
ಚುನಾವಣೆ: ಲೇಖಕಿಯರಿಗೇಕೆ ನಿರಾಸಕ್ತಿ?
ಡಿ. 14ರಂದು ನಡೆದ ಕರ್ನಾಟಕ ಲೇಖಕಿಯರ ಸಂಘದ ಚುನಾವಣೆಯಲ್ಲಿ ಶೇ 50ಕ್ಕೂ ಕಡಿಮೆ ಮತದಾನ ನಡೆದಿರುವುದು ವಿಷಾದದ ಸಂಗತಿ. ಮಹಿಳಾ ಮೀಸಲಾತಿ ಮತ್ತು ಸಮಾನತೆಗಾಗಿ ಹೋರಾಟಗಳು ನಡೆಯುತ್ತಿರುವ ಸಂದರ್ಭ ಇಂದಿನದು. ಪೂರ್ಣ ಮಹಿಳೆಯರೇ ಇರುವ, ಪ್ರಬುದ್ಧ ಎನ್ನಿಸಿಕೊಂಡು ಮಾದರಿ ಆಗಿರಬೇಕಾದ ಸಂಸ್ಥೆಯೊಂದರ ಚುನಾವಣೆಯಲ್ಲಿ ಅರ್ಧದಷ್ಟು ಲೇಖಕಿಯರು ಮತದಾನದಿಂದ ದೂರ ಉಳಿದಿರುವುದನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?
-ಪ್ರಕಾಶ್ ಮಲ್ಕಿಒಡೆಯರ್, ಹೂವಿನ ಹಡಗಲಿ
****
‘ಶಾಂತಿಯ ತೋಟ’ಕ್ಕೆ ದ್ವೇಷ ಭಾಷಣ ಸಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ದ್ವೇಷ ಭಾಷಣ ತಡೆಗೆ ಕಾನೂನು ತರುತ್ತಿರುವುದು ಸ್ವಾಗತಾರ್ಹ. ದ್ವೇಷ ಭಾಷಣಗಳು ಸಾಮಾಜಿಕ ಜಾಲತಾಣಗಳ ಮೂಲಕ ಕ್ಷಿಪ್ರವಾಗಿ ಜನರನ್ನು ತಲಪುತ್ತವೆ. ಈ ಭಾಷಣಗಳಿಂದ ಪ್ರಚೋದನೆಗೊಳ್ಳುವ ಜನ, ವಿಶೇಷವಾಗಿ ಯುವಜನ ಅಹಿತಕರ ಘಟನೆಗಳಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ಕೋಮು, ಧರ್ಮ, ಗಡಿ, ಭಾಷೆ ಸೇರಿದಂತೆ ಯಾವುದೇ ಕಾರಣಕ್ಕಾಗಿ ನಡೆಯುವ ಸಂಘರ್ಷದಿಂದ ಸಾಮಾಜಿಕ ಸ್ವಾಸ್ಥ್ಯ ಹಾಳಾಗಿ, ನಾಡಿನ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ದ್ವೇಷ ಭಾಷಣ ತಡೆ ಕಾನೂನು ಸಮರ್ಪಕವಾಗಿ ಜಾರಿಗೆ ಬಂದರೆ, ಕುವೆಂಪು ಅವರ ಆಶಯದ ‘ಸರ್ವ ಜನಾಂಗದ ಶಾಂತಿಯ ತೋಟ’ ರೂಪುಗೊಳ್ಳುತ್ತದೆ.
-ಎಸ್.ಎಂ. ಸಕ್ರಿ, ರಾಮದುರ್ಗ
****
ಶಾಮನೂರು: ವಿರೋಧಾಭಾಸಗಳ ವ್ಯಕ್ತಿತ್ವ
ಒಂದು ಮಟ್ಟದ ವಾಣಿಜ್ಯ ನಗರಿಯಾಗಿದ್ದ ದಾವಣಗೆರೆಯನ್ನು ಭರ್ಜರಿ ವ್ಯಾಪಾರ ನಗರಿಯನ್ನಾಗಿಸಿದ್ದಲ್ಲದೆ, ಮೌಲಿಕ ವಿದ್ಯಾನಗರಿಯನ್ನಾಗಿಯೂ ಮಾಡಿದ ಕೀರ್ತಿ ಶಾಮನೂರು ಶಿವಶಂಕರಪ್ಪ (ನಿಧನ: ಡಿ. 14) ಅವರದು. ಈ ಹಾದಿಯಲ್ಲಿ ಅವರು ಹೆಸರು ಗಳಿಸಿದರು, ಅಪಾರ ಹಣವನ್ನೂ ಗಳಿಸಿದರು. ವಿದ್ಯಾಕ್ಷೇತ್ರಕ್ಕೆ ದೊಡ್ಡ ಕೊಡುಗೆಯನ್ನು ನೀಡಿದರು; ಅದೇ ವೇಳೆ, ವೈದ್ಯಕೀಯ ವಿದ್ಯಾಭ್ಯಾಸವು ದುಬಾರಿ ಆಗುವಲ್ಲಿ ಪ್ರಮುಖ ಪಾತ್ರವನ್ನೂ ವಹಿಸಿದರು. ಒಂದಷ್ಟು ಕಾಲ ಹಲವು ಪ್ರಮುಖ ರಾಜಕಾರಣಿಗಳನ್ನು ಬೆರಳ ತುದಿಯಲ್ಲಿ ಕುಣಿಸಿದವರು ಅವರು. ಈ ಎಲ್ಲಾ ಕಾರಣಗಳಿಂದಾಗಿ ಅವರು ನನಗೆ ಅತಿ ವಿಶೇಷ ವ್ಯಕ್ತಿಯ ರೂಪದಲ್ಲಿ ಕಾಣಿಸುತ್ತಿದ್ದರು!
