ADVERTISEMENT

ಚಿನ್ನಸ್ವಾಮಿ ಮೈದಾನಕ್ಕೆ ಎ.ಐ.ಕ್ಯಾಮೆರಾ ಅಳವಡಿಕೆ: ಪ್ರಸ್ತಾವ ಸಲ್ಲಿಸಿದ ಆರ್‌ಸಿಬಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 10:21 IST
Last Updated 16 ಜನವರಿ 2026, 10:21 IST
   

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪಂದ್ಯಗಳ ಸಂದರ್ಭದಲ್ಲಿ ಜನಸಮೂಹದ ಚಲನವಲನದ ಮೇಲೆ ಕಣ್ಗಾವಲು ಇಡಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಧಾರಿದ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಪ್ರಸ್ತಾವ ಸಲ್ಲಿಸಿದೆ. 

‘ಆರ್‌ಸಿಬಿಯು ತನ್ನ ತವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಸಲದ ಪಂದ್ಯಗಳನ್ನು ಆಯೋಜಿಸಲು ಈಗಲೂ ಸಿದ್ಧವಾಗಿದೆ. ಒಂದೊಮ್ಮೆ ರಾಜ್ಯ ಸರ್ಕಾರದ ಅನುಮತಿ ದೊರೆಯದೇ ಹೋದರೆ ರಾಯಪುರ ಅಥವಾ ನವೀ ಮುಂಬೈ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ನಡೆಸುವ ಆಯ್ಕೆಗಳನ್ನು ಕಾದಿರಿಸಿಕೊಂಡಿದೆ’  ಎಂದು ಫ್ರ್ಯಾಂಚೈಸಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. 

ಈ ಹಿನ್ನೆಲೆಯಲ್ಲಿ ಒಂದೊಮ್ಮೆ ರಾಜ್ಯ ಸರ್ಕಾರದಿಂದ ಪಂದ್ಯಗಳಿಗೆ ಅನುಮತಿ ದೊರೆತರೆ ಪ್ರೇಕ್ಷಕರ ಸುರಕ್ಷತೆಗಾಗಿ ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಮಾಡಲು ಆರ್‌ಸಿಬಿ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಕೆಎಸ್‌ಸಿಗೆ ಎಐ ಕ್ಯಾಮೆರಾಗಳ ಅಳವಡಿಕೆಯ ಪ್ರಸ್ತಾವ ಸಲ್ಲಿಸಿದೆ.  ಕ್ರೀಡಾಂಗಣದಲ್ಲಿ 300 ರಿಂದ 350  ಎ.ಐ. ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಲು ತಗಲುವ ಅಂದಾಜು ₹ 4.50 ಕೋಟಿ ವೆಚ್ಚವನ್ನು (ಏಕಪಾವತಿ) ಭರಿಸಲು ಕೂಡ ತಾವು ಬದ್ಧ ಎಂದು ತಿಳಿಸಿದೆ. 

ADVERTISEMENT

‘ಈ ಕ್ಯಾಮೆರಾಗಳನ್ನು ಅಳವಡಿಸುವುದರಿಂದ ಕ್ರೀಡಾಂಗಣದಲ್ಲಿ ಸೇರುವ ಜನರ ಪ್ರತಿಯೊಂದು ಚಲನವಲನದ ಮೇಲೂ ನಿಗಾ ಇಡಬಹುದು.  ಸರದಿ ಸಾಲುಗಳ ನಿರ್ವಹಣೆ, ಜನರ ಆಗಮನ ಮತ್ತು ನಿರ್ಗಮನದ ದತ್ತಾಂಶಗಳ ಸಂಗ್ರಹ ಮಾಡಬಹುದು. ಜನರ ಸರದಿ ಸಾಲುಗಳ ನಿರ್ವಹಣೆ ಹಾಗೂ ಕ್ಷಣಕ್ಷಣದ ಮಾಹಿತಿಯನ್ನು ಪಡೆಯಲು ಸಾಧ್ಯವಾಗುವುದು. ಇದರಿಂದಾಗಿ ಯಾವುದೇ ರೀತಿಯ ಅವಘಡಗಳನ್ನು ತಪ್ಪಿಸಬಹುದು. ಪ್ರೇಕ್ಷಕರ ಸಂಪೂರ್ಣ ಸುರಕ್ಷತೆಗೆ ಅನುಕೂಲವಾಗಲಿದೆ’ ಎಂದು ಪ್ರಕಣೆಯಲ್ಲಿ ಉಲ್ಲೇಖಿಸಲಾಗಿದೆ. 

