ADVERTISEMENT

ಗತ ವರ್ಷ-2021| ಸಾಂಸ್ಕೃತಿಕ ಕ್ಷೇತ್ರದ ದಿಗ್ಗಜರ ಕಣ್ಮರೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2021, 20:25 IST
Last Updated 30 ಡಿಸೆಂಬರ್ 2021, 20:25 IST
   

ಬೆಂಗಳೂರು: ಕವಿಗಳು, ವಿದ್ವಾಂಸರು, ಸಾಹಿತಿಗಳು ಸೇರಿದಂತೆ ನಾಡಿನ ಸಾಂಸ್ಕೃತಿಕ ಲೋಕದ ಅನೇಕ ದಿಗ್ಗಜರು 2021ರಲ್ಲಿ ಇಹಯಾತ್ರೆ ಮುಗಿಸಿದರು. ಕಣ್ಮರೆಯಾದ ಚಿತ್ರರಂಗದ ಕಣ್ಮಣಿಗಳಿಗಾಗಿ ನಾಡಿನಾದ್ಯಂತ ಜನ ಕಂಬನಿ ಮಿಡಿದರು. ಇಬ್ಬರು ಶತಾಯುಷಿ ಸಾಧಕರ ಅಗಲುವಿಕೆಯ ಅನಾಥ ಭಾವವೂ ಈ ವರ್ಷ ಕಾಡಿತು.

lಕನ್ನಡದ ಜನಪ್ರಿಯ ಕವಿಗಳಲ್ಲಿ ಒಬ್ಬರಾದ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ (84) ಮಾ.6ರಂದು ನಿಧನರಾದರು.ಕನ್ನಡ ಸಾಹಿತ್ಯ ಲೋಕದಲ್ಲಿ ‘ಎನ್‌ಎಸ್‌ಎಲ್’ ಎಂದೇ ಮನೆಮಾತಾಗಿದ್ದರು. ಕಾವ್ಯ, ಸಾಹಿತ್ಯ ವಿಮರ್ಶೆ, ಅನುವಾದ, ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ಸೃಷ್ಟಿಸಿದ್ದಾರೆ. ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಕೃತಿ ರಚಿಸಿದ್ದಾರೆ.

lಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ಪ್ರೊ.ಎಂ.ಎ. ಹೆಗಡೆ (73) ಅವರು ಏ.18ರಂದು ನಿಧನರಾದರು.ಅವರಿಗೆ ಏ.12ರಂದು ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಯಕ್ಷಗಾನದಲ್ಲಿ ವೇಷಧಾರಿ, ತಾಳಮದ್ದಲೆಯ ಅರ್ಥಧಾರಿ, ಸಂಶೋಧಕ, ವಿಮರ್ಶಕ ಮತ್ತು ಪ್ರಸಂಗಕರ್ತರಾಗಿ ಕೆಲಸ ಮಾಡಿದ್ದರು.

ADVERTISEMENT

lನಿಘಂಟು ತಜ್ಞರೆಂದೇ ಪ್ರಸಿದ್ಧಿ ಹೊಂದಿದ್ದ ಖ್ಯಾತ ಭಾಷಾ ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ (108) ಅವರು ಏ.19ರಂದು ನಿಧನರಾದರು.ಕನ್ನಡ ಭಾಷೆ ಅಥವಾ ಪದಗಳ ಅರ್ಥವಿವರಣೆಗೆ ಹಾಗೂ ಭಾಷೆಗೆ ಸಂಬಂಧಿಸಿದ ಗೊಂದಲಗಳ ನಿವಾರಣೆಗೆ ಇಂದಿಗೂ ಅವರು ರಚಿಸಿದ ಕೃತಿಗಳನ್ನೇ ಆಧಾರವಾಗಿ ಬಳಸಲಾಗುತ್ತಿದೆ.

lಕವಿ ಜರಗನಹಳ್ಳಿ ಶಿವಶಂಕರ್ (72) ಅವರು ಮೇ 5ರಂದು ಹೃದಯಾಘಾತದಿಂದ ನಿಧನರಾದರು.

lಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್. ದೊರೆಸ್ವಾಮಿ (103) ಅವರು ಹೃದಯಾಘಾತದಿಂದ ಮೇ 26ರಂದು ನಿಧನರಾದರು.ರಾಜ್ಯದ ಹಿತಕ್ಕೆ ಮಾರಕವಾಗುವ ಯೋಜನೆಗಳು, ನೀತಿಗಳನ್ನು ನಿಷ್ಠುರ, ನಿರ್ದುಷ್ಟವಾಗಿ ಯಾರ ಹಂಗಿಗೂ ಒಳಗಾಗದಂತೆ ಟೀಕಿಸುತ್ತಿದ್ದ ಅವರು, ತಮ್ಮ ಪ್ರತಿಭಟನೆಯ ಮೂಲಕ ಸರ್ಕಾರವನ್ನು ಜಾಗೃತಗೊಳಿಸುತ್ತಿದ್ದರು.

lಸಾಹಿತಿ, ಕವಿ ಡಾ. ಸಿದ್ದಲಿಂಗಯ್ಯ ಅವರು (67) ಜೂ.11ರಂದು ಹೃದಯಾಘಾತದಿಂದ ನಿಧನರಾದರು. ಅವರ ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನಗಳು ಸಂಚಲನ ಸೃಷ್ಟಿಸಿದ್ದವು.

lಬಹುಭಾಷಾ ವಿದ್ವಾಂಸ ಕೆ.ಎಸ್. ನಾರಾಯಣಾಚಾರ್ಯ (89) ಅವರು ನ.26ರಂದು ನಿಧನರಾದರು.ಕನ್ನಡ, ಇಂಗ್ಲಿಷ್, ಸಂಸ್ಕೃತ ಹಾಗೂ ತಮಿಳು ಭಾಷೆಯಲ್ಲಿ ‘ರಾಮಾಯಣ’ದ ಬಗ್ಗೆ ಉಪನ್ಯಾಸ ನೀಡುತ್ತಿದ್ದ ಅವರು, ‘ರಾಮಾಯಣಾಚಾರ್ಯರು’ ಎಂದೇ ಜನಜನಿತರಾಗಿದ್ದರು.

