ADVERTISEMENT

ಗೋವಾ ತಂಡದತ್ತ ಅರ್ಜುನ್ ತೆಂಡೂಲ್ಕರ್

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 15:40 IST
Last Updated 11 ಆಗಸ್ಟ್ 2022, 15:40 IST
ಅರ್ಜುನ್ ತೆಂಡೂಲ್ಕರ್
ಅರ್ಜುನ್ ತೆಂಡೂಲ್ಕರ್   

ನವದೆಹಲಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ಮುಂಬೈ ಕ್ರಿಕೆಟ್ ತಂಡವನ್ನು ತೊರೆದು ಗೋವಾ ತಂಡ ಸೇರುವ ಸಿದ್ಥತೆ ನಡೆಸಿದ್ದಾರೆ.

ಮುಂಬರುವ ದೇಶಿ ಕ್ರಿಕೆಟ್ ಋತುವಿನಲ್ಲಿ ಗೋವಾ ತಂಡದಲ್ಲಿ ಆಡಲು ನಿರಾಕ್ಷೇಪಣಾ ಪತ್ರ ನೀಡಬೇಕು ಎಂದು ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ)ಗೆ ಮನವಿಪತ್ರ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.

ಈ ಬಾರಿಯ ದೇಶಿ ಋತುವಿನಲ್ಲಿ ಆಡುವ ಮುಂಬೈನ ತಂಡದಲ್ಲಿ ಅವರನ್ನು ಆಯ್ಕೆ ಮಾಡಿಲ್ಲ. ಇದೇ ಕಾರಣಕ್ಕೆ ಬೇಸರಗೊಂಡಿರುವ ಅವರು ಈ ನಿರ್ಧಾರಕ್ಕೆ ಕೈಗೊಳ್ಳುತ್ತಿದ್ದಾರೆನ್ನಲಾಗಿದೆ.

ADVERTISEMENT

22 ವರ್ಷದ ಎಡಗೈ ಮಧ್ಯಮವೇಗಿ ಅರ್ಜುನ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. 2020–21ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಅವರು ಮುಂಬೈ ತಂಡದಲ್ಲಿದ್ದರು. ಆ ಟೂರ್ನಿಯಲ್ಲಿ ಹರಿಯಾಣ ಹಾಗೂ ಪುದುಚೇರಿ ಎದುರಿನ ಪಂದ್ಯಗಳಲ್ಲಿ ಆಡಿದ್ದರು.

‘ಅರ್ಜುನ್ ತಮ್ಮ ಆಟವನ್ನು ಉತ್ಕೃಷ್ಟಗೊಳಿಸಿಕೊಳ್ಳಲು ಹೆಚ್ಚು ಪಂದ್ಯಗಳಲ್ಲಿ ಆಡುವ ಅವಶ್ಯಕತೆ ಇದೆ. ಅವರು ಸ್ಥಳಾಂತರಗೊಳ್ಳುವುದರಿಂದ ಸುಧಾರಣೆಗೆ ಅನುಕೂಲವಾಗಲಿದೆ ಎಂಬ ವಿಶ್ವಾಸವಿದೆ. ಅಲ್ಲಿ ಅವರಿಗೆ ಹೆಚ್ಚು ಪಂದ್ಯಗಳಲ್ಲಿ ಆಡುವ ಅವಕಾಶ ಸಿಗಬಹುದು’ ಎಂದು ಎಸ್‌ಆರ್‌ಟಿ ಸ್ಪೋರ್ಟ್ಸ್‌ ಮ್ಯಾನೇಜ್‌ಮೆಂಟ್ ಪ್ರಕಟಣೆಯಲ್ಲಿ ತಿಳಿಸಿದೆ.

ಮೂರು ವರ್ಷಗಳ ಹಿಂದೆ ಅರ್ಜುನ್ ಶ್ರೀಲಂಕಾ ಎದುರಿನ 19 ವರ್ಷದೊಳಗಿನವರ ಸರಣಿಯ ಎರಡು ಟೆಸ್ಟ್‌ಗಳಲ್ಲಿ ಆಡಿದ್ದರು. ದೇಶಿ ಕ್ರಿಕೆಟ್‌ನಲ್ಲಿ ಮುಂಬೈ ಏಕದಿನ ತಂಡದ ಬಳಗದಲ್ಲಿಯೂ ಸ್ಥಾನ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.