ಪಿಂಚಣಿ
ಐ ಸ್ಟಾಕ್ ಚಿತ್ರ
ಹಳೆ ಪಿಂಚಣಿ ಮರುಜಾರಿಗೆ ವಿಳಂಬವೇಕೆ?
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕೆ
ಯಲ್ಲಿ ಎನ್ಪಿಎಸ್ ರದ್ದತಿ ಬಗ್ಗೆ ಘೋಷಿಸಿತ್ತು. ಹಳೆ ಪಿಂಚಣಿ ವ್ಯವಸ್ಥೆಯ ಮರು ಜಾರಿಗೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿಗಳ ಸಮಿತಿ ರಚಿಸಲಾಗಿದೆ. ಸಮಿತಿಯು ಇನ್ನೂ ಸರ್ಕಾರಕ್ಕೆ ವರದಿ ಸಲ್ಲಿಸಿಲ್ಲ. ಸರ್ಕಾರ ನೀಡಿದ್ದ ಭರವಸೆಯು ಆಶಾಗೋಪುರ ದಂತೆ ಕಾಣಿಸುತ್ತಿದೆಯೇ ಹೊರತು ಕೈಗೆಟಕುವಂತೆ ಕಾಣುತ್ತಿಲ್ಲ.
ಈಗಾಗಲೇ, ಕೆಲವು ರಾಜ್ಯಗಳು ಹಳೆ ಪಿಂಚಣಿ ವ್ಯವಸ್ಥೆಯನ್ನು ಮರುಜಾರಿಗೊಳಿಸಿವೆ. ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರವು ಒಪಿಎಸ್ ಮರುಜಾರಿಗೊಳಿಸುವುದಾಗಿ ಘೋಷಿಸಿದೆ. ಸರ್ಕಾರಿ ನೌಕರರು ನಿವೃತ್ತಿ ನಂತರ ಆರ್ಥಿಕ ಭದ್ರತೆ ಇಲ್ಲದೆ ತೊಂದರೆಗೆ ಸಿಲುಕಲಿದ್ದಾರೆ. ಅವರಿಗೆ ಸಂಧ್ಯಾಕಾಲದಲ್ಲಿ ಘನತೆಯಿಂದ ಬದುಕುವ ವಾತಾವರಣ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ.
-ಪಲ್ಲವಿ ಶಿವಕುಮಾರ್, ಶಿಕಾರಿಪುರ
****
ಪ್ರಚೋದಿತ ಪೋಸ್ಟರ್ ಅಳವಡಿಕೆ ಬೇಡ
ಕೆಎಸ್ಆರ್ಟಿಸಿ ಬಸ್ಗಳಲ್ಲಿ ‘ಬಾಯಲ್ಲಿ ಹೇಳಿ ಕೇಸರಿ’ ಎಂಬ ಪಾನ್ ಮಸಾಲದ ಪೋಸ್ಟರ್ಗಳು ರಾರಾಜಿಸುತ್ತಿವೆ. ಬಸ್ಗಳು ಒಳಗೊಂಡಂತೆ ಸಾರ್ವಜನಿಕ ಸ್ಥಳ ಗಳಲ್ಲಿ ಉತ್ತಮ ಸಂದೇಶ ಸಾರುವ ಜಾಹೀರಾತು ಇರಬೇಕೆ ಹೊರತು ಆರೋಗ್ಯಕ್ಕೆ ಹಾನಿಕಾರಕವಾಗುವ ಪೋಸ್ಟರ್ ಅಳವಡಿಕೆ ತಪ್ಪು. ವಿದ್ಯಾರ್ಥಿಗಳು ನಿತ್ಯವೂ ಬಸ್ಗಳಲ್ಲಿಯೇ ಶಾಲಾ–ಕಾಲೇಜಿಗೆ ಹೋಗುತ್ತಾರೆ. ಇಂತಹ ಪೋಸ್ಟರ್ಗಳು ಅವರಿಗೆ ಪ್ರಚೋದನೆ ನೀಡುತ್ತವೆ. ಇದರ ಬದಲು ಶಿಕ್ಷಣ, ಆರೋಗ್ಯ, ಕಾನೂನಿನ ಬಗ್ಗೆ ಅರಿವು ಮೂಡಿಸುವ ಪೋಸ್ಟರ್ ಅಳವಡಿಸುವುದು ಉತ್ತಮ. ಬಸ್ನಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸುವುದು ಹೆಚ್ಚು. ಅತಿಯಾದ ಮೊಬೈಲ್ ಬಳಕೆ ಯಿಂದಾಗುವ ಅನಾಹುತ ಕುರಿತು ಜಾಗೃತಿ ಮೂಡಿಸುವ ಮಾಹಿತಿಯೂ ಪೋಸ್ಟರ್ಗಳಲ್ಲಿ ಇರಲಿ.
