ಕೊರೊನಾದಿಂದ ಅರ್ಥ ವ್ಯವಸ್ಥೆಯ ಮೇಲಾಗುವ ಪರಿಣಾಮದ ಬಗ್ಗೆ ಚಿಂತಿತರಾಗಿ, ಜರ್ಮನಿಯ ಹೆಸ್ಸೆ ರಾಜ್ಯದ ಹಣಕಾಸು ಸಚಿವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ (ಪ್ರ.ವಾ., ಮಾರ್ಚ್ 30). ಈ ಸುದ್ದಿ ತಿಳಿದು ನಮ್ಮ ಜನಪ್ರತಿನಿಧಿಗಳು ಆಘಾತಕ್ಕೆ ಒಳಗಾಗಬಹುದೇ? ಖಂಡಿತಾ ಇಲ್ಲ.
ಕರ್ನಾಟಕದಲ್ಲೂ ಕೊರೊನಾ ಸೋಂಕಿನ ಹೆಚ್ಚಿನ ಪ್ರಕರಣಗಳು ಕಂಡುಬಂದಿವೆ. ದಿನಗೂಲಿಯಿಲ್ಲದೆ ಎಷ್ಟೋ ಮಂದಿ ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಆದರೆ ನಮ್ಮಲ್ಲಿ ಬೆರಳೆಣಿಕೆಯ ಶಾಸಕರು, ಸಚಿವರನ್ನು ಬಿಟ್ಟರೆ ಉಳಿದ ಜನಪ್ರತಿನಿಧಿಗಳೆಲ್ಲ ಹೋಮ್ ಕ್ವಾರಂಟೈನ್ನಲ್ಲಿದ್ದು, ತಾವು ಜನಪ್ರತಿನಿಧಿಗಳು ಎಂಬುದನ್ನೇ ಮರೆತಿದ್ದಾರೆ.
ಸ್ವಾಮಿ, ರಾಜ್ಯದ ಜನ ನಿಮ್ಮನ್ನು ಪೊಲೀಸರಂತೆ ರಸ್ತೆಗಿಳಿಯಿರಿ, ವೈದ್ಯಕೀಯ ಸಿಬ್ಬಂದಿಯ ರೀತಿ ಸೇವೆ ಮಾಡಿ ಎಂದು ಕೇಳುತ್ತಿಲ್ಲ. ನಿಮ್ಮ ಬಳಿ ಹಣ ಇದೆ ಎನ್ನುವುದನ್ನು ಚುನಾವಣೆಯ ಸಂದರ್ಭದಲ್ಲಿ ಜನ ಗಮನಿಸಿದ್ದಾರೆ. ಅದರಲ್ಲಿ ಸ್ವಲ್ಪವನ್ನಾದರೂ ನಿಮ್ಮ ಕ್ಷೇತ್ರದ ಜನರಿಗೆ ಅಗತ್ಯ ವಸ್ತುಗಳ ರೂಪದಲ್ಲಿ ಕಾರ್ಯಕರ್ತರ ಮೂಲಕ ತಲುಪಿಸಿ. ಕೊರೊನಾ ಸೋಂಕಿನ ಅಪಾಯದ ಕುರಿತು ಜನರಲ್ಲಿ ತಿಳಿವಳಿಕೆ ಮೂಡಿಸಿ. ನಿಮ್ಮ ಮಾತು ಕೇಳುವ ಜನರಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನೀವು ನೆರವಾದರೆ, ಚುನಾವಣೆಯ ಕಷ್ಟ ಕಾಲದಲ್ಲಿ ಜನ ಖಂಡಿತ ನಿಮ್ಮ ಕೈ ಹಿಡಿಯುತ್ತಾರೆ.
-ಶಿವಕುಮಾರ್ ಯರಗಟ್ಟಿಹಳ್ಳಿ, ಚನ್ನಗಿರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.