ADVERTISEMENT

ಯುಎಇಯಲ್ಲಿ ಐಪಿಎಲ್ ಮುಂದುವರಿಸುವ ಬಗ್ಗೆ ನಾಳೆ ನಿರ್ಧಾರ ಸಾಧ್ಯತೆ

ಬಿಸಿಸಿಐ ವಿಶೇಷ ಸಾಮಾನ್ಯ ಸಭೆ: ರಣಜಿ ಪರಿಹಾರ ಮೊತ್ತ ಘೋಷಣೆ

ಪಿಟಿಐ
Published 28 ಮೇ 2021, 11:42 IST
Last Updated 28 ಮೇ 2021, 11:42 IST
ಸೌರವ್‌ ಗಂಗೂಲಿ
ಸೌರವ್‌ ಗಂಗೂಲಿ    

ನವದೆಹಲಿ: ಕೊರೊನಾದಿಂದಾಗಿ ಮುಂದೂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯನ್ನು ಯುಎಇಯಲ್ಲಿ ಮುಂದುವರಿಸುವ ಬಗ್ಗೆ ಶನಿವಾರ ನಿರ್ಧಾರವಾಗಲಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ವಿಶೇಷ ಸಾಮಾನ್ಯ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಲಿದೆ.

ಅಂತರರಾಷ್ಟ್ರೀಯ ಟೂರ್ನಿಗಳ ನಡುವೆ ಸೆಪ್ಟೆಂಬರ್ 15ರಿಂದ ಅಕ್ಟೋಬರ್ 15ರ ಅವಧಿಯಲ್ಲಿ ಸಿಗುವ ಸಮಯಾವಕಾಶದಲ್ಲಿ ಉಳಿದಿರುವ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ.

ಶನಿವಾರ ನಡೆಯಲಿರುವ ಸಭೆಯಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆಯೋಜನೆ ಬಗ್ಗೆ ಮತ್ತು ಕಳೆದ ವರ್ಷ ರದ್ದುಗೊಂಡ ರಣಜಿ ಟೂರ್ನಿಯಲ್ಲಿ ಆಡಬೇಕಾಗಿದ್ದ ಆಟಗಾರರ ಪರಿಹಾರ ಧನದ ಕುರಿತು ಕೂಡ ಚರ್ಚೆ ನಡೆಯುವ ಸಾಧ್ಯತೆ ಇದೆ. ಟಿ20 ವಿಶ್ವಕಪ್‌ ಟೂರ್ನಿಗೆ ಸಂಬಂಧಿಸಿ ಜೂನ್ ಒಂದರಂದು ಮತ್ತು ಸಭೆ ನಡೆಯಲಿದ್ದು ಕೋವಿಡ್–19ರ ಸ್ಥಿತಿಯನ್ನು ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳುವಂತೆ ಐಸಿಸಿಐನ್ನು ಕೋರಲಿದೆ.

ADVERTISEMENT

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಅಧ್ಯಕ್ಷತೆಯಲ್ಲಿ ವರ್ಚುವಲ್ ಆಗಿ ನಡೆಯಲಿರುವ ಶನಿವಾರದ ಸಭೆಯಲ್ಲಿ ಬಯೊಬಬಲ್, ವಿದೇಶಿ ಆಟಗಾರರ ನಿರ್ವಹಣೆ ಮುಂತಾದ ವಿಷಯಗಳ ಕುರಿತು ವಿಸ್ತೃತ ಚರ್ಚೆ ನಡೆಯಲಿದೆ.

ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಲಿರುವುದರಿಂದ ಇಂಗ್ಲೆಂಡ್ ಆಟಗಾರರು ಐಪಿಎಲ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಈಗಾಗಲೇ ತಿಳಿಸಿದೆ. ಜೋಸ್ ಬಟ್ಲರ್‌, ಬೆನ್ ಸ್ಟೋಕ್ಸ್‌, ಜೊಫ್ರಾ ಆರ್ಚರ್‌, ಜಾನಿ ಬೆಸ್ಟೊ, ಸ್ಯಾಮ್ ಕರನ್‌, ಏಯಾನ್ ಮಾರ್ಗನ್, ಮೋಯಿನ್ ಅಲಿ ಮುಂತಾದವರ ಬದಲಿಗೆ ಆಟಗಾರರನ್ನು ಹೊಂದಿಸಿಕೊಳ್ಳುವುದು ಸವಾಲಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.