‘ಶಾಸಕ ಜಿ.ಟಿ. ದೇವೇಗೌಡ ಅವರು ಪಕ್ಷದಿಂದ ದೂರ ಸರಿಯುವ ಮೂಲಕ ‘ಶಾಕ್’ ಉಂಟಾಗಿದೆ ಎಂದು ಮಾಧ್ಯಮಗಳಲ್ಲಿ ಬಿಂಬಿಸಲಾಗುತ್ತಿದೆ. ಫ್ಯೂಸೇ ಇಲ್ಲ, ಇನ್ನು ಶಾಕ್ ಹೊಡೆಯುವುದು ಎಲ್ಲಿಂದ ಬಂತು?’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಲೇವಡಿ ಮಾಡಿರುವುದು ವರದಿಯಾಗಿದೆ (ಪ್ರ.ವಾ., ನ. 14).
ಮುಖ್ಯಮಂತ್ರಿ ಎಂಬ ಅಧಿಕಾರದ ಫ್ಯೂಸ್ ತಮ್ಮ ಬಳಿ ಇದ್ದಾಗಲೂ, ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತದಾರರು ‘ಸೋಲಿನ ಶಾಕ್’ ನೀಡಿದ್ದನ್ನು ಕುಮಾರಸ್ವಾಮಿ ಅವರು ಮರೆತಿರುವ ಹಾಗಿದೆ. ಅದರಲ್ಲೂ ಅವರ ತಂದೆ ಮತ್ತು ಮಗನಿಗೇ ಜನ ‘ಹೈವೋಲ್ಟೇಜ್ ಶಾಕ್’ ನೀಡಿದ್ದರಲ್ಲ! ಕೆಲವೊಮ್ಮೆ ಬಂದೆರಗುವ ಸಿಡಿಲಿನ ‘ಶಾಕ್’ಗೆ ಫ್ಯೂಸ್ ಇದ್ದರೂ ಅದು ವ್ಯರ್ಥ. ಇನ್ನಾದರೂ ಅವರು ಎಚ್ಚೆತ್ತುಕೊಳ್ಳಲಿ. ಈಗಾಗಲೇ ಅಪ್ಪ– ಮಕ್ಕಳ ಹಾಗೂ ಕುಟುಂಬದ ಪಕ್ಷ ಎಂಬ ಹೆಸರು ಪಡೆದಿರುವ ಪಕ್ಷಕ್ಕೆ ಕಾಯಕಲ್ಪ ನೀಡುವ ಮೂಲಕ, ಮುಂದೆ ಬರಬಹುದಾದ ‘ಶಾಕ್’ಗಳಿಂದ ತಪ್ಪಿಸಿಕೊಳ್ಳಲಿ. ಆ ಮೂಲಕ, ಕರ್ನಾಟಕದ ಪ್ರಾದೇಶಿಕ ಪಕ್ಷವನ್ನು ಉಳಿಸಲಿ.
-ಪತ್ತಂಗಿ ಎಸ್. ಮುರಳಿ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.