ADVERTISEMENT

ಮೊಹಮ್ಮದ್ ಸಿರಾಜ್ ಕ್ರೀಡಾಸ್ಫೂರ್ತಿಗೆ ಮನಸೋತ ಕ್ರೀಡಾಲೋಕ

ಪಿಟಿಐ
Published 12 ಡಿಸೆಂಬರ್ 2020, 10:58 IST
Last Updated 12 ಡಿಸೆಂಬರ್ 2020, 10:58 IST
ಮೊಹಮ್ಮದ್ ಸಿರಾಜ್
ಮೊಹಮ್ಮದ್ ಸಿರಾಜ್   

ಸಿಡ್ನಿ: ಆಸ್ಟ್ರೇಲಿಯಾ ವಿರುದ್ದ ನಡೆಯಲಿರುವ ಬಹುನಿರೀಕ್ಷಿತ ಟೆಸ್ಟ್ ಸರಣಿಗೂ ಮುನ್ನ ಪೂರ್ವ ಸಿದ್ಧತೆಗಾಗಿ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಭಾರತೀಯ ಕ್ರಿಕಟಿಗ ಮೊಹಮ್ಮದ್ ಸಿರಾಜ್ ಕ್ರೀಡಾಸ್ಫೂರ್ತಿಯು ಕ್ರೀಡಾ ವಲಯದಿಂದ ವ್ಯಾಪಕ ಮನ್ನಣೆಗೆ ಪಾತ್ರವಾಗಿದೆ.

ಆಸ್ಟ್ರೇಲಿಯಾ 'ಎ' ತಂಡದ ವಿರುದ್ಧ ನಡೆಯುತ್ತಿರುವ ಪಿಂಕ್ ಬಾಲ್ ಅಭ್ಯಾಸ ಪಂದ್ಯದ ಮೊದಲ ದಿನದಾಟದಲ್ಲಿ ಘಟನೆ ನಡೆದಿತ್ತು. 11ನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದ ಸಿರಾಜ್, ಜಸ್‌ಪ್ರೀತ್ ಬೂಮ್ರಾ ಜೊತೆಗೆ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾಗಿ ಭಾರತ ತಂಡವನ್ನು ಸನ್ಮಾನ ಜನಕ ಮೊತ್ತದತ್ತ ಮುನ್ನಡೆಸಿದರು.

ಈ ನಡುವೆ ಸ್ಟ್ರೈಕ್‌ನಲ್ಲಿದ್ದ ಬೂಮ್ರಾ ಡ್ರೈವ್ ಹೊಡೆದ ಚೆಂಡು ಬೌಲರ್ ಕ್ಯಾಮರೂನ್ ಗ್ರೀನ್, ಕ್ಯಾಚ್ ಹಿಡಿಯಲೆತ್ನಿಸಿದಾಗ ತಲೆಗೆ ಅಪ್ಪಳಿಸಿತ್ತು. ಇನ್ನೊಂದು ತುದಿಯಲ್ಲಿದ್ದ ಸಿರಾಜ್, ರನ್ ಕಸಿದುಕೊಳ್ಳುವ ಯಾವುದೇ ಯೋಚನೆ ಮಾಡದೇ ತಕ್ಷಣ ಗ್ರೀನ್ ಬಳಿ ನೆರವಿಗೆ ಧಾವಿಸಿದರು. ಬಳಿಕ ಗ್ರೀನ್ ಆರೋಗ್ಯ ಪರಿಶೀಲಿಸಿದ ಸಿರಾಜ್, ಪ್ರಥಮ ಚಿಕಿತ್ಸೆ ನೀಡಲು ನೆರವಾದರು.

ಪಂದ್ಯದಲ್ಲಿ ಕ್ಯಾಮರೂನ್ ಗ್ರೀನ್ ಕನ್‌ಕಷನ್ ಬದಲಿ ಆಟಗಾರನಾಗಿ ಪ್ಯಾಟ್ರಿಕ್ ರೋನ್ ಅವರನ್ನು ಆಡಿಸಲಾಯಿತು. ಪ್ರಸ್ತುತ ಸಿರಾಜ್, ಸ್ಪಿರಿಟ್ ಆಫ್ ಕ್ರಿಕೆಟ್ ವಿಶೇಷವಾಗಿ ಉಲ್ಲೇಖಿಸಿರುವ ಆಸ್ಟ್ರೇಲಿಯಾ ಮಾಧ್ಯಮಗಳು, ಭಾರತೀಯ ಕ್ರಿಕೆಟಿಗನ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದೆ.

ಆಸೀಸ್ ಪ್ರವಾಸ ಕೈಗೊಂಡ ವೇಳೆಯಲ್ಲಷ್ಟೇ ಮೊಹಮ್ಮದ್ ಸಿರಾಜ್, ತಮ್ಮ ಅಪ್ಪನನ್ನು ಕಳೆದುಕೊಂಡರು. ಆದರೂ ದೇಶ ಸೇವೆಗೆ ಮೊದಲ ಆದ್ಯತೆ ನೀಡಿರುವ ಸಿರಾಜ್, ತಂಡದ ಜೊತೆಗೆ ಉಳಿದುಕೊಳ್ಳಲು ನಿರ್ಧರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.