-ಕಾವ್ಯ ಡಿ.ಎಂ., ಚಿಕ್ಕಮಗಳೂರು
****
ನಲಿ–ಕಲಿ: ವಿದ್ಯಾರ್ಥಿಗಳ ಕಲಿಕೆಗೆ ಭಾರವೆ?
ಶಾಲೆಗಳಲ್ಲಿ ‘ನಲಿ–ಕಲಿ’ ಅನುಷ್ಠಾನಗೊಂಡು ಎರಡು ದಶಕವಾಗಿದೆ. ಇದರ ಅನುಷ್ಠಾನ ವಿಫಲವಾಗಿರುವ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಶಿಕ್ಷಣ ಸಚಿವ ರಿಗೆ ಸಲ್ಲಿಸಿರುವ ವರದಿ ಆಂಶಿಕವಾಗಿದೆ. ಕ್ಷೇತ್ರ ಕಾರ್ಯದಲ್ಲಿರುವ ಶಿಕ್ಷಕರನ್ನು ಪ್ರಶ್ನೋತ್ತರಕ್ಕೆ ಒಳಪಡಿಸಿದಂತಿಲ್ಲ. ವರದಿಯಲ್ಲಿ ಉಲ್ಲೇಖಿಸಿದಂತೆ ಕಲಿಕಾ ಪೂರಕ ಸಾಮಗ್ರಿಗಳು ಪ್ರತಿವರ್ಷ ಬರುವುದಿಲ್ಲ. ಹಾಗೆಯೇ ಅನುದಾನದ ಕೊರತೆಯು ‘ನಲಿ–ಕಲಿ’ಯನ್ನು ಬಾಧಿಸುತ್ತಿದೆ. 80 ನಿಮಿಷದ ಅವಧಿ ಶಿಕ್ಷಕರಿಗೆ ಹೊರೆಯಾಗಿರ ಬಹುದು. ಮತ್ತೊಂದೆಡೆ ಸರ್ಕಾರಿ ಶಾಲೆಗಳಲ್ಲಿ ಹೊಸದಾಗಿ ಶಿಕ್ಷಕರ ನೇಮಕಾತಿ ನಡೆದಿಲ್ಲ. ‘ನಲಿ–ಕಲಿ’ ಶಿಕ್ಷಕರು ನಿವೃತ್ತಿಯ ಅಂಚಿನಲ್ಲಿದ್ದರೆ, ಕೆಲವರು ಮುಖ್ಯಶಿಕ್ಷಕ ರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಕಲಿಕಾ ಗುಣಮಟ್ಟ ನಿರೀಕ್ಷಿಸಲು ಸಾಧ್ಯವೆ? ಇಂದಿನ ಕೃತಕ ಬುದ್ಧಿಮತ್ತೆ ಯುಗದ ಮಕ್ಕಳ ಬೆಳವಣಿಗೆಗೆ ತಕ್ಕಂತೆ ಹೊಸ ಕಲಿಕಾ ವಿನ್ಯಾಸ ರೂಪಿಸುವ ಜರೂರಿದೆ.
-ರಾಜೇಂದ್ರಕುಮಾರ್ ಮುದ್ನಾಳ್, ಯಾದಗಿರಿ
****
ಬೆಳೆ ಸಮೀಕ್ಷೆಗಾರರ ಸಂಭಾವನೆ ಹೆಚ್ಚಲಿ
ಕೃಷಿ ಇಲಾಖೆಯಡಿ ಸೀಮಿತ ಅವಧಿಯ ಋತುಮಾನ ಆಧಾರಿತ ಬೆಳೆ ಸಮೀಕ್ಷೆಗಾರ
ರಾಗಿ ವಿದ್ಯಾವಂತ ಯುವಕ, ಯುವತಿಯರು ರಾಜ್ಯದಾದ್ಯಂತ ಕಾರ್ಯ ನಿರ್ವಹಿಸು ತ್ತಿದ್ದಾರೆ. ಅವರಿಗೆ ಪ್ರತಿ ಬೆಳೆ ಸಮೀಕ್ಷೆಗೆ ಬರೀ ಹನ್ನೊಂದು ರೂಪಾಯಿ ಸಂಭಾವನೆ ಕೊಡಲಾಗುತ್ತಿದೆ. ಈ ಸಂಭಾವನೆಯು ಇತರೆ ರಾಜ್ಯಗಳಿಗೆ ಹೋಲಿಸಿದರೆ ತೀರಾ ಕಡಿಮೆ. ಬೆಳೆ ಸಮೀಕ್ಷೆ ನಡೆಸುವಾಗ ಎದುರಾಗುವ ಸವಾಲುಗಳು ಒಂದೆರಡಲ್ಲ. ಹಾಗಾಗಿ, ರಾಷ್ಟ್ರಮಟ್ಟದಲ್ಲಿ ಸೂಕ್ತವಾದ ಸಂಭಾವನೆಯನ್ನು ನಿಗದಿಪಡಿಸಬೇಕಿದೆ.
