ಬೆಂಗಳೂರಿನ ಬಸವನಗುಡಿಯ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕಿನ ಗ್ರಾಹಕರು ತಮ್ಮ ಖಾತೆಯಿಂದ ಹಣ ವಾಪಸ್ ಪಡೆಯಲು ಆರ್ಬಿಐ ಹೇರಿರುವ ನಿರ್ಬಂಧದಿಂದ ಆತಂಕಕ್ಕೆ ಒಳಗಾಗಿರುವ ಬಗ್ಗೆ ಪತ್ರಿಕಾ ವರದಿಗಳು ಬರುತ್ತಿವೆ. ಈ ಸಂಬಂಧ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರು, ‘ಬ್ಯಾಂಕ್ ಚೆನ್ನಾಗಿಯೇ ನಡೆಯುತ್ತಿದ್ದು,ಜ. 10ರವರೆಗೂ ಗ್ರಾಹಕರಿಗೆ ಮಾಮೂಲಿನಂತೆ ಸೇವೆಯನ್ನು ಒದಗಿಸಿದ್ದೇವೆ. ಆದರೂ ಬ್ಯಾಂಕಿನ ವಹಿವಾಟಿಗೆ ಆರ್ಬಿಐ ಏಕಾಏಕಿ ನಿರ್ಬಂಧ ಹೇರಿ ನಮ್ಮ ಕೈಕಟ್ಟಿಹಾಕಿದೆ’ ಎಂಬ ರೀತಿ ಹೇಳುತ್ತಾ ಬಂದಿದ್ದಾರೆ.
ಬ್ಯಾಂಕಿನ ಈ ನಿಲುವು, ಶಾಲಾ ವಿದ್ಯಾರ್ಥಿಯೊಬ್ಬ ಶಾಲೆಯಿಂದ ಮನೆಗೆ ಬಂದು ಪೋಷಕರಿಗೆ ‘ಇವತ್ತು ನಾನು ಏನೂ ತಪ್ಪು ಮಾಡಲಿಲ್ಲ. ಆದರೂ ಮೇಷ್ಟರು ನನಗೆ ಹೊಡೆದರು’ ಎಂದು ಹೇಳಿದಂತಿದೆ. ತಪ್ಪು ಮಾಡದಿದ್ದರೆ ಮೇಷ್ಟರು ಯಾಕೆ ಹೊಡೆಯುತ್ತಾರೆ? ಬ್ಯಾಂಕಿನ ಆಡಳಿತ ಮಂಡಳಿಯು ತಪ್ಪು ಹೆಜ್ಜೆ ಇಟ್ಟು ಅವ್ಯವಹಾರ ಮಾಡಿರುವುದರಿಂದಲೇ ಆರ್ಬಿಐ ಈ ನಿರ್ಬಂಧವನ್ನು ಹೇರಿರುವುದು. ಆದ್ದರಿಂದ, ಮಂಡಳಿಯು ತೊಂದರೆಗೆ ಒಳಗಾಗಿರುವ ಗ್ರಾಹಕರನ್ನು ಸಮಾಧಾನಪಡಿಸುವ ಸಲುವಾಗಿ, ತಪ್ಪು ತನ್ನದಲ್ಲವೆಂದು ಹೇಳುತ್ತಾ ಆರ್ಬಿಐ ಕಡೆ ಬೆರಳು ತೋರುತ್ತಿರುವುದು ಸರಿಯಲ್ಲ.
–ಎಚ್.ಗುಂಡೂರಾವ್,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.