ADVERTISEMENT

ವಾಚಕರ ವಾಣಿ: ‘ಹಾಸಿಗೆ ಬ್ಲಾಕಿಂಗ್‌’ ಬಯಲಿನ ಉದ್ದೇಶವೇನು?

​ಪ್ರಜಾವಾಣಿ ವಾರ್ತೆ
Published 7 ಮೇ 2021, 19:30 IST
Last Updated 7 ಮೇ 2021, 19:30 IST

ಸಂಸದ ತೇಜಸ್ವಿ ಸೂರ್ಯ ಮತ್ತು ತಂಡದವರು ಬಿಬಿಎಂಪಿ ಸಿಬ್ಬಂದಿಯ ‘ಹಾಸಿಗೆ ಬ್ಲಾಕಿಂಗ್‌’ ಕರ್ಮಕಾಂಡವನ್ನು
ಬಯಲು ಮಾಡಿರುವುದು ಒಳ್ಳೆಯ ಕೆಲಸ. ಆದರೆ ಅದನ್ನು ಪತ್ರಿಕಾಗೋಷ್ಠಿಯ ಮುಖಾಂತರ ಸಾರ್ವಜನಿಕರಿಗೆ
ತಿಳಿಸಿದ ಹಿಂದಿನ ಉದ್ದೇಶವೇನು? ಅವರದೇ ಪಕ್ಷದ ಸರ್ಕಾರ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವಾಗ, ಪ್ರಕರಣದ ಬಗ್ಗೆ ಅನುಮಾನ ಬಂದ ಕೂಡಲೇ ಮುಖ್ಯಮಂತ್ರಿಯವರಿಗೆ ದಾಖಲೆ ಒದಗಿಸಿ, ತನಿಖೆ ಮಾಡಿಸಿ, ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸಿ ವ್ಯವಸ್ಥೆಯನ್ನು ಸರಿದಾರಿಗೆ ತರಬಹುದಿತ್ತು. ಮುಖ್ಯಮಂತ್ರಿ ಸಹಕಾರ ಕೊಡದಿದ್ದರೆ ಕೇಂದ್ರ ಸರ್ಕಾರದ ಸಹಾಯ ಪಡೆಯಬಹುದಿತ್ತು. ಅದೂ ಆಗದಿದ್ದರೆ ನ್ಯಾಯಾಲಯದ ಮೊರೆ ಹೋಗಬಹುದಿತ್ತು.

ಅದ್ಯಾವುದನ್ನೂ ಮಾಡದೆ ನೇರವಾಗಿ ಪತ್ರಿಕಾಗೋಷ್ಠಿಯ ಮುಖಾಂತರ ತಮ್ಮ ಸರ್ಕಾರದ ಅಧೀನದಲ್ಲಿರುವ
ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನಲಾದ ಹಗರಣವನ್ನು ಬಯಲು ಮಾಡಿದ್ದು ಯಾಕಾಗಿ? ಪ್ರಚಾರದ ಸಲುವಾಗಿಯೇ? ಅಥವಾ ಮುಖ್ಯಮಂತ್ರಿಗೆ ಕೆಟ್ಟ ಹೆಸರು ತರಲೆಂದೇ? ಇದರಿಂದ ಜನರ ಮನಸ್ಸಿನಲ್ಲಿ ಸರ್ಕಾರಿ ವ್ಯವಸ್ಥೆಯ ಮೇಲಿರುವ ಅಲ್ಪ ನಂಬಿಕೆಯೂ ಹೋಗುವುದಿಲ್ಲವೇ? ಪತ್ರಿಕಾ ಪ್ರತಿನಿಧಿಗಳ ಎದುರು ಸಂಯಮದಿಂದ ವರ್ತಿಸದೆ ನಾಲಿಗೆಯನ್ನು ಹರಿಬಿಟ್ಟಿದ್ದರಿಂದ ಏನಾಯಿತು? ಪ್ರಕರಣವು ಕೋಮುಬಣ್ಣ ಪಡೆಯಿತು. ಹಾಸಿಗೆ ಬ್ಲಾಕಿಂಗ್‌ ವಿಷಯ ಹಿಂದಕ್ಕೆ ಸರಿಯಿತು.

ಸತೀಶ ಎಂ.ಎಸ್. ಭಟ್ಟ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.