ADVERTISEMENT

ಕನಕದಾಸ: ವಸಂತ ಕುಮಾರ್ ಸ್ಪಷ್ಟನೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 17 ನವೆಂಬರ್ 2019, 16:47 IST
Last Updated 17 ನವೆಂಬರ್ 2019, 16:47 IST
ಕನಕದಾಸ
ಕನಕದಾಸ   

ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ನವೆಂಬರ್‌ 15ರಂದು ನಾನು ಹೇಳಿದ ಮಾತು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಸ್ಪಷ್ಟನೆ. ನನ್ನ ಹೇಳಿಕೆ ಹೀಗಿತ್ತು:

ತಿರುಪತಿ ತಿಮ್ಮಪ್ಪನನ್ನು ಪ್ರಾರ್ಥಿಸಿ ಮಗು ಪಡೆದ ಬೀರಪ್ಪ– ಬಚ್ಚಮ್ಮ ದಂಪತಿಯು ಮಗುವಿಗೆ ತಿಮ್ಮಪ್ಪ ಎಂದು ನಾಮಕರಣ ಮಾಡಿದರು ಎಂಬುದು ಐತಿಹ್ಯ. ಇದು ಸತ್ಯವೋ ಸುಳ್ಳೋ ಮೂಢನಂಬಿಕೆಯೋ ಎನ್ನುವುದಕ್ಕಿಂತ ಅದರ ಹಿಂದಿನ ಆಶಯ ಮುಖ್ಯ. ಒಳ್ಳೆಯ ಮಗ ಬೇಕು ಎಂದು ದಂಪತಿ ಬೇಡಿ ಮಗು ಪಡೆದಿದ್ದಾರೆ. ಇಂದಿಗೂ ಅದು ಅಗತ್ಯ. ಸ್ವಾಮಿ ವಿವೇಕಾನಂದರು ‘ಪ್ರಾರ್ಥನೆ ಇಲ್ಲದೆ ಹುಟ್ಟುವ ಮಕ್ಕಳು ಸಮಾಜಕ್ಕೆ ಶಾಪಗಳಾಗುತ್ತಾರೆ’ ಎಂದಿದ್ದಾರೆ ಎಂದು ಉಲ್ಲೇಖಿಸಿದ್ದೇನೆ.

ನಿಧಿ ಸಿಕ್ಕ ಬಳಿಕ ಕನಕಕ್ಕೆ ದಾಸರಾಗಿ ಕನಕದಾಸರಾಗಲಿಲ್ಲ. ಕನಕವನ್ನು ದಾಸೋಹ ಮಾಡಿ ಕನಕದಾಸರಾಗಿದ್ದಾರೆ. ನಾವು ಗಳಿಸುವ ಧನಕನಕಗಳು ನಮ್ಮ ಸುಖಕ್ಕೆ ಮಾತ್ರವಲ್ಲ, ಅವು ಸಮಾಜದ ಕಲ್ಯಾಣಕ್ಕಾಗಿ ಎಂಬುದು ಅಲ್ಲಿನ ಆಶಯ. ರಣರಂಗದಲ್ಲಿ ತೀವ್ರ ಗಾಯಗೊಂಡಿದ್ದ ಕನಕದಾಸರು ಮೃತ್ಯುವನ್ನು ಗೆದ್ದು ಅಮೃತತ್ವದೆಡೆಗೆ ಸಾಗಿ ಸಂತಶ್ರೇಷ್ಠರಾದರು.

ADVERTISEMENT

ಕನಕರು ಉಡುಪಿಯ ಕೃಷ್ಣನನ್ನು ತಿರುಗಿಸಿದರು ಎಂಬುದರ ಅರ್ಥವು ಕೃಷ್ಣಭಕ್ತರನ್ನೂ ತಿರುಗಿಸಿದರು ಎಂಬುದಾಗಿದೆ. ಅವರು ಸಾಮಾಜಿಕ ಸಾಮರಸ್ಯದ ಹರಿಕಾರರು. ಕನಕದಾಸರು ತಮ್ಮನ್ನು ಹೊಲೆಯದಾಸ, ಮಾದಿಗದಾಸ, ಕುಲವಿಲ್ಲದ ಕುರುಬದಾಸ ಎಂದುಕೊಂಡಿದ್ದಾರೆ. ಇಲ್ಲಿ ಕುರುಬ ಎಂದರೆ ಅಷ್ಟಮದಗಳೆಂಬೋ ಕುರಿಗಳ ಕಾಯುವ ಕುರುಬ. ನಮಗೆ ಬೇಕಾಗಿರುವುದು ಕುಲವಿಲ್ಲದ ದಾಸ ಕನಕದಾಸ. ಆ ದಾರಿಯಲ್ಲಿ ಸಾಗೋಣ.

ನಾನಾಡಿರುವ ಮಾತುಗಳಲ್ಲಿ ತಪ್ಪಿದ್ದರೆ ನಾಡಿನ ಸರ್ವರ ಕ್ಷಮೆ ಕೋರುತ್ತೇನೆ.

ಡಾ. ಬಿ.ವಿ.ವಸಂತಕುಮಾರ್, ಅಧ್ಯಕ್ಷ, ಕರ್ನಾಟಕ ಸಾಹಿತ್ಯ ಅಕಾಡೆಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.