ADVERTISEMENT

ಭಯ ಬಿತ್ತುವುದು ಕೆಲವೊಮ್ಮೆ ಅಗತ್ಯ

ಸುಧಾ ಜಿ.ಟಿ.ದಾವಣಗೆರೆ
Published 6 ಡಿಸೆಂಬರ್ 2019, 17:53 IST
Last Updated 6 ಡಿಸೆಂಬರ್ 2019, 17:53 IST

ಪಶುವೈದ್ಯೆ ಮೇಲೆ ಅತ್ಯಾಚಾರವೆಸಗಿದ್ದ ನಾಲ್ವರನ್ನು ಹೈದರಾಬಾದ್ ಪೊಲೀಸರು ಗುಂಡಿಟ್ಟು ಕೊಂದಿದ್ದಾರೆ. ಈ ಎನ್‌ಕೌಂಟರ್‌ ವಿರುದ್ಧ ಕೆಲವರು ಧ್ವನಿ ಎತ್ತಿದ್ದಾರೆ. ಆರೋಪಿಗಳ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಸಹ ಹೇಳುತ್ತಿದ್ದಾರೆ. ಆದರೆ ಇಲ್ಲಿ ನಿಜವಾಗಿಯೂ ಹಕ್ಕಿನ ಉಲ್ಲಂಘನೆಯಾಗಿರುವುದು ಭವಿಷ್ಯದ ಕನಸುಗಳನ್ನು ಹೊತ್ತಿದ್ದ ಆ ಹೆಣ್ಣುಮಗಳದ್ದು. ನಿರ್ಭಯಾ ಪ್ರಕರಣದಲ್ಲಿ ಕಾನೂನು ಪ್ರಕ್ರಿಯೆಯನ್ನು ಸರಿಯಾಗಿ ಅನುಸರಿಸಿದ್ದರೂ ಪ್ರಕರಣ ಘಟಿಸಿ ಏಳು ವರ್ಷಗಳ ಬಳಿಕವೂ ಆರೋಪಿಗಳಿಗೆ ಶಿಕ್ಷೆ ಜಾರಿಯಾಗಿಲ್ಲ.

ಅತ್ಯಾಚಾರದಂತಹ ಹೀನ ಕೃತ್ಯಗಳನ್ನು ತಡೆಗಟ್ಟಲು ಭಯ ಹುಟ್ಟಿಸುವಂತಹ ಈ ಬಗೆಯ ಕ್ರಮಗಳು ಕೆಲವೊಮ್ಮೆ ಅಗತ್ಯ. ಈ ಎನ್‌ಕೌಂಟರ್‌ ಪ್ರಕರಣವು ಅಂತಹ ಭಯ ಮೂಡಿಸಿದೆ. ಆದರೆ ಇಂತಹ ಕೃತ್ಯಗಳನ್ನು ನಿಗ್ರಹಿಸುವಲ್ಲಿ ಸರ್ಕಾರದ ಪಾತ್ರ ಅತಿಮುಖ್ಯ. ನಿರ್ಭಯಾ ಪ್ರಕರಣದ ನಂತರ ರಚನೆಯಾದ ಜೆ.ಎಸ್.ವರ್ಮಾ ಸಮಿತಿಯು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಡಿರುವ ಶಿಫಾರಸುಗಳನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಿಲ್ಲ.

ಮಹಿಳೆಯರ ರಕ್ಷಣೆಗಾಗಿ ಕೇಂದ್ರ ಸರ್ಕಾರ ಸ್ಥಾಪಿಸಿರುವ ನಿರ್ಭಯಾ ನಿಧಿಯಲ್ಲಿ ಶೇ 80ರಷ್ಟು ಹಣವನ್ನು ರಾಜ್ಯ ಸರ್ಕಾರಗಳು ಬಳಸಿಕೊಂಡೇ ಇಲ್ಲ ಎಂಬ ವಿಷಯ ಬಯಲಾಗಿದೆ. ಇಂತಹ ಪ್ರಕರಣಗಳಲ್ಲಿ ತ್ವರಿತಗತಿಯಲ್ಲಿ ನ್ಯಾಯದಾನ ಸಿಗುವಂತಹ ವ್ಯವಸ್ಥೆ ಆಗಬೇಕು. ಜೊತೆಗೆ, ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಹೆಣ್ಣುಮಕ್ಕಳ ಬಗೆಗೆ ಗೌರವ ಭಾವನೆ ಬೆಳೆಸಿ, ಲಿಂಗ ತಾರತಮ್ಯ ಹೋಗಲಾಡಿಸಬೇಕು. ಮನಃಸ್ಥಿತಿ ಬದಲಾದಾಗ ಮಾತ್ರ ಸಮಾಜ ಬದಲಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.