ADVERTISEMENT

ವಾಚಕರ ವಾಣಿ: 28 ಜುಲೈ 2025

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 0:14 IST
Last Updated 28 ಜುಲೈ 2025, 0:14 IST
   

ಹೆಚ್ಚುವರಿ ಪಿ.ಎಫ್ ಕಡಿತ: ನಿರ್ಬಂಧ ಬೇಡ

ಕೇಂದ್ರದಲ್ಲಿ ಯು.ಪಿ.ಎ ಸರ್ಕಾರವಿದ್ದಾಗ ಕಾರ್ಮಿಕರ ಭವಿಷ್ಯನಿಧಿಯಲ್ಲಿ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಶೇ 12ರಷ್ಟು ಹೊರತುಪಡಿಸಿ, ಹೆಚ್ಚುವರಿಯಾಗಿ ಶೇ 70ರವರೆಗೂ ಸ್ವಯಂಪ್ರೇರಿತವಾಗಿ ಕಡಿತಗೊಳಿಸಲು ಅವಕಾಶ ಕಲ್ಪಿಸಲಾಗಿತ್ತು. ಆ ಅವಕಾಶ ಬಳಸಿಕೊಂಡು ಬಹಳಷ್ಟು ಉದ್ಯೋಗಿಗಳು ತಿಂಗಳ ವೇತನದಲ್ಲಿ ಮನೆಯ ಖರ್ಚಿಗೆ ಎಷ್ಟು ಬೇಕೋ ಅಷ್ಟು ಉಳಿಸಿಕೊಂಡು ಉಳಿದ ಹಣವನ್ನು ಭವಿಷ್ಯನಿಧಿಗೆ ನೀಡುತ್ತಿದ್ದರು. ಆ ಹಣಕ್ಕೆ ಉತ್ತಮ ಬಡ್ಡಿಯೂ ಸಿಗುತ್ತಿತ್ತು.

ಪ್ರಸ್ತುತ ಎನ್‌ಡಿಎ ನೇತೃತ್ವದ ಬಿಜೆಪಿ ಸರ್ಕಾರ ಈ ಮಿತಿಯನ್ನು ಶೇ 20ಕ್ಕೆ ಇಳಿಸಿದೆ. ಇದರಿಂದ ಉದ್ಯೋಗಿಗಳ ಉಳಿತಾಯದ ಅವಕಾಶ ತಪ್ಪಿಹೋಗಿದೆ. ಅಪಾಯ ಇರುವ ಕಡೆ ಹಣ ಹೂಡಿಕೆ ಮಾಡಿ ಕಳೆದುಕೊಳ್ಳುತ್ತಿದ್ದಾರೆ. ಭವಿಷ್ಯನಿಧಿ ಯಲ್ಲಿ ಈ ಹಿಂದೆ ಹೇಗೆ ಹೆಚ್ಚುವರಿಯ ಕಡಿತಕ್ಕೆ ಅವಕಾಶವಿತ್ತೋ ಅದನ್ನು ಪುನಃ ಜಾರಿಗೊಳಿಸಿದರೆ ಉದ್ಯೋಗಿಗಳಿಗೆ ಉಳಿತಾಯ ಮಾಡಲು ಅನುಕೂಲವಾಗಲಿದೆ.

