ಮುಂಗಾರು ಆರಂಭವಾಗುತ್ತಲೇ ಗೋದಾಮುಗಳಲ್ಲಿ ಶೇಖರಿಸಿಟ್ಟಿದ್ದ ಭಾರಿ ಪ್ರಮಾಣದ ರಸಗೊಬ್ಬರ ಮತ್ತು ಪೀಡೆನಾಶಕ ವಿಷದ್ರವ್ಯಗಳು ಅಂಗಡಿಗಳ ಮೂಲಕ ಹಳ್ಳಿಹಾದಿ ಹಿಡಿಯುತ್ತವೆ. ಅಗತ್ಯಕ್ಕಿಂತ ಹತ್ತಿಪ್ಪತ್ತು, ಐವತ್ತು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಅವುಗಳನ್ನು ರೈತರ ಹೊಲಕ್ಕೆ ತಳ್ಳಲು ಎಲ್ಲ ವ್ಯವಸ್ಥೆಗಳೂ ಸಜ್ಜಾಗುತ್ತವೆ. ಜೇನ್ನೊಣ, ಚಿಟ್ಟೆ, ದುಂಬಿ, ಎರೆಹುಳಗಳೇ ಮುಂತಾದ ಹಿತಜೀವಿಗಳ ಸಂತತಿ ನಾಶವಾಗುತ್ತದೆ.
ಕೃಷಿವಿಷಗಳು ಆಹಾರದ ಮೂಲಕ ನಮ್ಮೊಳಗೆ ಸೇರಿದರೆ ಅವುಗಳನ್ನು ಹೊರಕ್ಕೆ ಹಾಕುವ ಯಾವ ವಿಧಾನವೂ ನಮ್ಮ ದೇಹಕ್ಕೆ ಗೊತ್ತಿಲ್ಲ. ಅದಕ್ಕಿಂತ ಮುಖ್ಯವಾಗಿ, ಬೆಳೆಗಳಿಗೆ ಸುರಿಯುವ ಸಾರಜನಕ ಮತ್ತು ರಂಜಕಗಳು ಕೆರೆ, ಹಳ್ಳ, ನದಿಗಳಿಗೆ ಸೇರಿ ಬೇಸಿಗೆಯಲ್ಲಿ ಅಪಾರ ಪ್ರಮಾಣದಲ್ಲಿ ಕಳೆ ಬೆಳೆದು ಅಲ್ಲೇ ಕೊಳೆಯುತ್ತ ಅಪಾರ ಸಂಖ್ಯೆಯ ಜಲಚರಗಳ ನಾಶಕ್ಕೆ ಕಾರಣವಾಗುತ್ತವೆ.
ರೈತರಿಗೆ ಈ ಕುರಿತು ಕೂಗಿ ಹೇಳಬೇಕಾದ ಕಾಲ ಇದು. ಬಾಟಲಿಗಳ ಲೇಬಲ್ ಮೇಲೆ ಬರೆದಿದ್ದು ಕನ್ನಡದಲ್ಲಿಲ್ಲ. ಗೊಬ್ಬರದ ಮೂಟೆಗಳ ಮೇಲೆ ಎಚ್ಚರಿಕೆಯ ಮಾತೇ ಇಲ್ಲ. ಪಂಚಾಯಿತಿ ಕಚೇರಿಗಳಲ್ಲಿ ಒಂದು ಭಿತ್ತಿಪತ್ರವೂ ಇಲ್ಲ. ಕೃಷಿಯ ಒಳಸುರಿಗಳ ಅಪಾಯದ ಬಗ್ಗೆ ಸರ್ಕಾರಿ ಜಾಹೀರಾತು ಕಾಣುತ್ತಿಲ್ಲ. ಜೀವಿವೈವಿಧ್ಯ ರಕ್ಷಣೆ ಕುರಿತು ನಗರಗಳಲ್ಲಿ ವೆಬಿನಾರ್ಗಳೇನೊ ಆಗುತ್ತಿವೆ. ಸಾಕೇ?
-ನಾಗೇಶ ಹೆಗಡೆ, ಕೆಂಗೇರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.