ADVERTISEMENT

ಸಂವಿಧಾನಬದ್ಧ ಹಕ್ಕು ರಕ್ಷಿಸಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2019, 19:45 IST
Last Updated 14 ಜೂನ್ 2019, 19:45 IST

‘ಕಲಬುರ್ಗಿ ಜಿಲ್ಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಹೀನಾಯ ಸೋಲಿಗೆ ಅಹಿಂಸಾ ಸಂಘಟನೆಯ ಹೋರಾಟವೇ ಕಾರಣ’ ಎಂದು ‘ಅಹಿಂಸಾ’ ಕಲಬುರ್ಗಿ ಜಿಲ್ಲಾ ಸಮಿತಿ ಅಧ್ಯಕ್ಷ ಸೂರ್ಯಕಾಂತ ಕದಂ ಹೇಳಿರುವುದು ದುರದೃಷ್ಟಕರ. ಎಸ್‌ಸಿ, ಎಸ್‌ಟಿ ಬಡ್ತಿ ಮೀಸಲಾತಿ ವಿರೋಧಿಸಲು ‘ಅಹಿಂಸಾ’ (ಅಲ್ಪಸಂಖ್ಯಾತ, ಹಿಂದುಳಿದ ಮತ್ತು ಸಾಮಾನ್ಯ) ಎಂಬ ಹೆಸರಿನಲ್ಲಿ ಆರಂಭಗೊಂಡ ಈ ಸಂಘಟನೆಯು ಕಳೆದ ಎರಡು ವರ್ಷಗಳಿಂದ ಎಸ್‌ಸಿ, ಎಸ್‌ಟಿ ಬಡ್ತಿ ಮೀಸಲಾತಿ ವಿರುದ್ಧ ನಿತ್ಯ ಹೇಳಿಕೆ ನೀಡುತ್ತಾ, ಹೋರಾಟ ನಡೆಸುತ್ತಲೇ ಬಂದಿದೆ. ಆ ಮೂಲಕ ಸಮಾಜದಲ್ಲಿಎಸ್‌ಸಿ, ಎಸ್‌ಟಿಗಳೇ ಬೇರೆ, ಇತರರೇ ಬೇರೆ ಎಂಬ ವಾತಾವರಣ ಸೃಷ್ಟಿಸುತ್ತಾ ಬಂದಿದೆ. ಇದು ಅಸ್ಪೃಶ್ಯತಾ ಆಚರಣೆ ಎಂದು ಬಿಡಿಸಿ ಹೇಳಬೇಕಾಗಿಲ್ಲ.

ದುರಂತ ಎಂದರೆ, ಸದರಿ ಸಂಘಟನೆಯ ಮುಖಂಡರು ಈಚಿನ ಲೋಕಸಭಾ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಸೋಲಿಗೆ ತಾವೇ ಕಾರಣ ಎಂದು ಹೊಣೆ ಹೊತ್ತುಕೊಂಡಿರುವುದು ಮತ್ತು ಈಗ ನಡೆದಿರುವ ನೌಕರರ ಸಂಘದ ಚುನಾವಣೆಯಲ್ಲಿ, ಶೇ 18ರಷ್ಟು ಮೀಸಲಾತಿ ಪಡೆಯುತ್ತಿರುವ ಸಮುದಾಯದವರು ಯಾವ ಜಿಲ್ಲೆಯಲ್ಲೂ ಅಧ್ಯಕ್ಷರಾಗದಂತೆ ನೋಡಿಕೊಳ್ಳಬೇಕು ಎಂದು ಕರೆ ಕೊಟ್ಟಿರುವುದು ಈ ಸಂಘಟನೆಯಿಂದ ಅಸ್ಪೃಶ್ಯತಾ ಆಚರಣೆ ಬಹಿರಂಗವಾಗಿ ನಡೆದಿರುವುದನ್ನು ಮತ್ತೊಮ್ಮೆ ದೃಢಪಡಿಸಿದೆ. ಸಮಾಜವನ್ನು 18 v/s 82 ಎಂದು ಆತಂಕಕಾರಿ ರೀತಿಯಲ್ಲಿ ವಿಭಜಿಸಲು ಮುಂದಾಗಿರುವುದು ಸಾಕ್ಷ್ಯ ಸಮೇತ ಸಾಬೀತಾಗುತ್ತಿದೆ. ಸರ್ಕಾರ, ಈ ಸಂಘಟನೆಯ ವಿರುದ್ಧ ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಪ್ರಕಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಿ. ಆ ಮೂಲಕ, ಪರಿಶಿಷ್ಟರ ಸಂವಿಧಾನಬದ್ಧ ಹಕ್ಕುಗಳನ್ನು ರಕ್ಷಿಸಿ, ಹಾಲಿ ಸೃಷ್ಟಿಯಾಗಿರುವ ಅಸಮಾನತೆಯ ವಾತಾವರಣವನ್ನು ತಿಳಿಗೊಳಿಸಲಿ.

–ರಘೋತ್ತಮ ಹೊ.ಬ.,ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.