ADVERTISEMENT

ವಾಚಕರ ವಾಣಿ: ಬೋರ್ಡ್ ಪರೀಕ್ಷೆ; ಥಾಣೆ ಪೊಲೀಸರ ಅನುಕರಣೀಯ ಕ್ರಮ

ವಾಚಕರ ವಾಣಿ
Published 8 ಫೆಬ್ರುವರಿ 2026, 23:30 IST
Last Updated 8 ಫೆಬ್ರುವರಿ 2026, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಥಾಣೆ ಪೊಲೀಸರ ಅನುಕರಣೀಯ ಕ್ರಮ

ಮಹಾರಾಷ್ಟ್ರದ ಥಾಣೆಯಲ್ಲಿ ಫೆ. 10 ಮತ್ತು 20ರಿಂದ 10ನೇ ಹಾಗೂ 12ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ಆರಂಭವಾಗಲಿದೆ. ಈ ವೇಳೆ ವಿದ್ಯಾರ್ಥಿಗಳಿಗೆ ಸಂಚಾರ ಸಮಸ್ಯೆ ಎದುರಾಗದಂತೆ ಎಚ್ಚರವಹಿಸಲು ಅಲ್ಲಿನ ಸಂಚಾರ ಪೊಲೀಸ್ ಇಲಾಖೆಯು ಟ್ರಾಫಿಕ್‌ ಪೊಲೀಸ್‌ ರೈಡರ್‌ಗಳನ್ನು ನಿಯೋಜಿಸಿದೆ. ಪರೀಕ್ಷೆಯ ದಿನಗಳಲ್ಲಿ ಸಂಚಾರದಟ್ಟಣೆ, ವಾಹನ ಅಥವಾ ಇತರೆ ಸಮಸ್ಯೆಗಳಿಂದ ವಿದ್ಯಾರ್ಥಿ ಗಳು ತೊಂದರೆ ಅನುಭವಿಸದಂತೆ ಈ ರೈಡರ್‌ಗಳು ಕಾರ್ಯ ನಿರ್ವಹಿಸಲಿದ್ದಾರೆ. ವಿದ್ಯಾರ್ಥಿಗಳನ್ನು ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಗಳಿಗೆ ತಲಪಿಸಲು ಸಹಾಯ ಮಾಡುತ್ತಾರೆ. ಪರೀಕ್ಷೆಯ ವೇಳೆ ವಿದ್ಯಾರ್ಥಿಗಳು ಮಾನಸಿಕ ಒತ್ತಡದಲ್ಲಿ ಇರುತ್ತಾರೆ. ಸಂಚಾರದಟ್ಟಣೆಯಲ್ಲಿ ಸಿಲುಕಿಕೊಂಡರೆ ಅವರ ಪರಿಸ್ಥಿತಿ ಹೇಳತೀರದು. ಕಳೆದ ವರ್ಷ ಸುಮಾರು 34 ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತಲಪಲು ರೈಡರ್‌
ಗಳು ನೆರವಾಗಿದ್ದಾರೆ. ಇಂತಹ ಯೋಜನೆ ಕರ್ನಾಟಕದಲ್ಲೂ ಕಾರ್ಯಗತವಾಗಲಿ

ADVERTISEMENT

-ಎ.ಜೆ. ಜಾವೀದ್, ಹಾಸನ

****

ಅಂಚೆ ಇಲಾಖೆ ದಕ್ಷತೆ ಮುಂದುವರಿದೀತೆ?

ನಾನು ನಿವೃತ್ತ ಅಂಚೆ ಪೇದೆ. ಇತ್ತೀಚೆಗೆ ಒಂದು ಲಕೋಟೆಯನ್ನು ರಾಮದುರ್ಗದ ಅಂಚೆ ಕಚೇರಿಯಿಂದ ಹುಬ್ಬಳ್ಳಿ ನವನಗರದಲ್ಲಿರುವ ನಿವೃತ್ತ ಸಿಜಿಎಚ್ಎಸ್ ಸೆಕ್ರೆಟರಿಗೆ ಜನವರಿಯಲ್ಲಿ ಪೋಸ್ಟ್ ಮಾಡಿದ್ದೆ. ಅದು ಅವರಿಗೆ ಮುಟ್ಟಿಲ್ಲ. ಡಿ. 27 ರಂದು ರಾಮದುರ್ಗದ ಕಚೇರಿಯಿಂದಲೇ ರಾಯಚೂರಿಗೆ ಸಾದಾ ಲಕೋಟೆ
ಯಲ್ಲಿ ಒಂದು ಪತ್ರ ಕಳುಹಿಸಿದ್ದೆ. ಅದು ಕೂಡ ತಲಪಿಲ್ಲ. ಈ ಮೊದಲು ಸಾದಾಪತ್ರ ಕಳುಹಿಸುವುದಕ್ಕೆ ಅಂಚೆ ಕಚೇರಿಯಲ್ಲಿ ಒಂದು ಫಾರ್ಮ್‌ಗೆ ಒಂದು ರೂಪಾಯಿಯ ಸ್ಟ್ಯಾಂಪ್ ಹಚ್ಚಿ ಠಸ್ಸೆ ಹಾಕಿ ಕೊಡುತ್ತಿದ್ದರು. ಅದು ಕಳುಹಿಸಿದ್ದಕ್ಕೆ ದಾಖಲೆಯಾಗು ತ್ತಿತ್ತು. ಈಗ ಅದನ್ನು ತೆಗೆದುಹಾಕಿದ್ದಾರೆ. ಇಲಾಖೆಯು ಸದಾಪತ್ರಗಳನ್ನು ಮುಟ್ಟು ತ್ತಿಲ್ಲ. ಸ್ಪೀಡ್‌ಪೋಸ್ಟ್‌ ದುಬಾರಿಯಾಗಿದೆ. ಬಡಜನರಿಗೆ ಅಷ್ಟು ದುಡ್ಡು ಕೊಟ್ಟು ಪತ್ರ ಕಳಿಸುವುದು ಅಸಾಧ್ಯ. ಸಾದಾಪತ್ರ ತಲಪಿಸದಿದ್ದರೆ ಅಂಚೆ ಕಚೇರಿಯ ವಿಶ್ವಾಸ ಉಳಿಯವುದಾದರೂ ಹೇಗೆ?

