ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಅಂಪೈರ್ಗಳಿಗೆಆಗಿ ಎ ಪ್ಲಸ್ ವಿಭಾಗವನ್ನು ಆರಂಭಿಸಿದೆ.
ಐಸಿಸಿ ಎಲೀಟ್ ಪ್ಯಾನೆಲ್ ಅಂಪೈರ್ ನಿತಿನ್ ಮೆನನ್ ಸೇರಿದಂತೆ ಹತ್ತು ಅಂಪೈರ್ಗಳು ಇದರಲ್ಲಿ ಸ್ಥಾನ ಪಡೆದಿದ್ದಾರೆ.
ಅನುಭವಿ ಅಂಪೈರ್ಗಳಾದ ಅನಿಲ್ ಚೌಧರಿ, ಮದನಗೋಪಾಲ್, ಜಯರಾಮನ್, ವೀರೇಂದ್ರಕುಮಾರ್ ಶರ್ಮಾ, ಕೆ.ಎನ್. ಅನಂತಪದ್ಮನಾಭನನ್, ರೋಹನ್ ಪಂಡಿತ್, ನಿಖಿಲ್ ಪಟವರ್ಧನ್, ಸದಾಶಿವ್ ಅಯ್ಯರ್, ಉಲ್ಲಾಸ ಗಂಧೆ ಮತ್ತು ನವದೀಪ್ ಸಿಂಗ್ ಸಿಧು ಈ ವಿಭಾಗದಲ್ಲಿದ್ದಾರೆ.
ಸಿ. ಶಂಸುದ್ದೀನ್ ಸೇರಿದಂತೆ 20 ಅಂಪೈರ್ಗಳು ಎ ಗುಂಪಿನಲ್ಲಿ, 60 ಅಂಪೈರ್ಗಳು ಬಿ ಗುಂಪಿನಲ್ಲಿ, 46 ಅಂಪೈರ್ಗಳು ಸಿ ಮತ್ತು 11 ಅಂಪೈರ್ಗಳು ಡಿ ಗುಂಪಿನಲ್ಲಿದ್ದಾರೆ. 60–65 ವಯೋಮಿತಿಯೊಳಗಿನವರು ಇದರಲ್ಲಿದ್ದಾರೆ.
ಗುರುವಾರ ನಡೆದ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ನಿರ್ಧಾರ ಅಂತಿಮಗೊಳಿಸಲಾಯಿತು. ಮಾಜಿ ಅಂತರರಾಷ್ಟ್ರೀಯ ಅಂಪೈರ್ಗಳಾದ ಕೆ. ಹರಿಹರನ್, ಸುಧೀರ್ ಅಸ್ನಾನಿ ಮತ್ತು ಅಮೀಶ್ ಸಾಹೆಬಾ ಅವರು ಇರುವ ಅಂಪೈರ್ ಉಪಸಮಿತಿಯು ಶಿಫಾರಸು ಮಾಡಿತು.
ಎ ಪ್ಲಸ್ ಮತ್ತು ಎ ವಿಭಾಗಗಳ ಅಂಪೈರ್ಗಳು ಪ್ರಥಮ ದರ್ಜೆ ಪಂದ್ಯದಲ್ಲಿ ದಿನವೊಂದಕ್ಕೆ ₹ 40 ಸಾವಿರ, ಬಿ ಮತ್ತು ಸಿ ಗುಂಪಿನ ಅಂಪೈರ್ಗಳಿಗೆ ₹ 30 ಸಾವಿರ ಸಂಭಾವನೆ ನೀಡಲಾಗುತ್ತದೆ.
‘ದೇಶಿ ಋತುವಿನ ಪಂದ್ಯಗಳಿಗೆ ನಿಯೋಜನೆ ಮಾಡುವಾಗಲೂ ಈ ಕೆಟಗರಿಗಳ ಅಧಾರದಲ್ಲಿ ಅವಕಾಶ ನೀಡಲಾಗುತ್ತದೆ. ಅದರಲ್ಲೂ ರಣಜಿ ಟ್ರೋಫಿ ಟೂರ್ನಿಯ ಪಂದ್ಯಗಳಲ್ಲಿ ಈ ಪದ್ಧತಿ ಕಟ್ಟುನಿಟ್ಟಾಗಿ ಪಾಲನೆಯಾಗಲಿದೆ’ ಎಂದು ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.