‘ಕೋವಿಡ್ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಯಾವ ರೀತಿಯ ಚಿಕಿತ್ಸೆ ನೀಡುತ್ತಿದ್ದಾರೆ ಎಂಬುದು ಸಂಬಂಧಿಕರಿಗೆ ತಿಳಿಯುತ್ತಿಲ್ಲ. ರೋಗಿಯ ಚಿಕಿತ್ಸೆಯ ಬಗ್ಗೆ ಪಾರದರ್ಶಕ ವ್ಯವಸ್ಥೆ ಆಗಲಿ’ ಎಂದು ನಟ ಜಗ್ಗೇಶ್ ಅವರು ಟ್ವೀಟ್ ಮಾಡಿ, ಅದನ್ನು ಮುಖ್ಯಮಂತ್ರಿಗೆ ಟ್ಯಾಗ್ ಮಾಡಿದ್ದಾರೆ (ಪ್ರ.ವಾ., ಏ. 28).
ಬಹುತೇಕ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಮಾಡುವ ಉಪಚಾರದ ಬಗ್ಗೆ ಅವರ ಸಂಬಂಧಿಕರನ್ನು ಕತ್ತಲೆಯಲ್ಲಿ ಇಡಲಾಗುತ್ತಿದೆ. ತನಗೆ ಬಂದಿರುವ ರೋಗ ಮತ್ತು ಅದನ್ನು ಗುಣಪಡಿಸಲು ಕೈಗೊಂಡ ಆರೈಕೆಯ ಬಗ್ಗೆ ತಿಳಿದುಕೊಳ್ಳುವುದು ರೋಗಿಯ ಹಕ್ಕಾಗಿರುತ್ತದೆ. ಕೆಲವೆಡೆ ಸಾಮಾನ್ಯ ರೋಗವನ್ನು ಮುಚ್ಚಿಟ್ಟು, ಕೋವಿಡ್ ಉಪಚಾರದ ನೆಪದಲ್ಲಿ ಸುಲಿಗೆ ಮಾಡುವುದು ಸಾಮಾನ್ಯ ಸಂಗತಿಯಾಗಿದೆ.
ಹಲವಾರು ಬಾರಿ ಆರೈಕೆಯ ಲೋಪದಿಂದಾಗಿ ವ್ಯತಿರಿಕ್ತ ಪರಿಣಾಮ ಮತ್ತು ಸಾವು ಸಂಭವಿಸಿದರೂ ಸಂಬಂಧಿಕರಿಗೆ ಲೋಪದ ಬಗ್ಗೆ ಮಾಹಿತಿಯೇ ಸಿಗುವುದಿಲ್ಲ. ಆದ್ದರಿಂದ ದಾಖಲಾದ ರೋಗಿಗೆ ಆಸ್ಪತ್ರೆಯವರು ತಾವು ನೀಡುತ್ತಿರುವ ಉಪಚಾರ, ಆರೈಕೆಯ ಮಾಹಿತಿಯನ್ನು ನೀಡಬೇಕು. ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಂದರ್ಭದಲ್ಲಿ ನೀಡುವ ವರದಿಯಲ್ಲಿ ಎಲ್ಲ ಮಾಹಿತಿಗಳನ್ನೂ ರೋಗಿಗೆ ಅರ್ಥವಾಗುವಂತೆ ದಾಖಲಿಸಬೇಕು. ಅದೇ ರೀತಿ, ವೈದ್ಯರು ನೀಡುವ ಸಲಹಾಪತ್ರವು ಎಲ್ಲರೂ ಓದುವಂತಿರಬೇಕೇ ವಿನಾ ಮೆಡಿಕಲ್ ಶಾಪಿನವರಿಗೆ ಮಾತ್ರ ತಿಳಿಯುವಂತಲ್ಲ!
-ಡಾ. ರುದ್ರೇಶ್ ಅದರಂಗಿ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.