‘ಎ.ಐ. ವಿಡಿಯೋ ವಿಶ್ಲೇಷಣಾ ಸಾಮರ್ಥ್ಯದಿಂದ ಹಿಂಸಾಚಾರ, ಅನಧಿಕೃತ ಪ್ರವೇಶ ಮತ್ತು ಒಳನುಸುಳುವಿಕೆಯಂತಹ ಘಟನೆಗಳನ್ನು ಶೀಘ್ರವಾಗಿ ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ, ತ್ವರಿತ ಮತ್ತು ಪರಿಣಾಮಕಾರಿ ಕಾನೂನು ಕ್ರಮ ಜಾರಿ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ.  ಈ ತಂತ್ರಜ್ಞಾನ ವ್ಯವಸ್ಥೆಯನ್ನು ಮಾಡಲು ‘ಸ್ಟಾಕ್‌ ಕಂಪೆನಿ’ಯೊಂದಿಗೆ ಆರ್‌ಸಿಬಿ ಪಾಲುದಾರಿಕೆ ಹೊಂದಿದೆ. ಈ ಕಂಪೆನಿಯು ಬೇರೆ ಬೇರೆ ರಾಜ್ಯಗಳಲ್ಲಿ ಪೊಲೀಸ್‌ ಇಲಾಖೆಯೊಂದಿಗೆ ಕಾರ್ಯನಿರ್ವಹಿಸಿದೆ. ಸಂಚಾರ ಸುವ್ಯವಸ್ಥೆ ನಿವರ್ಹಣೆ, ಜೈಲುಗಳಲ್ಲಿ ತಂತ್ರಜ್ಞಾನ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ. 

ಜೂನ್ 4ರಂದು ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಜನರು ದುರ್ಮರಣಕ್ಕೀಡಾಗಿದ್ದರು. ಅದರಿಂದಾಗಿ ರಾಜ್ಯ ಸರ್ಕಾರ ನೇಮಕ ಮಾಡಿದ್ದ ಸಮಿತಿಯು ಕ್ರೀಡಾಂಗಣದಲ್ಲಿ ಕೆಲವು ಮಾರ್ಪಾಡುಗಳನ್ನು ಸೂಚಿಸಿತ್ತು.  ಈ ಕಾಮಗಾರಿಗಳ ಪರಿಶೀಲನೆಗಾಗಿ ವಿವಿಧ ಇಲಾಖೆಗಳ ಅಧಿಕಾರಿಗಳು ಇರುವ ಕಾರ್ಯಪಡೆಯೊಂದನ್ನೂ ರಚಿಸಲಾಗಿದೆ.‌

ಮಾರ್ಚ್ 26ರಿಂದ ಐಪಿಎಲ್ ಆರಂಭವಾಗಲಿದೆ. ನಿಯಮದ ಪ್ರಕಾರ ಟೂರ್ನಿಗೆ ಕನಿಷ್ಠ ಒಂದು ತಿಂಗಳು ಮುನ್ನ ಪಂದ್ಯಗಳ ಆಯೋಜಕರಿಗೆ ಕ್ರೀಡಾಂಗಣವನ್ನು ವಹಿಸಿಕೊಡಬೇಕು. ಆ ಮೂಲಕ ಸಿದ್ಧತೆಗಳಿಗೆ ಅನುವು ಮಾಡಿಕೊಡಬೇಕು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.