ಚಲನಚಿತ್ರ ಕ್ಷೇತ್ರದ ಪ್ರಮುಖರು

l ನಟಿ ಪ್ರತಿಮಾ ದೇವಿ (88) ಏಪ್ರಿಲ್‌ನಲ್ಲಿ ನಿಧನರಾದರು.

l ನಟ ಶಂಖನಾದ ಅರವಿಂದ (70), ನಿರ್ದೇಶಕ ಅಭಿರಾಮ್ (34),ಚಲನಚಿತ್ರ ಸಾಹಿತಿ ಶ್ರೀರಂಗ (86) ಅವರು ಮೇ ತಿಂಗಳಲ್ಲಿ ನಿಧನರಾದರು.

l ಪೋಷಕ ನಟ ಸುರೇಶಚಂದ್ರ (69) ಅವರು ಜೂ.11ರಂದು ನಿಧನರಾದರು.

l ರಸ್ತೆ ಅಪಘಾತದಲ್ಲಿ ನಟ ಸಂಚಾರಿ ವಿಜಯ್ (42) ಅವರು ಜೂ.15ಕ್ಕೆ ನಿಧನರಾದರು. ಅವರು ಅಂಗಾಂಗಗಳನ್ನು ದಾನ ಮಾಡಿದ್ದರು.

lಪಾರ್ಶ್ವವಾಯು ಪೀಡಿತರಾಗಿದ್ದ ಪೋಷಕ ನಟಿ ಬಿ. ಜಯಾ (76) ಅವರು ಜೂನ್ ತಿಂಗಳಲ್ಲಿ ನಿಧನರಾದರು

l‘ಅಭಿನಯ ಶಾರದೆ’ ಎಂದೇ ಜನಪ್ರಿಯರಾಗಿದ್ದ ನಟಿ ಜಯಂತಿ (76) ಅವರು ಜುಲೈ 26ರಂದು ನಿಧನರಾದರು. ಅವರು ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸಿದ್ದರು. ಸುಮಾರು 500 ಚಿತ್ರಗಳಲ್ಲಿ ನಟಿಸಿದ್ದಾರೆ.

l ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲಿದ್ದ ಸತ್ಯಜಿತ್‌ (72) ಅವರು ಅ.10ರಂದು ನಿಧನರಾದರು.ವಯೋಸಹಜ ಅನಾರೋಗ್ಯದ ಸಮಸ್ಯೆಗಳ ಜೊತೆ 2016ರಲ್ಲಿ ಗ್ಯಾಂಗ್ರಿನ್‌ಗೆ ತುತ್ತಾಗಿ, ಒಂದು ಕಾಲನ್ನು ಅವರು ಕಳೆದುಕೊಂಡಿದ್ದರು.

l ಹೃದಯ ಸ್ತಂಭನದಿಂದ ನಟ ಪುನೀತ್ ರಾಜ್‌ಕುಮಾರ್ (46) ಅವರು ಅ.29ರಂದು ನಿಧನರಾದರು. ಅವರು 29 ಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸಿದ್ದರು. ಅವರ ಕಣ್ಣುಗಳನ್ನು ದಾನವಾಗಿ ಪಡೆದಿದ್ದ ನಾರಾಯಣ ನೇತ್ರಾಲಯ, ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ನಾಲ್ವರಿಗೆ ದೃಷ್ಟಿ ನೀಡಿದೆ.

lಮನೆಯಲ್ಲಿ ಬಿದ್ದು, ಮಿದುಳಿಗೆ ತೀವ್ರ ಗಾಯಮಾಡಿಕೊಂಡಿದ್ದ ನಟ ಶಿವರಾಂ (83) ಅವರು ಡಿ.4ಕ್ಕೆ ನಿಧನರಾದರು. ಆರು ದಶಕ ಸಿನಿಮಾ ರಂಗದಲ್ಲಿ ಬಣ್ಣ ಹಚ್ಚಿದ್ದ ಅವರು ಶಿವರಾಮಣ್ಣ ಎಂದೇ ಖ್ಯಾತಿ ಪಡೆದಿದ್ದರು.

l ನಿರ್ದೇಶಕ ಕೆ.ವಿ. ರಾಜು (67) ಅವರು ಡಿಸೆಂಬರ್‌ನಲ್ಲಿ ನಿಧನರಾದರು. ಬೆಳ್ಳಿ ಕಾಲುಂಗುರ, ಯುದ್ಧಕಾಂಡ ಸೇರಿದಂತೆ 50ಕ್ಕೂ ಅಧಿಕ ಚಿತ್ರಗಳನ್ನು ನಿರ್ದೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.