ದಾವಣಗೆರೆಯಲ್ಲಿ ಅವರ ಬಗ್ಗೆ ಒಂದು ಜೋಕ್ ಹರಿದಾಡುತ್ತಿತ್ತು. ಗೆಳೆಯರೊಡನೆ ಅವರು ತಾಜ್ ಮಹಲ್ ನೋಡಲು ಹೋದರಂತೆ. ತಾಜ್ ಎದುರಿಗೆ ಕುಳಿತು ಅದರ ಸೌಂದರ್ಯವನ್ನು ಸವಿಯುವ ಬದಲು, ಗೆಳೆಯರೊಡನೆ ಅಕ್ಕಿ ವ್ಯಾಪಾರದ ಬಗ್ಗೆ ಮಾತಾಡತೊಡಗಿದರಂತೆ!
-ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು
****
ವೇಗದ ಚಾಲನೆಗೆ ಪ್ರಾಣಿಗಳ ಬಲಿ ಬೇಡ
ಮೈಸೂರು–ಬೆಂಗಳೂರು ಎಕ್ಸ್ಪ್ರೆಸ್ ಹೈವೇ ವಾಹನ ಚಾಲಕರ ವೇಗದ ಚಾಲನೆಗೆ
ಅನುಕೂಲಕರವಾಗಿದೆ. ಆ ರಸ್ತೆಯಲ್ಲಿ ಮೂಕಪ್ರಾಣಿಗಳು ಓಡಾಡುವುದನ್ನು ವಾಹನ ಸವಾರರು ಗಮನಕ್ಕೆ ತೆಗೆದುಕೊಳ್ಳಬೇಕು. ಇತ್ತೀಚೆಗೆ ಮೈಸೂರಿನಿಂದ ಮಂಡ್ಯಕ್ಕೆ ದ್ವಿಚಕ್ರ ವಾಹನದಲ್ಲಿ ಎಕ್ಸ್ಪ್ರೆಸ್ ಹೈವೇಯ ಸರ್ವೀಸ್ ರಸ್ತೆಯಲ್ಲಿ ಬರುವಾಗ ನಾಲ್ಕೈದು ಕಡೆ ನಾಯಿಮರಿಗಳು ರಸ್ತೆಯಲ್ಲಿ ಸತ್ತು ಅಪ್ಪಚ್ಚಿಯಾಗಿ
ಇರುವುದನ್ನು ನೋಡಿ ಕರುಳು ಕಿವುಚಿದಂತಾಯಿತು. ಪ್ರಾಣಿಗಳದೂ ಜೀವವೇ ಎಂಬುದನ್ನು ವಾಹನ ಚಾಲನೆ ಮಾಡುವವರು ಅರಿತುಕೊಳ್ಳಬೇಕು.
