ಕಲಬುರ್ಗಿ ಜಿಲ್ಲೆಯಲ್ಲಿ ಪೊಲೀಸರು 101 ತೆಂಗಿನಕಾಯಿ ಒಡೆದು ಹರಕೆ ತೀರಿಸಿದ್ದು ತಿಳಿದು (ಪ್ರ.ವಾ., ಸೆ. 18) ಆಶ್ಚರ್ಯವಾಯಿತು. ಪೊಲೀಸರಿಗೆ ದೈವತ್ವದ ಮೇಲಿರುವ ನಂಬಿಕೆ ಬಗ್ಗೆ ನಾನು ಏನೂ ಹೇಳುವುದಿಲ್ಲ. ಆದರೆ ಅವರು ಹರಕೆ ತೀರಿಸಿದ ರೀತಿ ತುಸು ಬದಲಾಗಬೇಕಿತ್ತು. ವಿನೂತನವಾಗಿ ಹರಕೆ ತೀರಿಸಿ ಸಾರ್ವಜನಿಕರಿಗೆ ಮಾದರಿಯಾಗುವಂತಹ ಸದವಕಾಶವನ್ನು ಅವರು ತಪ್ಪಿಸಿಕೊಂಡರು.
ಹರಕೆ ತೀರಿಸುವ ಸಲುವಾಗಿ ಅಷ್ಟೂ ಕಾಯಿಗಳನ್ನು ಒಡೆಯುವ ಬದಲು, ಒಂದೆರಡು ತೆಂಗಿನಕಾಯಿ ಒಡೆದು ಉಳಿದವನ್ನು ಬಡಬಗ್ಗರಿಗೆ, ಅನಾಥಾಶ್ರಮಕ್ಕೆ ಉಚಿತವಾಗಿ ನೀಡಿದ್ದರೆ ಪೊಲೀಸರ ದೈಹಿಕ ಶ್ರಮ, ಸಮಯದ ಉಳಿತಾಯವಾಗುತ್ತಿತ್ತು. ಇದರಿಂದ ಜನರಿಗೆ ಪೊಲೀಸರ ಮೇಲೆ ಗೌರವ ಭಾವನೆಯೂ ಹೆಚ್ಚಾಗುತ್ತಿತ್ತು.ನಮ್ಮ ಹರಕೆ, ಆಚರಣೆಗಳು ಸಮಾಜೋಪಕಾರಿಯಾಗಿ ಬದಲಾದರೆ ಬಹುಶಃ ದೇವರಿಗೂ ಖುಷಿಯಾಗುವುದೇನೋ.
–ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.