ADVERTISEMENT

ವಾಚಕರ ವಾಣಿ: ಅರಣ್ಯ ಇಲಾಖೆಗೆ ಬೇಕು ಆಧುನಿಕ ತಂತ್ರಜ್ಞಾನ

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 19:30 IST
Last Updated 11 ಜನವರಿ 2023, 19:30 IST

ಯಾದಗಿರಿ ಅರಣ್ಯ ಪ್ರದೇಶದಲ್ಲಿ ದಿನಗೂಲಿ ನೌಕರರೊಬ್ಬರು ಬೆಂಕಿಗೆ ಆಹುತಿಯಾಗಿರುವುದು ದುರದೃಷ್ಟಕರ. ತಂತ್ರಜ್ಞಾನ ಅಳವಡಿಕೆಯಲ್ಲಿ ಕೆಲವು ಇಲಾಖೆಗಳು ಚುರುಕಾಗಿವೆ. ಆದರೆ ಅರಣ್ಯ ಸಂರಕ್ಷಣೆಗೆ ತಂತ್ರಜ್ಞಾನ ಬಳಸುವ ವಿಷಯದಲ್ಲಿ ರಾಜ್ಯ ಅರಣ್ಯ ಇಲಾಖೆ ಮಾತ್ರ ಬಹಳ ಹಿಂದಿದೆ. ಈಗಲೂ ಸೊಪ್ಪು ಸದೆಗಳನ್ನು ಬಳಸಿ ಅರಣ್ಯದಲ್ಲಿನ ಬೆಂಕಿ ನಂದಿಸುವ ಸಾಂಪ್ರದಾಯಿಕ ಪದ್ಧತಿಗೆ ಜೋತು ಬೀಳಲಾಗಿದೆ. ಇದರಿಂದ ಅನಾಹುತ ತಪ್ಪಿದ್ದಲ್ಲ.

ಅರಣ್ಯದಲ್ಲಿನ ಅಪಾರ ಸಂಖ್ಯೆಯ ಮರಗಿಡಗಳು, ಪ್ರಾಣಿಪಕ್ಷಿಗಳು, ಹಲವಾರು ಚಿಕ್ಕಪುಟ್ಟ ಜೀವಪ್ರಭೇದಗಳು ಕೆಲವೇ ಕ್ಷಣಗಳಲ್ಲಿ ನಾಶವಾಗುವ ಸಂದರ್ಭಗಳಿರುತ್ತವೆ. ಬೆಂಕಿ ಬಿದ್ದಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಿಬ್ಬಂದಿಗೆ ಸೂಕ್ತ ತರಬೇತಿ ಇಲ್ಲದಿದ್ದಾಗಲೂ ದುರ್ಘಟನೆಗಳು ಘಟಿಸುತ್ತವೆ. ಹಿರಿಯ ಅಧಿಕಾರಿಗಳು ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿಯನ್ನು ನಿಯೋಜಿಸಿ, ಸೂಕ್ತ ನಿರ್ದೇಶನಗಳನ್ನು ಕೊಡಬೇಕು. ಬೆಂಕಿ ನಂದಿಸಲು ಆಧುನಿಕ ಸಲಕರಣೆಗಳನ್ನು ಪೂರೈಸಿ, ಅವುಗಳನ್ನು ಬಳಸುವ ಕೌಶಲ ತರಬೇತಿಯನ್ನು ನೀಡಬೇಕು. ಅಗ್ನಿಶಾಮಕ ಯಂತ್ರಗಳು ಕಾರ್ಯಾಚರಿಸಲಾಗದ ಸ್ಥಳಗಳಲ್ಲಿ ಹೆಲಿಕಾಪ್ಟರ್‌ಗಳನ್ನು ಉಪಯೋಗಿಸುವುದೊಳಿತು. ಹಾಗಾದಾಗ ನಮ್ಮ ಅಮೂಲ್ಯ ಕಾಡಿನ ಸಂಪತ್ತು, ಅದರೊಂದಿಗೆ ಹಸಿರು ಸೈನಿಕರು ಸುರಕ್ಷಿತವಾಗಿರುತ್ತಾರೆ.

-ಶಂಕರಲಿಂಗ, ವಿಜಯಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.