ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 28 ಫೆಬ್ರುವರಿ 2026, 1:23 IST
Last Updated 28 ಫೆಬ್ರುವರಿ 2026, 1:23 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಜನತಂತ್ರ: ಯಾವುದೂ ಪ್ರಶ್ನಾತೀತವಲ್ಲ

ಎನ್‌ಸಿಇಆರ್‌ಟಿ ಎಂಟನೇ ತರಗತಿ ಪಠ್ಯದಲ್ಲಿ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ಅಧ್ಯಾಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿರುವ ಆತಂಕ ಸಕಾಲಿಕವಾಗಿದೆ. ಇದು ನ್ಯಾಯಾಂಗದ ಬಗ್ಗೆ ಜನರಲ್ಲಿರುವ ನಂಬಿಕೆ ಹಾಗೂ ವಿಶ್ವಾಸಾರ್ಹತೆಗೆ ಧಕ್ಕೆ ತರಲಿದೆ ಎಂಬ ನ್ಯಾಯಾಲಯದ ಅಭಿಪ್ರಾಯವೂ ಒಪ್ಪು ವಂತಹದ್ದೇ. ಅದರಲ್ಲೂ ವಾಸ್ತವತೆಯ ಅರಿವಿಲ್ಲದ ಮುಗ್ಧ ಮಕ್ಕಳಲ್ಲಿ ವ್ಯವಸ್ಥೆಯ ಬಗ್ಗೆ ಅಪನಂಬಿಕೆ ಬಿತ್ತುವುದು ಸಮಾಜದಲ್ಲಿ ಗಂಭೀರ ಪರಿಣಾಮಗಳಿಗೆ ದಾರಿಯಾಗುತ್ತದೆ. ಮಕ್ಕಳಲ್ಲಿ ವ್ಯವಸ್ಥೆಯ ಕುರಿತು ನಂಬಿಕೆ, ವಿಶ್ವಾಸ ಸೃಜಿಸುವ ಪಠ್ಯಪುಸ್ತಕ ಗಳಲ್ಲಿ ಭಾರತೀಯ ನ್ಯಾಯಾಂಗವು ಸಾಮಾಜಿಕ ಸುಧಾರಣೆಗೆ ನೀಡಿದ ಅನೇಕ ಐತಿಹಾಸಿಕ ತೀರ್ಪುಗಳ ಬಗ್ಗೆ ಮಕ್ಕಳಿಗೆ ತಿಳಿಸುವ ಬದಲು, ಇಂತಹ ನಕಾರಾತ್ಮಕ ಅಂಶಗಳನ್ನು ಪ್ರಸ್ತಾಪಿಸಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಆದರೂ, ಪ್ರಜಾ ಪ್ರಭುತ್ವದಲ್ಲಿ ಯಾವ ಅಂಗವೂ ಪ್ರಶ್ನಾತೀತವಲ್ಲ. ಸುಧಾರಣೆಗಳು ಎಲ್ಲಾ ಅಂಗಗಳಲ್ಲೂ ಆಗಬೇಕಿದೆ.

ಧನ್ಯಶ್ರೀ, ಅಜ್ಜಂಪುರ

ADVERTISEMENT

ಪಾರದರ್ಶಕ ನೇಮಕಾತಿಗೆ ಗ್ಯಾರಂಟಿ ಬೇಕು

ರಾಜ್ಯ ಸರ್ಕಾರ ಒಳಮೀಸಲಾತಿಯ ನೆಪವನ್ನು ಮುಂದಿಟ್ಟುಕೊಂಡು ನೇಮಕಾತಿಗೆ ವಿಳಂಬ ಧೋರಣೆ ಅನುಸರಿಸಿತ್ತು. ಸದ್ಯ ಒಳಮೀಸಲಾತಿ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಮತ್ತೊಂದೆಡೆ ರಾಜ್ಯ ಸಚಿವ ಸಂಪುಟವು 56,432 ಹುದ್ದೆಗಳ ನೇಮಕಾತಿಗೆ ಒಪ್ಪಿಗೆ ನೀಡಿದೆ. ಸರ್ಕಾರದ ಈ ನಿರ್ಧಾರ ಸ್ವಾಗತಾರ್ಹ. ಆದರೆ, ಅಧಿಸೂಚನೆ ಪ್ರಕಟಿಸಿದರೆ ಸಾಲದು. ಕಾಲಮಿತಿಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದೆ. ಅಧಿಸೂಚನೆಯಲ್ಲಿ ತಾಂತ್ರಿಕದೋಷಗಳಿಗೆ ಎಡೆಮಾಡಿ ಕೊಟ್ಟು ಅಭ್ಯರ್ಥಿಗಳು ನ್ಯಾಯಾಲಯದ ಮೆಟ್ಟಿಲೇರ ದಂತೆ ಎಚ್ಚರವಹಿಸಬೇಕಿದೆ. ಹಲವು ವರ್ಷಗಳಿಂದ ಯುವಜನರು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ. ಹಾಗಾಗಿ, ಪ್ರಶ್ನೆಪತ್ರಿಕೆಗಳು ಸೋರಿಕೆಯಾಗದಂತೆ ಪಾರದರ್ಶಕವಾಗಿ ನೇಮಕಾತಿ ನಡೆಸಬೇಕಿದೆ.