–ಜಿ.ಎಸ್.‌ ಗೋಪಾಲ ನಾಯ್ಕ, ಬೆಂಗಳೂರು

ADVERTISEMENT

ಪೊಲೀಸ್ ಸಿಬ್ಬಂದಿಗೆ ಅನ್ಯಾಯ

ಪೊಲೀಸ್‌ ಸಿಬ್ಬಂದಿಗೆ ‘ವಿಶೇಷ ಕರ್ತವ್ಯ ಆಹಾರ ಭತ್ಯೆ’ (ಹೊರ ಜಿಲ್ಲಾ ಬಂದೋಬಸ್ತ್) ಎಂದು ದಿನವೊಂದಕ್ಕೆ ₹300 ನೀಡಲಾಗುತ್ತಿದೆ. ಆದರೆ, ನಿಜವಾಗಿಯೂ ಈ ಮೊತ್ತಕ್ಕೆ ಗುಣಮಟ್ಟದ ಆಹಾರ ದೊರಕುತ್ತದೆಯೇ? ಕರ್ತವ್ಯಕ್ಕೆ ನಿಯೋಜನೆಗೊಂಡಾಗ ಪೊಲೀಸರಿಗೆ ಕೊಡುವುದು ಚಿತ್ರಾನ್ನ ಅಥವಾ ತರಕಾರಿ ಪಲಾವ್ ಹೆಸರಿನ ಬಣ್ಣದ ಅನ್ನ. ಹಿರಿಯ ಅಧಿಕಾರಿಗಳು, ಸಿಬ್ಬಂದಿ ಹೆಸರಿನಲ್ಲಿ ಆಹಾರಭತ್ಯೆಯ ಬಿಲ್‌ ಅನ್ನು ಸರ್ಕಾರಕ್ಕೆ ಸಲ್ಲಿಸಿ ಹಣ ಡ್ರಾ ಮಾಡಿಕೊಳ್ಳುತ್ತಾರೆ.

ಆಹಾರಭತ್ಯೆಯ ಹಣ ಪೊಲೀಸರಿಗೆ ದೊರಕದೆ ಹಿರಿಯ ಪೊಲೀಸ್ ಅಧಿಕಾರಿಗಳ ಕಿಸೆ ಸೇರುತ್ತಿದೆ. ಸರ್ಕಾರವು ಈ ಭತ್ಯೆಯ ಮೊತ್ತವನ್ನು ಸಿಬ್ಬಂದಿಯ ಬ್ಯಾಂಕ್‌ ಖಾತೆಗೆ ನೇರವಾಗಿ ಜಮೆ ಮಾಡಿದರೆ ಅವರು ಗುಣಮಟ್ಟದ ಆಹಾರ ಪಡೆಯಲು ಅನುಕೂಲವಾಗಲಿದೆ.

–ಜಗದೀಶ, ಬೆಂಗಳೂರು

ನಿಷ್ಕ್ರಿಯ ಸಂಪರ್ಕ ಸಂಖ್ಯೆ

ವಿದ್ಯಾರ್ಥಿ ವೇತನ ಕುರಿತ ಮಾಹಿತಿ ಪಡೆಯಲು ಸಮಾಜ ಕಲ್ಯಾಣ ಇಲಾಖೆಯ ವೆಬ್‌ಸೈಟ್‌ನಲ್ಲಿ 1902, 9008400010 ಮತ್ತು 9008400078 ಸಂಪರ್ಕ ಸಂಖ್ಯೆ ಪ್ರಕಟಿಸಲಾಗಿದೆ. ಈ ಸಂಖ್ಯೆಗೆ ದೂರವಾಣಿ ಕರೆ ಮಾಡಿದರೆ ಅಸ್ತಿತ್ವದಲ್ಲಿ ಇಲ್ಲವೆಂಬ ಪ್ರತಿಕ್ರಿಯೆ ಬರುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಯ ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿ ವೇತನ, ಕುಂದುಕೊರತೆ ಹಂಚಿಕೊಳ್ಳಲು ನಮೂದಿಸಿರುವ ಸಂಪರ್ಕ ಸಂಖ್ಯೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಸಂಪರ್ಕ ಸಂಖ್ಯೆಗಳು ನಿಷ್ಕ್ರಿಯವಾಗಿದ್ದರೆ, ತೆಗೆದುಹಾಕಿ ಚಾಲ್ತಿಯಲ್ಲಿರುವ ಹೊಸ ಸಂಪರ್ಕ ಸಂಖ್ಯೆಯನ್ನು ನಮೂದಿಸಬೇಕಿದೆ.

–ಅಶೋಕ ಎನ್.‌ಎಚ್.‌, ಕೋಲಾರ 

ಇನ್ನೆಷ್ಟು ಮಕ್ಕಳು ಬಲಿಯಾಗಬೇಕು?