-ಯೋಗೇಶ್ ವೈ.ಸಿ., ಮೈಸೂರು
****
ನಿರುದ್ಯೋಗ ಸಮಸ್ಯೆ: ಸರ್ಕಾರ ಸ್ಪಂದಿಸಲಿ
ಸರ್ಕಾರಿ ನೌಕರಿ ಹಂಬಲದಲ್ಲಿರುವ ತರುಣ ತರುಣಿಯರು ಸರ್ಕಾರದಿಂದ ಉದ್ಯೋಗ ನೇಮಕಾತಿ ಪ್ರಕ್ರಿಯೆ ನಡೆಯದೆ ಹೋದಾಗ ನಿರಾಶರಾಗುವುದು ಸಹಜ. ಈ ನಿರಾಶೆಯಲ್ಲಿ ಕೆಲವರು ಜೀವಹಾನಿ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ದೇಶದಲ್ಲಿ ಕೋಟ್ಯಂತರ ನಿರುದ್ಯೋಗಿಗಳಿದ್ದಾರೆ. ಉದ್ಯೋಗ ದೊರೆಯದಿರುವುದು ವ್ಯಕ್ತಿ ಸಾಮರ್ಥ್ಯದ ಪ್ರತಿಬಿಂಬವಲ್ಲ. ನಿರಾಶೆಯನ್ನು ದಾಟಿ ಪ್ರಯತ್ನ ಮುಂದುವರಿಸುವುದು ಅಗತ್ಯ. ಸರ್ಕಾರಿ ನೌಕರಿಗಿಂತಲೂ ಉತ್ತಮವಾದ ಖಾಸಗಿ ಅವಕಾಶಗಳು ಈಗ ಸಾಕಷ್ಟಿವೆ. ಸರ್ಕಾರವೂ ನಿರುದ್ಯೋಗಿಗಳ ಭಾವನೆಗಳಿಗೆ ಸ್ಪಂದಿಸಿ ವಿಳಂಬವಿಲ್ಲದೆ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು.
-ಲಾರೆನ್ಸ್ ಡಿಸೋಜಾ, ರಾಯಚೂರು
****
ನಾಡಪ್ರಭು ಪುತ್ಥಳಿ ಕತ್ತಲಿನಿಂದ ಹೊರಬರಲಿ
ಇತ್ತೀಚೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಹೋಗುವಾಗ, ಸರ್ಕಾರ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಕಣ್ತುಂಬಿಕೊಳ್ಳಬೇಕು ಎನ್ನಿಸಿತು. ಅಲ್ಲಿಗೆ ಹೋಗುವ ಮಾರ್ಗಸೂಚಿ ಫಲಕಗಳು ಕಣ್ಣಿಗೆ ಬೀಳಲಿಲ್ಲ. ಕತ್ತಲಿನಲ್ಲೇ ಕಣ್ಣಾಡಿಸುತ್ತಾ ಸಾಗಿದಾಗ, ಎಡಭಾಗದಲ್ಲಿ ಬೃಹತ್ ಮೂರ್ತಿಯ ಪಾರ್ಶ್ವವಷ್ಟೇ ಕಣ್ಣಿಗೆ ಬಿತ್ತು. ಹಿಂದಿರುಗುವಾಗಲೂ ಪೂರ್ಣವಾಗಿ ನೋಡುವುದು ಸಾಧ್ಯವಾಗಲಿಲ್ಲ. ಪ್ರತಿಮೆ ಕತ್ತಲಿನಿಂದ ಆವೃತವಾಗಿತ್ತು. ಪ್ರತಿಮೆಯ ಬಳಿ ಸಾಗಲು ಯಾವುದೇ ಹಾದಿ ದೊರಕಲಿಲ್ಲ. ಸಾರ್ವಜನಿಕರ ದರ್ಶನಕ್ಕೆ ದೊರಕದ ಕೆಂಪೇಗೌಡರ ಮೂರ್ತಿ ಏಕಾಂತವಾಸಿಯಾಗಿದೆ ಅನ್ನಿಸಿತು. ಸರ್ಕಾರದ ಅವಗಣನೆ ಸಲ್ಲದು. ರಾತ್ರಿಯಲ್ಲಿ ದೂರದಿಂದಲೇ ಮನಸೆಳೆಯುವಂತೆ ದೀಪಾಲಂಕಾರ ಮಾಡಲಿ. ಇಲ್ಲವಾದರೆ ಇಷ್ಟು ದೊಡ್ಡ ಮೂರ್ತಿ ಪ್ರತಿಷ್ಠಾಪಿಸಿದ್ದು ವ್ಯರ್ಥವಾಗುತ್ತದೆ.
-ಪತ್ತಂಗಿ ಎಸ್. ಮುರಳಿ, ಬೆಂಗಳೂರು
****
ದ್ವೇಷ ಭಾಷಣ!
ದ್ವೇಷವಿಲ್ಲದ ಭಾಷಣ
ಅದಾವುದಯ್ಯಾ?
ದ್ವೇಷವೇ
ಭಾಷಣಕ್ಕೆ ಭೂಷಣ!
ಭಾಷಣ ಮಾಡುವುದೇ
ದ್ವೇಷ ಕಾರುವುದಕ್ಕಾಗಿ!
ದ್ವೇಷ ಭಾಷಣಕ್ಕೆ ತಡೆ
ಭಾಷಣಕ್ಕೇ
ತಡೆ ಒಡ್ಡಿದಂತೆ!
-ಪಿ.ಜೆ. ರಾಘವೇಂದ್ರ, ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.