ಸಂತೋಷ್, ಸವಳಂಗ

ಮೋದಿ ಪ್ರವಾಸ ಮತ್ತು ಯಾಂತ್ರಿಕ ಮಾತು

ಇಸ್ರೇಲ್‌ ಭೇಟಿ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ‘ಜಗತ್ತಿನಲ್ಲಿ ಭಯೋತ್ಪಾದನೆಗೆ ಯಾವುದೇ ಸ್ಥಳವಿಲ್ಲ’ ಎಂದು ಹೇಳಿದ್ದಾರೆ. ಈ ಮಾತು ಸಾಮಾನ್ಯವಾಗಿ ವಿದೇಶಿ ಪ್ರವಾಸಗಳಲ್ಲಿ ಹೇಳುವ ಮೊದಲೇ ಸಿದ್ಧಪಡಿಸಿದ ಯಾಂತ್ರಿಕ ಹೇಳಿಕೆಯಾಗಿದೆ. ‘ಗಾಜಾಪಟ್ಟಿಯಲ್ಲಿ ಶಾಂತಿ ಸ್ಥಾಪನೆಯಾಗಬೇಕು’ ಎಂದು ಪ್ರತಿಪಾದಿಸಿರುವುದು ಕೋಟೆಯೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ಡಿಬಾಗಿಲು ಹಾಕಿದಂತಿದೆ. ಅಲ್ಲಿ 20 ಸಾವಿರಕ್ಕೂ ಹೆಚ್ಚು ಮಕ್ಕಳ ಹತ್ಯೆ ಆಗಿದೆ. 60 ಸಾವಿರಕ್ಕೂ ಹೆಚ್ಚು ಜನರ ಕೊಲೆಯಾಗಿದೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಸಾವಿರಾರು ಕೋಟಿ ಮೌಲ್ಯದ ಆಸ್ತಿ ನಷ್ಟವಾಗಿದೆ. ಹಮಾಸ್ ದಾಳಿಗೆ ಪ್ರತೀಕಾರವೆಂಬಂತೆ ಇಸ್ರೇಲ್ ಸೇನೆಯು ಪ್ಯಾಲೆಸ್ಟೀನಿಯರ ಮೇಲೆ ಎಸಗಿದ ಭಯಂಕರ ನರಮೇಧ ಇದಾಗಿದೆ. ಇಂಥದೊಂದು ಮೈತ್ರಿ ಶಾಂತಿಪ್ರಿಯ ಭಾರತಕ್ಕೆ ಬೇಕಿತ್ತೆ?

ಪು.ಸೂ. ಲಕ್ಷ್ಮೀನಾರಾಯಣ ರಾವ್, ಬೆಂಗಳೂರು

ಕವಲು ಹಾದಿಯಲ್ಲಿ ಕನ್ನಡ ಸಿನಿಮಾ ರಂಗ

ಕನ್ನಡ ಚಿತ್ರರಂಗ ಕವಲು ದಾರಿಯಲ್ಲಿದೆ. ಪ್ರತಿ ವಾರ ಏಳೆಂಟು ಚಿತ್ರಗಳು ತೆರೆ ಕಾಣುತ್ತವೆ. ಇವುಗಳಲ್ಲಿ ಬೆರಳೆಣಿಕೆಯಷ್ಟು ಯಶಸ್ವಿಯಾಗುತ್ತವೆ. ಡಿಜಿಟಲ್ ಮತ್ತು ಒಟಿಟಿ ಯುಗದಲ್ಲಿ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ವೀಕ್ಷಿಸುವವರ ಸಂಖ್ಯೆ ಕಡಿಮೆ. 70ರ ದಶಕದಲ್ಲಿ ವಾರಕ್ಕೆ ಖ್ಯಾತ ನಟ, ನಟಿಯರ, ನಿರ್ದೇಶಕರ ಎರಡು ಚಿತ್ರಗಳು ಬಿಡುಗಡೆಯಾಗುತ್ತಿದ್ದವು. 100 ದಿನ ಪ್ರದರ್ಶನ ಕಾಣುತ್ತಿದ್ದವು. ಆಗ ಸಿನಿಮಾದ ಯಶಸ್ಸಿನ ಪ್ರಮಾಣ ಶೇ 20ರಷ್ಟಿತ್ತು. ಪ್ರತಿವಾರ ಹೆಚ್ಚಿನ ಆಯ್ಕೆಗಳಿದ್ದರೆ ಪ್ರೇಕ್ಷಕರಿಗೆ ಗೊಂದಲಗಳೇ ಜಾಸ್ತಿ. ಪ್ರಸ್ತುತ ಚಂದನವನಕ್ಕಿಂತ ಹೆಚ್ಚಿನ ಜನಕ್ಕೆ ಅತ್ತೆ–ಸೊಸೆ ಕಲಹದ ಧಾರಾವಾಹಿಗಳೇ ಹೆಚ್ಚು ಪ್ರಿಯವಾಗಿವೆ. 