ರಾಜಸ್ಥಾನದ ಝಾಲಾವಾಢ ಎಂಬಲ್ಲಿ ಸರ್ಕಾರಿ ಶಾಲೆಯ ಚಾವಣಿ ಕುಸಿದು ಏಳು ವಿದ್ಯಾರ್ಥಿಗಳು ಮೃತಪಟ್ಟಿರುವುದು ನೋವಿನ ಸಂಗತಿ. ದೇಶದಲ್ಲಿ ಶಿಕ್ಷಣಕ್ಕೆ ಎಷ್ಟರಮಟ್ಟಿಗೆ ಪ್ರಾಮುಖ್ಯ ನೀಡಿದ್ದೇವೆ ಎನ್ನುವುದಕ್ಕೆ ಈ ಅವಘಡ ಕನ್ನಡಿ ಹಿಡಿದಿದೆ. ಕರ್ನಾಟಕದಲ್ಲೂ ಶಾಲೆಗಳ ಸ್ಥಿತಿ ಉತ್ತಮವಾಗಿದೆ ಎಂದು ಹೇಳುವಂತಿಲ್ಲ. 2019ರಲ್ಲಿ ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥಶೆಟ್ಟಿ ಅವರು ರಾಜ್ಯದ 11 ಜಿಲ್ಲೆಗಳಲ್ಲಿ ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಶಾಲಾ ಕಟ್ಟಡಗಳನ್ನು ಆರು ತಿಂಗಳೊಳಗೆ ದುರಸ್ತಿಪಡಿಸುವಂತೆ ಸರ್ಕಾರಕ್ಕೆ ಸೂಚಿಸಿದ್ದರು. ಆದರೂ, ಪರಿಸ್ಥಿತಿ ಸುಧಾರಿಸಿಲ್ಲ. 

–ಎ.ಜೆ. ಜಾವೀದ್, ಹಾಸನ 

ಯೂರಿಯಾ: ಸಂಸದರ ಮೌನವೇಕೆ?

ರಾಜ್ಯದಲ್ಲಿ ಈ ಬಾರಿ ಉತ್ತಮವಾಗಿ ಮಳೆ ಸುರಿದರೂ ಯೂರಿಯಾ ರಸಗೊಬ್ಬರ ಸಿಗದೆ ರೈತರು ಪರದಾಡುವಂತಾಗಿದೆ. ಈ ಬಗ್ಗೆ  ಮುಖ್ಯಮಂತ್ರಿ ಅವರು, ಕೇಂದ್ರ ರಸಗೊಬ್ಬರ ಸಚಿವರಿಗೆ ಪತ್ರವನ್ನೂ ಬರೆದಿದ್ದಾರೆ. ಇದು ಕೇವಲ ಮುಖ್ಯಮಂತ್ರಿ ಅವರ ಕರ್ತವ್ಯವೇ? ರಾಜ್ಯದಿಂದ ಆಯ್ಕೆಯಾಗಿರುವ 28 ಸಂಸದರಿಗೆ ಇದರ ಹೊಣೆಗಾರಿಕೆ ಇಲ್ಲವೇ? ಕರ್ನಾಟಕವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಏನು ಮಾಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಇವರಲ್ಲಿ ಯಾರೂ ರಾಜ್ಯದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದಿಲ್ಲ. ತಮಿಳುನಾಡಿನ ಸಂಸದರು ಭಾಷೆಯ ವಿಚಾರ ಬಂದಾಗ ಸ್ವಹಿತಾಸಕ್ತಿ ಬದಿಗೊತ್ತಿ ಒಟ್ಟುಗೂಡುವುದನ್ನು ನೋಡಿ ನಮ್ಮ ಸಂಸದರು ಕಲಿಯಬೇಕಿದೆ. ಕೇಂದ್ರದ ಮೇಲೆ ಒತ್ತಡ ಹೇರಿ ರಾಜ್ಯದ ಪಾಲಿನ ಯೂರಿಯಾ ಸರಬರಾಜಿಗೆ ಕ್ರಮವಹಿಸಬೇಕಿದೆ.

–ಸಂತೋಷ್ ಕುಮಾರ್ ಎಲ್., ಹಿರಿಯೂರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.