ADVERTISEMENT

IPL-2020 | ತಂಡದ ವಾತಾವರಣಕ್ಕೆ ಒಗ್ಗಿಕೊಳ್ಳಲು ಶ್ರೇಯಸ್‌ ನೆರವಾದರು: ಅಕ್ಷರ್‌

ಪಿಟಿಐ
Published 4 ಮೇ 2020, 19:45 IST
Last Updated 4 ಮೇ 2020, 19:45 IST
ಅಕ್ಷರ್‌ ಪಟೇಲ್‌ 
ಅಕ್ಷರ್‌ ಪಟೇಲ್‌    

ನವದೆಹಲಿ: ‘ಡೆಲ್ಲಿ ಡೇರ್‌ಡೆವಿಲ್ಸ್‌ ತಂಡ ಸೇರಿದ ಹೊಸತರಲ್ಲಿ ನನಗೆ ಶ್ರೇಯಸ್‌ ಅಯ್ಯರ್‌ ತುಂಬಾ ಸಹಕಾರ ಕೊಟ್ಟರು. ಹೀಗಾಗಿ ಬೇಗನೆ ತಂಡದ ವಾತಾವರಣಕ್ಕೆ ಒಗ್ಗಿಕೊಳ್ಳಲು ಸಾಧ್ಯವಾಯಿತು’ ಎಂದು ಸ್ಪಿನ್ನರ್‌ ಅಕ್ಷರ್‌ ಪಟೇಲ್‌ ತಿಳಿಸಿದ್ದಾರೆ.

ಇಂಡಿಯನ್‌‍ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟ್ವೆಂಟಿ–20 ಟೂರ್ನಿಯಲ್ಲಿ ಆಡುವ ಡೆಲ್ಲಿ ತಂಡವನ್ನು ಶ್ರೇಯಸ್‌ ಮುನ್ನಡೆಸುತ್ತಾರೆ.

2019ರ ಐಪಿಎಲ್ ಆಟಗಾರರ‌ ಹರಾಜಿನಲ್ಲಿ ಡೆಲ್ಲಿ ಫ್ರಾಂಚೈಸ್‌, ₹5 ಕೋಟಿ ನೀಡಿ ಅಕ್ಷರ್‌ ಅವರನ್ನು ಸೆಳೆದುಕೊಂಡಿತ್ತು. ಆ ವರ್ಷ ಅವರು ಒಟ್ಟು 10 ವಿಕೆಟ್‌ ಉರುಳಿಸಿದ್ದಲ್ಲದೇ 110ರನ್‌ಗಳನ್ನೂ ಬಾರಿಸಿದ್ದರು.

ADVERTISEMENT

ಅದಕ್ಕೂ ಮುನ್ನ 26 ವರ್ಷ ವಯಸ್ಸಿನ ಅಕ್ಷರ್‌ ಪಟೇಲ್‌, ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡವನ್ನು ಪ್ರತಿನಿಧಿಸುತ್ತಿದ್ದರು.

‘ನಾನು ಮತ್ತು ಶ್ರೇಯಸ್‌ ಭಾರತ ‘ಎ’ ತಂಡದ ಪರ ಹಲವು ಪಂದ್ಯಗಳಲ್ಲಿ ಆಡಿದ್ದೇವೆ. ಹೀಗಾಗಿ ನಮ್ಮ ನಡುವೆ ಉತ್ತಮ ಬಾಂಧವ್ಯ ಏರ್ಪಟ್ಟಿದೆ. ಪಂದ್ಯದ ವೇಳೆ ಅವರು ಬೌಲರ್‌ಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುತ್ತಾರೆ. ತಾಳ್ಮೆಯಿಂದಲೇ ಎಲ್ಲವನ್ನೂ ನಿಭಾಯಿಸುತ್ತಾರೆ. ಅವರ ನಾಯಕತ್ವದಲ್ಲಿ ಆಡಲು ಖುಷಿಯಾಗುತ್ತದೆ’ ಎಂದು ಡೆಲ್ಲಿ ಫ್ರಾಂಚೈಸ್‌ ಜೊತೆಗಿನ ಇನ್‌ಸ್ಟಾಗ್ರಾಮ್‌ ಸಂವಾದದಲ್ಲಿ ಹೇಳಿದ್ದಾರೆ.

‘ಕಿಂಗ್ಸ್‌ ಇಲೆವನ್‌ ತಂಡದಲ್ಲಿ ಐದು ವರ್ಷ ಆಡಿದ್ದೆ. ಆ ತಂಡ ನನ್ನನ್ನು ಕೈಬಿಟ್ಟ ಬಳಿಕ ಭವಿಷ್ಯದ ಬಗ್ಗೆ ಚಿಂತೆ ಕಾಡಿತ್ತು. ಡೆಲ್ಲಿ ಫ್ರಾಂಚೈಸ್‌ ನನ್ನನ್ನು ಸೆಳೆದುಕೊಂಡಾಗ ನಿರಾಳನಾಗಿದ್ದೆ. ಏಕೆಂದರೆ ನನಗೆ ಪರಿಚಯವಿದ್ದ ಅನೇಕ ಆಟಗಾರರು ಆ ತಂಡದಲ್ಲಿದ್ದರು. ಲೀಗ್‌ಗೂ ಮುನ್ನ ನಡೆದ ಅಭ್ಯಾಸ ಶಿಬಿರದಲ್ಲಿ ಭಾಗಿಯಾಗಿದ್ದೆ. ಆರಂಭದ ಕೆಲ ದಿನಗಳಲ್ಲಿ ಎಲ್ಲರ ಜೊತೆ ಬೆರೆಯುವುದಕ್ಕೆ ಸಂಕೋಚ ಪಡುತ್ತಿದ್ದೆ. ದಿನ ಕಳೆದಂತೆ ಎಲ್ಲವೂ ಸರಿ ಹೋಯಿತು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.