-ಬಿ.ಎಸ್. ಮುಳ್ಳೂರ, ಹಲಗತ್ತಿ

****

ನಕಲಿ ಪಿಎಚ್‌.ಡಿಗಳಿಗೆ ಲಗಾಮು ಅಗತ್ಯ ಯುಜಿಸಿ ಮಾನ್ಯತೆಗೆ ಒಳಪಟ್ಟ ವಿಶ್ವವಿದ್ಯಾಲಯಗಳು ಸಂಶೋಧನಾ ಮನೋಭಾವ ಬೆಳೆಸುವ ಉದ್ದೇಶದಿಂದ ಪಿಎಚ್.ಡಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸುವುದು ವಾಡಿಕೆ. ಅದರಂತೆ ಸರ್ಕಾರಿ ವಿ.ವಿಗಳ ಜೊತೆಗೆ ಸ್ವಾಯತ್ತ ವಿ.ವಿಗಳು, ಖಾಸಗಿ ವಿ.ವಿಗಳು ಹಾಗೂ ತಾಂತ್ರಿಕ ವಿ.ವಿಗಳು ಸಂಶೋಧನೆಗೆ ಅರ್ಜಿ ಆಹ್ವಾನಿಸು ತ್ತವೆ. ಯುಜಿಸಿ ನಿಯಮಗಳಿಗೆ ಅನುಗುಣವಾಗಿ ಕೆಲವೊಂದು ವಿ.ವಿಗಳಿವೆ. ಕೆಲವು ವಿ.ವಿಗಳು ಸ್ಥಳೀಯತೆಗೆ ಅನುಗುಣವಾಗಿ ಯುಜಿಸಿ ನಿಯಮಗಳನ್ನು ಗಾಳಿಗೆ ತೂರಿ ಸಂಶೋಧನೆಗೆ ಅವಕಾಶ ನೀಡುತ್ತಿವೆ. ಇದೇ ಸರ್ಕಾರಿ ಪ್ರಥಮದರ್ಜೆ ಕಾಲೇಜು ಗಳಲ್ಲಿ ನಕಲಿ ಪಿಎಚ್.ಡಿ ಪ್ರಮಾಣಪತ್ರ ಸಲ್ಲಿಸಿ ನೇಮಕಗೊಳ್ಳಲು ಕಾರಣವಾಗಿದೆ. ಇನ್ನೂ ಮುಂದಾದರೂ ನಕಲಿ ಪಿಎಚ್.ಡಿ ಪದವಿ ನೀಡುವ ವಿ.ವಿಗಳ ವಿರುದ್ಧ ಯುಜಿಸಿ ಕಠಿಣ ಕ್ರಮ ಜರುಗಿಸಬೇಕಿದೆ.