ಎಚ್.ವಿ. ಶ್ರೀಧರ್, ಬೆಂಗಳೂರು

ಸರ್ಕಾರಿ ಆಸ್ಪತ್ರೆ ಎಡವಟ್ಟು ಕೊನೆಯಾಗಲಿ

ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಒಂದಲ್ಲ ಒಂದು ಎಡವಟ್ಟುಗಳು ನಡೆಯುತ್ತಿರು ವುದು ಬೇಸರದ ಸಂಗತಿ. ಇತ್ತೀಚೆಗೆ ವೈದ್ಯರ ನಿರ್ಲಕ್ಷದಿಂದ ಬಾಣಂತಿ ಮೃತಪಟ್ಟಿರುವುದು ವರದಿಯಾಗಿದೆ. ಮತ್ತೊಂದು ಪ್ರಕರಣದಲ್ಲಿ ಬಾಲಕನನ್ನು ಚಿಕಿತ್ಸೆಗೆ ಕರೆತಂದು ಸುಮಾರು ನಾಲ್ಕು ಗಂಟೆ ಕಾದರೂ ಚಿಕಿತ್ಸೆ ನೀಡಿಲ್ಲವೆಂದು ಆತನ ಕುಟುಂಬದವರು ಆಕ್ರೋಶ ಹೊರಹಾಕಿದ್ದಾರೆ. ಬಡವರ ಪಾಲಿನ ಏಕೈಕ ಆಶಾಕಿರಣವೆಂದರೆ ಸರ್ಕಾರಿ ಆಸ್ಪತ್ರೆ. ಇಲ್ಲಿಯೇ ಈ ರೀತಿ ಘಟನೆಗಳು ನಡೆದರೆ ಬಡವರ ಗತಿ ಏನು? ಜಿಲ್ಲಾಡಳಿತ ಈ ಕುರಿತು ಗಂಭೀರವಾಗಿ ಚಿಂತನೆ ನಡೆಸಬೇಕು. ಆಸ್ಪತ್ರೆಯಲ್ಲಿ ವೈದ್ಯರು ಉತ್ತಮವಾದ ಚಿಕಿತ್ಸೆ ನೀಡುವಂತೆ ಸೂಚನೆ ನೀಡಬೇಕು. ಹಿಮ್ಸ್ ಸೇರಿದಂತೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಭವಿಸುವ ಎಡವಟ್ಟುಗಳು ಇನ್ನಾದರೂ ಕೊನೆಗೊಳ್ಳಲಿ.

ಅಂಬಿಕಾ ಬಿ.ಟಿ., ಹಾಸನ

ಅರ್ಹರ ಸ್ವಾವಲಂಬನೆ: ದಕ್ಕದ ‘ಸಾರಥಿ’

ಸರ್ಕಾರವು ಬಡ ಮತ್ತು ಹಿಂದುಳಿದ ವರ್ಗದ ಜನರು ಸ್ವಾವಲಂಬಿಯಾಗಿ ಬದುಕಲು ‘ಸ್ವಾವಲಂಬಿ ಸಾರಥಿ’ ಯೋಜನೆಯನ್ನು ಜಾರಿಗೊಳಿಸಿದೆ. ಆದರೆ, ಈ ಯೋಜನೆ ಅರ್ಹ ಫಲಾನುಭವಿಗಳಿಗೆ ತಲಪುತ್ತಿಲ್ಲ. ಕೆಲವೆಡೆ ಕಾರುಮಂಜೂರಿಗೆ ಅಧಿಕಾರಿಗಳು ಮಧ್ಯವರ್ತಿಗಳ ಮೂಲಕ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂಬ ಆರೋಪಗಳಿವೆ. ಇದು ಬಡವರ ಹಕ್ಕುಗಳ ಸ್ಪಷ್ಟ ಉಲ್ಲಂಘನೆ. ಸರ್ಕಾರ ಈ ಬಗ್ಗೆ ತನಿಖೆ ನಡೆಸಬೇಕಿದೆ. ಅಕ್ರಮಗಳಿಗೆ ಕಡಿವಾಣ ಹಾಕಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲಪಿಸಲು ಕ್ರಮವಹಿಸ ಬೇಕಿದೆ. ಇಲ್ಲವಾದರೆ ಯೋಜನೆಯ ಉದ್ದೇಶವು ನಿರರ್ಥಕವಾಗಲಿದೆ.

 ಹನುಮಂತ ಆರ್., ಹುನಗುಂದ