ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಸೇರಲು ಪೋಷಕರು ಹಾಗೂ ಮಕ್ಕಳು ಆಸಕ್ತಿ ತೋರುತ್ತಿದ್ದು, ಇಲ್ಲಿ ಸೀಟಿಗಾಗಿ ಪೈಪೋಟಿ ಆರಂಭವಾಗಿರುವುದು (ಪ್ರ.ವಾ., ಸೆ. 22) ಸಂತಸದ ಸಂಗತಿ. ಕೊರೊನಾ ಕಾರಣದಿಂದ ಈ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ನಡೆಯುತ್ತವೋ ಇಲ್ಲವೋ ಎಂಬ ಅನುಮಾನದಿಂದಾಗಿ ಪೋಷಕರು ಖಾಸಗಿ ಶಾಲೆಗಳಿಗೆ ದುಬಾರಿ ಶುಲ್ಕ ಕಟ್ಟಿ ಮಕ್ಕಳನ್ನು ಕಳಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಇದು, ಸರ್ಕಾರಿ ಶಾಲೆಗಳ ಕಡೆ ಅವರು ಆಕರ್ಷಿತರಾಗುವಂತೆ ಮಾಡಿದೆ.
ಸರ್ಕಾರ ಇದೇ ಖುಷಿಯಲ್ಲಿ ಮೈ ಮರೆಯುವುದು ಬೇಡ. ಹಲವು ಸರ್ಕಾರಿ ಶಾಲೆಗಳ ಕೊಠಡಿಗಳು ಬೀಳುವ ಸ್ಥಿತಿಯಲ್ಲಿವೆ. ಮಕ್ಕಳಿಗೆ ಶೌಚಾಲಯಗಳಿಲ್ಲ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ವ್ಯವಸ್ಥಿತ ಆಟದ ಮೈದಾನಗಳಿಲ್ಲ. ಇವೆಲ್ಲ ಕೊರತೆಗಳ ಜೊತೆಗೆ ಆಧುನಿಕ ತಂತ್ರಜ್ಞಾನ ಆಧಾರಿತ ಶಿಕ್ಷಣದ ಅಗತ್ಯ ಇದೆ. ಸೆಟಲೈಟ್ ಆಧಾರಿತ ತರಗತಿಗೆ ಟಿ.ವಿ ಹಾಗೂ ಸೂಕ್ತ ವಿದ್ಯುತ್ ಸೌಲಭ್ಯವನ್ನು ಒದಗಿಸಬೇಕಾಗಿದೆ. ಶಾಲೆಗಳಿಗೆ ಈ ಎಲ್ಲಾ ಮೂಲಸೌಲಭ್ಯಗಳನ್ನು ನೀಡಿದರೆ ಖಾಸಗಿ ಶಾಲೆಗಳಿಂದ ಬಂದ ಮಕ್ಕಳು ಇಲ್ಲಿಯೇ ಉಳಿಯುತ್ತಾರೆ. ಜೊತೆಗೆ ಇನ್ನೂ ಹೆಚ್ಚಿನ ಸಂಖ್ಯೆಯ ಮಕ್ಕಳು ಬರುತ್ತಾರೆ. ಇಲ್ಲವಾದರೆ ಮುಂದಿನ ವರ್ಷ ಅವರೆಲ್ಲ ಮತ್ತೆ ಖಾಸಗಿ ಶಾಲೆಗಳತ್ತ ತೆರಳಬಹುದು.
–ಶಿವಕುಮಾರ್ ಯರಗಟ್ಟಿಹಳ್ಳಿ, ಚನ್ನಗಿರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.