-ದಿವಾಕರ್‌ ಡಿ., ಮದ್ದೂರು

****

ನೇಮಕಾತಿ ತಡ: ಚುನಾವಣೆಗೆ ಬಹಿಷ್ಕಾರ

ರಾಜ್ಯದಲ್ಲಿ ಶಿಕ್ಷಕರ ಕೊರತೆಯಿಂದ ಸರ್ಕಾರಿ ಶಾಲೆಗಳ ಸ್ಥಿತಿ ಅಸ್ತವ್ಯಸ್ತಗೊಂಡಿದೆ. ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಸರ್ಕಾರ ಹಲವು ಬಾರಿ ಭರವಸೆ ನೀಡಿದರೂ, ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಶಾಲೆಗಳು ದುರ್ಬಲ ವಾದರೆ ಸಮಾಜ ದುರ್ಬಲವಾಗಲಿದೆ. ಆದರೆ, ನೇಮಕಾತಿ ವಿಷಯದಲ್ಲಿ ಸರ್ಕಾರದ್ದು ನಿರ್ಲಕ್ಷ್ಯದ ಧೋರಣೆ. ರಾಜ್ಯದಲ್ಲಿ ಸುಮಾರು 75 ಸಾವಿರ ಶಿಕ್ಷಕರ ಕೊರತೆಯಿದೆ. ಇದನ್ನು ಕಂಡೂಕಾಣದಂತೆ ಸರ್ಕಾರ ಉಚಿತ ಭಾಗ್ಯಗಳಲ್ಲಿ ತಲ್ಲೀನ ವಾಗಿದೆ. ತ್ವರಿತವಾಗಿ ಶಿಕ್ಷಕರ ನೇಮಕಾತಿ ಕೈಗೊಳ್ಳದಿದ್ದರೆ ಮುಂಬರುವ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸುವುದರ ಹೊರತು ಉದ್ಯೋಗಾಕಾಂಕ್ಷಿಗಳಿಗೆ ಅನ್ಯಮಾರ್ಗವಿಲ್ಲ.

-ಮುತ್ತು ಕುಂಟೋಜಿ, ದೇವರಹಿಪ್ಪರಗಿ

****

‘ಉರಿವ ಕೆಂಡದ ಸಿಟ್ಟು’ ಎಲ್ಲರದಾಗಲಿ...

ತಿದ್ದುವ ತಿವಿಯುವ ‘ಕಾವ್ಯಖಡ್ಗ’ ಲೇಖನದಲ್ಲಿ (ಲೇ: ವೈ.ಎಸ್.ವಿ. ದತ್ತ, ಪ್ರ.ವಾ., ಫೆ. 7) ‘ಚೈತ್ರದ ಕವಿ’ ಜಿ.ಎಸ್‌. ಶಿವರುದ್ರಪ್ಪರ ಜನ್ಮಶತಾಬ್ದಿ ವರ್ಷದಲ್ಲಿ ಅವರ ಕವಿತೆಗಳನ್ನು ವರ್ತಮಾನದ ಕಾಲಕ್ಕೆ ವಿಶ್ಲೇಷಣೆ ಮಾಡಿರುವುದು ಸೊಗಸಾಗಿದೆ. ಪ್ರಸ್ತುತ ಸಮಾಜದಲ್ಲಿ ಎದುರಾಗಿರುವ ಬಿಕ್ಕಟ್ಟುಗಳು ಒಂದೆರಡಲ್ಲ. ಅವುಗಳಿಗೆ ಪರಿಹಾರ ಹುಡುಕುವುದೇ ಸವಾಲಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮೊದಲು ನಮ್ಮಲ್ಲಿ ಸಾತ್ವಿಕ ಸಿಟ್ಟು ಮೂಡಬೇಕು. ಸಮಾಜದಲ್ಲಿ ಉರಿವ ಕೆಂಡದ ಉಂಡೆಯಾಗುವ ಈ ಸಾತ್ವಿಕ ಸಿಟ್ಟು ನಮ್ಮೆಲ್ಲರದ್ದಾಗಬೇಕಿದೆ.

-ಸುನಂದಾ ಜಯರಾಂ, ಮಂಡ್ಯ

****

ರೈಲ್ವೆ ಮತ್ತು ಮೌನವ್ರತಸ್ಥ ಸಂಸದರು

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ಯೋಜನೆಗಳ ಅನುಷ್ಠಾನಕ್ಕಾಗಿ ₹23,926 ಕೋಟಿ ಪಡೆದ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ₹7,748 ಕೋಟಿ ದಕ್ಕಿಸಿಕೊಂಡು ಕರ್ನಾಟಕ ಕೊನೇ ಸ್ಥಾನದಲ್ಲಿದೆ! ಸಂಸದರಾದ ವಿ. ಸೋಮಣ್ಣನವರೇ ಕೇಂದ್ರದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದಾರೆ. ಕರ್ನಾಟಕಕ್ಕೆ ದಕ್ಕಿರುವ ಅನುದಾನವನ್ನೇ ಭಾರೀ ಪ್ರಮಾಣದ್ದು ಎಂಬಂತೆ ಅವರು ಬಿಂಬಿಸುತ್ತಿರುವುದು ಹಾಸ್ಯಾಸ್ಪದ. ಕೇಂದ್ರದಲ್ಲಿ ಭವಿಷ್ಯದುದ್ದಕ್ಕೂ ಕೊನೆಯ ಸ್ಥಾನಕ್ಕೆ ತೃಪ್ತಿಪಡಬೇಕಾದ ‘ಕರ್ನಾಟಕದ ದೌರ್ಭಾಗ್ಯ’ಕ್ಕೆ ರಾಜ್ಯದ ‘ಮೌನವ್ರತಸ್ಥ ಸಂಸದ’ ಮಹಾಶಯರೇ ಕಾರಣಕರ್ತರು ಎಂಬುದಕ್ಕೆ ರೈಲ್ವೆ ಅನುದಾನವೇ ನಿದರ್ಶನ.

-ಸಿದ್ಧಲಿಂಗಸ್ವಾಮಿ ಹಿರೇಮಠ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.