-ದಿವಾಕರ್ ಡಿ., ಮದ್ದೂರು
****
ಸ್ಪೀಕರ್ ಹುದ್ದೆ ಮತ್ತು ಜನತಂತ್ರದ ಗೌರವ
ಲೋಕಸಭೆಯ ಸ್ಪೀಕರ್ ಎಂದರೆ ಯಾವುದೇ ಪಕ್ಷದ ಪ್ರತಿನಿಧಿಯಲ್ಲ. ಅದು ಸಂಪೂರ್ಣವಾಗಿ ನಿಷ್ಪಕ್ಷಪಾತ ಮತ್ತು ಸಂವಿಧಾನದ ಮೌಲ್ಯಗಳನ್ನು ಪ್ರತಿಬಿಂಬಿಸುವ ಸಾಂವಿಧಾನಿಕ ಹುದ್ದೆ. ಆದರೆ, ಓಂ ಬಿರ್ಲಾ ಅವರದ್ದು ಪಕ್ಷಪಾತದ ಧೋರಣೆ. ವಿಪಕ್ಷದ ನಾಯಕರು ಹಾಗೂ ಸದಸ್ಯರು ತಮ್ಮ ಅಭಿಪ್ರಾಯ ಮಂಡಿಸಲು ಪ್ರಯತ್ನಿಸಿ
ದಾಗ ಅವರಿಗೆ ಸೂಕ್ತ ಅವಕಾಶ ನೀಡದಿರುವುದನ್ನು ದೇಶದ ಜನರು ನೇರ ಪ್ರಸಾರಗಳಲ್ಲಿ ಕಂಡಿದ್ದಾರೆ. ಮತ್ತೊಂದೆಡೆ ಆಡಳಿತಾರೂಢ ಪಕ್ಷದ ಸದಸ್ಯರಿಗೆ ಹೆಚ್ಚಿನ ಅವಕಾಶ ನೀಡುವುದು ಪ್ರಜಾಪ್ರಭುತ್ವದ ಮೂಲತತ್ತ್ವಗಳಿಗೆ ಧಕ್ಕೆ ತರುತ್ತದೆ. ಜನರ ವಿಶ್ವಾಸ ಉಳಿಸುವುದು ಮತ್ತು ಪ್ರಜಾಪ್ರಭುತ್ವದ ಗೌರವ ಕಾಪಾಡುವುದು ಸ್ಪೀಕರ್ ಕರ್ತವ್ಯ. ನಿಷ್ಪಕ್ಷಪಾತವಾಗಿ ವರ್ತಿಸಬೇಕೆಂದು ಸ್ಪೀಕರ್ ಅವರಿಗೆ ಜನ ಸಾಮಾನ್ಯರು ಸಲಹೆ ನೀಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟಕರ.
-ಎಂ.ಎಸ್. ಅಲ್ಲಮ ಪ್ರಭು, ಬೆಂಗಳೂರು
****
ಕವಿಗೋಷ್ಠಿ: ಪಾರದರ್ಶಕ ಆಯ್ಕೆ ಇರಲಿ
ಸರ್ಕಾರದಿಂದ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನ, ಉತ್ಸವಗಳಲ್ಲಿ ಕವಿಗೋಷ್ಠಿ ನಡೆಯುವುದು ವಾಡಿಕೆ. ಗೋಷ್ಠಿಯಲ್ಲಿ ಭಾಗವಹಿಸಲು ಕೆಲ ವರು ಏನೆಲ್ಲಾ ಲಾಬಿ ನಡೆಸುವುದು ಗುಟ್ಟೇನಲ್ಲ. ಶಿಷ್ಟಾಚಾರದ ಹೆಸರಿನಲ್ಲಿ ಕಾಟಾಚಾರಕ್ಕೆ ಸ್ವರಚಿತ ಕವನಗಳನ್ನು ಆಹ್ವಾನಿಸುವ ಉದಾಹರಣೆಯೂ ಉಂಟು. ಇದಕ್ಕೆ ಹಂಪಿ ಉತ್ಸವ–2026ರ ಕವಿಗೋಷ್ಠಿಯೇ ಸಾಕ್ಷಿ. ಕವಿಗೋಷ್ಠಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕವನಗಳನ್ನು ಪ್ರತ್ಯೇಕವಾಗಿ ಸ್ವೀಕರಿಸಲಾಗಿದೆ. ಇದರಿಂದ ಪಾರದರ್ಶಕ ಆಯ್ಕೆ ಬಗ್ಗೆ ಗೊಂದಲ ಎದುರಾಗಿ ರುವುದು ಸಹಜ. ಮುಂದಿನ ವರ್ಷವಾದರೂ ಇಂತಹ ಗೊಂದಲಗಳಿಗೆ ತೆರೆ ಎಳೆಯಲಿ.
-ದಿನೇಶ್ ಎಸ್., ಪಾವಗಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.