ADVERTISEMENT

ವಾಚಕರ ವಾಣಿ | ಪ್ರತೀಕಾರದ ಕ್ರಮದಿಂದ ನ್ಯಾಯ ದೊರೆಯದು

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 19:45 IST
Last Updated 14 ಜುಲೈ 2020, 19:45 IST

ಕುಖ್ಯಾತ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್‌ಗಳಲ್ಲಿ ಹತ್ಯೆ ಮಾಡುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗಿದೆ. ಇಂತಹ ಹತ್ಯೆಗಳು ಒಂದು ರೀತಿಯಲ್ಲಿ ಪ್ರತೀಕಾರದ ಕ್ರಮವೇ ವಿನಾ ನಿಜವಾದ ನ್ಯಾಯ ನೀಡಿಕೆಯಲ್ಲ. ಆದರೆ, ಇಂತಹ ಹತ್ಯೆಗಳಿಗೆ ಜನಬೆಂಬಲ ವ್ಯಕ್ತವಾಗುತ್ತಿದೆ.

ಇದನ್ನು ಬೆಂಬಲಿಸುತ್ತಿರುವವರು ಅದಕ್ಕೆ ನೀಡುವ ಪ್ರಮುಖ ಕಾರಣ, ನ್ಯಾಯ ನೀಡುವಿಕೆಯಲ್ಲಿ ಆಗುತ್ತಿರುವ ವಿಳಂಬ ಹಾಗೂ ಬಲಿಷ್ಠರು ಕೆಲವೊಮ್ಮೆ ಶಿಕ್ಷೆಯಿಂದ ಪಾರಾಗುತ್ತಿರುವುದು. ಇವೇನೂ ತಪ್ಪು ಗ್ರಹಿಕೆಗಳಲ್ಲ. ಆದರೆ, ಇದಕ್ಕೆ ಪೊಲೀಸ್ ವ್ಯವಸ್ಥೆಯ ಕೊಡುಗೆ ಅಪಾರ. ಕಾಲಕ್ಕೆ ತಕ್ಕಂತೆ ಬದಲಾಗದ ತನಿಖಾ ವಿಧಾನ, ಆರೋಪಪಟ್ಟಿ ಸಲ್ಲಿಸುವಾಗಿನ ವೃತ್ತಿಪರತೆಯ ಕೊರತೆ, ಸಾಕ್ಷಿಗಳಿಗೆ ಸರಿಯಾದ ಭದ್ರತೆ ಒದಗಿಸದಿರುವುದು... ಹೀಗೆ ವ್ಯವಸ್ಥೆ ಜಡ್ಡುಗಟ್ಟುವುದಕ್ಕೆ ಹಲವು ಕಾರಣಗಳಿವೆ.

ಪೊಲೀಸರು ಸುಲಭದ ಎನ್‌ಕೌಂಟರ್‌ ವಿಧಾನವನ್ನು ಅನುಸರಿಸಿದರೆ ವ್ಯವಸ್ಥೆಯು ಸುಧಾರಣೆ ಕಾಣುವುದಿಲ್ಲ. ಬದಲಿಗೆ, ಸಮಸ್ಯೆಗಳು ಇನ್ನಷ್ಟು ಉಲ್ಬಣಗೊಳ್ಳುತ್ತವೆ. ಭ್ರಷ್ಟತೆಯಿಂದ ತುಂಬಿ ತುಳುಕುತ್ತಿರುವ ವ್ಯವಸ್ಥೆಯೇ ನ್ಯಾಯವನ್ನೂ ತೀರ್ಮಾನಿಸತೊಡಗಿದರೆ, ಅನ್ಯಾಯಕ್ಕೆ ಒಳಗಾಗುವವರು ಬಡವರು.
-ಸುನೀಲ ನಾಯಕ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.