆ, ಸಂತೆ, ಮಾರುಕಟ್ಟೆಯಲ್ಲಿ ಎಲ್ಲಿಯೂ ಅಂತರ ಕಾಯ್ದುಕೊಳ್ಳುವಿಕೆ ಕಾಣುತ್ತಿಲ್ಲ. ಶಾಲೆ, ಕಾಲೇಜು ಪ್ರಾರಂಭಿಸುವುದು ಬೇಡ ಎಂದು ನಿರ್ಧರಿಸಿರುವವರು ಬಸ್‌ಗಳಲ್ಲಿ ಸಂಚರಿಸಿ, ಮಾರುಕಟ್ಟೆಯಲ್ಲಿ ಓಡಾಡಿ ಪರಿಸ್ಥಿತಿಯನ್ನು ಅರಿತು ನಿರ್ಧಾರ ತೆಗೆದುಕೊಳ್ಳುವುದು ಒಳಿತು. ಆಗ ವಿದ್ಯಾಗಮದ ಹೆಸರಿನಲ್ಲಿ ಕಂಡ ಕಂಡ ಜಾಗಗಳಲ್ಲಿ ಮಕ್ಕಳು ಕುಳಿತು ಪಾಠ ಕೇಳುವುದು ತಪ್ಪುತ್ತದೆ. ಆ ಮರದ ಕಟ್ಟೆಗಳು, ಬೀದಿ ಬದಿಯ ಠಿಕಾಣಿಗಳು ಎಷ್ಟರಮಟ್ಟಿಗೆ ಸುರಕ್ಷಿತ ಎಂಬುದಕ್ಕೆ ಸರ್ಕಾರವೇ ಉತ್ತರಿಸಬೇಕು. ಶಾಲೆ, ಕಾಲೇಜು ಪ್ರಾರಂಭವಾದರೆ, ಈಗ ಮಕ್ಕಳ ಸಲುವಾಗಿ ಮನೆಯಲ್ಲೇ ಇರುವ ಪಾಲಕರು ಮತ್ತೆ ಕೆಲಸಕ್ಕೆ ಹೋಗಬಹುದು, ಮಕ್ಕಳು ಸುರಕ್ಷಿತವಾಗಿ ಶಾಲೆಯಲ್ಲಿ ಇರಬಹುದು!

–ಡಾ. ಗೌರಿ ಅ. ಹಿರೇಮಠ, ರಾಣೆಬೆನ್ನೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.