ಭಾರತದ ತಿಲಕ್ ವರ್ಮಾ
ಹೈದರಾಬಾದ್: ಏಷ್ಯಾಕಪ್ ಗೆಲ್ಲುವುದು ಆಕ್ರಮಣಕಾರಿ ಎದುರಾಳಿಗೆ ನಾವು ನೀಡುವ ಉತ್ತಮ ಪ್ರತ್ಯುತ್ತರವಾಗಿತ್ತು ಎಂದು ಏಷ್ಯಾ ಕಪ್ ಫೈನಲ್ ಪಂದ್ಯದ ಹೀರೊ ತಿಲಕ್ ವರ್ಮಾ ಮಂಗಳವಾರ ಹೇಳಿದ್ದಾರೆ. ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಕ್ರೀಸ್ಗೆ ಬಂದಾಗ ಪಾಕ್ ಆಟಗಾರರ ಅನಗತ್ಯ ಹೇಳಿಕೆಗಳು ಹಾಗೂ ಆರಂಭಿಕ ಒತ್ತಡವನ್ನು ಎದುರಿಸಬೇಕಾಯಿತು ಎಂದು ಅವರು ತಿಳಿಸಿದರು.
ತಿಲಕ್ ವರ್ಮಾ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಅಮೋಘ 69 ರನ್ ಸಿಡಿಸಿದ್ದಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ದುಬೈನಿಂದ ಹೈದರಾಬಾದ್ಗೆ ಬರುತ್ತಿದ್ದಂತೆ ಪಂದ್ಯದ ಕುರಿತು ಪ್ರತಿಕ್ರಿಯೆ ನೀಡಿದ ಅವರು, 'ಆರಂಭದಲ್ಲಿ ಸ್ವಲ್ಪ ಒತ್ತಡ ಮತ್ತು ಆತಂಕವಿತ್ತು. ಆದರೆ ನಾನು ನನ್ನ ದೇಶಕ್ಕಾಗಿ ಪಂದ್ಯ ಗೆಲ್ಲಬೇಕೆಂದುಕೊಂಡಿದ್ದೆ. ನಾನು ಒತ್ತಡಕ್ಕೆ ಒಳಗಾದರೆ, ನನ್ನನ್ನು ಹಾಗೂ ದೇಶದ 140 ಕೋಟಿ ಜನರನ್ನು ನಿರಾಸೆಗೊಳಿಸುತ್ತೇನೆ ಎಂಬುದು ನನಗೆ ತಿಳಿದಿತ್ತು' ಎಂದರು.
'ನಾನು ಚಿಕ್ಕವನಿದ್ದಾಗಿನಿಂದ ನನ್ನ ತರಬೇತುದಾರರ ಬಳಿ ಕಲಿತ ವಿದ್ಯೆಯ ಬಗ್ಗೆ ವಿಶ್ವಾಸ ಇಟ್ಟಿದ್ದೆ. ಪಾಕಿಸ್ತಾನ ಆಟಗಾರರಿಗೆ ನಮ್ಮ ಉತ್ತಮ ಉತ್ತರವೆಂದರೆ ಪಂದ್ಯವನ್ನು ಗೆಲ್ಲುವುದಾಗಿತ್ತು. ನಾವು ಅದನ್ನೇ ಮಾಡಿದೆವು‘ ಎಂದು ಹೇಳಿದರು.
ಪಂದ್ಯದ ಸಮಯದಲ್ಲಿ ಪಾಕಿಸ್ತಾನದ ಆಟಗಾರರು ತೀವ್ರವಾಗಿ ನನ್ನನ್ನು ಕೆಣಕಲು ಯತ್ನಿಸಿದ. ಆದರೆ, ನಾನು ಮಾತ್ರ ಮೌನವಾಗಿಯೇ ಬ್ಯಾಟ್ ಮೂಲಕ ಅವರಿಗೆ ಉತ್ತರಿಸಿದೆ ಎಂದು ತಿಲಕ್ ಹೇಳಿದ್ದಾರೆ.
'ಪಂದ್ಯದ ನಡುವೆ ಅನೇಕ ಸಂಗತಿಗಳು ನಡೆದಿವೆ. ಅವುಗಳನ್ನು ನಾನು ಬಹಿರಂಗಪಡಿಸಲು ಸಾಧ್ಯವಿಲ್ಲ. ಭಾರತ ಹಾಗೂ ಪಾಕಿಸ್ತಾನ ಪಂದ್ಯಗಳಲ್ಲಿ ಆ ವಿಷಯಗಳು ಸಾಮಾನ್ಯವಾಗಿ ನಡೆಯುತ್ತವೆ. ಅವುಗಳು ಕೂಡ ಆಟದ ಒಂದು ಭಾಗ. ನಮ್ಮ ಗಮನ ಕೇವಲ ಪಂದ್ಯ ಗೆಲ್ಲುವುದರ ಮೇಲೆ ಇತ್ತು' ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.