ನವದೆಹಲಿ: ಭಾರತ ಕ್ರಿಕೆಟ್ ತಂಡದ ಎರಡು ಪ್ರಮುಖ ಪ್ರಾಯೋಜಕತ್ವ ಕಂಪನಿಗಳಾದ ಬೈಜುಸ್ ಮತ್ತು ಎಂಪಿಎಲ್ ಸ್ಪೋರ್ಟ್ಸ್, ಬಿಸಿಸಿಐನೊಂದಿಗಿನ ಒಪ್ಪಂದದಿಂದ ಹೊರಗುಳಿಯಲು ಬಯಸಿವೆ.
ತಂಡಕ್ಕೆ ಪೋಷಾಕು ಪ್ರಾಯೋಜಕತ್ವ ನೀಡುತ್ತಿರುವ ಆನ್ಲೈನ್ ಕಲಿಕಾ ವೇದಿಕೆ ಬೈಜುಸ್, ಜೂನ್ನಲ್ಲಿ ತನ್ನ ಒಪ್ಪಂದವನ್ನು ₹ 293 ಕೋಟಿ ಮೊತ್ತಕ್ಕೆ 2023ರ ನವೆಂಬರ್ವರೆಗೆ ವಿಸ್ತರಿಸಿಕೊಂಡಿತ್ತು. ಈಗ ಅದು ಒಪ್ಪಂದ ಕಡಿತಗೊಳಿಸಲು ಬಯಸಿದೆ. ಆದರೆ ಕನಿಷ್ಠ 2023ರ ಮಾರ್ಚ್ವರೆಗೆ ಮುಂದುವರಿಯುವಂತೆ ಕಂಪನಿಗೆ ಬಿಸಿಸಿಐ ಕೇಳಿಕೊಂಡಿದೆ.
‘ಒಪ್ಪಂದದ ಹೊರಗುಳಿಯಲು ಬೈಜುಸ್ ಈ ವರ್ಷ ನವೆಂಬರ್ 4ರಂದು ಪತ್ರ ಬರೆದಿದೆ. ಒಪ್ಪಂದದ ಅನ್ವಯ ಪ್ರಾಯೋಜಕತ್ವ ಮುಂದುವರಿಸುವಂತೆ ನಾವು ಕೇಳಿಕೊಂಡಿದ್ದೇವೆ‘ ಎಂದು ಬಿಸಿಸಿಐ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಬುಧವಾರ ನಡೆದ ಬಿಸಿಸಿಐನ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು.
ಕೆಕೆಸಿಎಲ್ಗೆ ಹಕ್ಕುಗಳನ್ನು ವರ್ಗಾಯಿಸಲು ಎಂಪಿಎಲ್ ಮನವಿ: ಬಿಸಿಸಿಐನೊಂದಿಗೆ ತಾನು ಹೊಂದಿರುವ ಕಿಟ್ ಪ್ರಾಯೋಜಕತ್ವದ ಸಂಪೂರ್ಣ ಹಕ್ಕುಗಳನ್ನು ಕೇವಲ್ ಕಿರಣ್ ಕ್ಲಾಥಿಂಗ್ ಲಿಮಿಟ್ (ಕೆಕೆಸಿಎಲ್) ಸಂಸ್ಥೆಗೆ ನಿಯೋಜಿಸುವಂತೆ ಎಂಪಿಎಲ್ ಮನವಿ ಮಾಡಿದೆ. ಈ ಕುರಿತು ಡಿಸೆಂಬರ್ 2ರಂದು ಕಂಪನಿ ಬಿಸಿಸಿಐಗೆ ಪತ್ರ ಬರೆದಿದೆ. ಎಂಪಿಎಲ್ ಕಂಪೆನಿಗೂ ಮಾರ್ಚ್ 31ರವರೆಗೆ ಒಪ್ಪಂದದಲ್ಲಿ ಮುಂದುವರಿಯುವಂತೆ ಬಿಸಿಸಿಐ ಮನವಿ ಮಾಡಿದೆ.
ಆಯ್ಕೆ ಸಮಿತಿ ರಚನೆಯ ಬಳಿಕ ಕೇಂದ್ರೀಯ ಗುತ್ತಿಗೆ ತೀರ್ಮಾನ: ಆಟಗಾರರ ಕೇಂದ್ರೀಯ ಗುತ್ತಿಗೆಯನ್ನು ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಹೊಸ ಆಯ್ಕೆ ಸಮಿತಿಯ ರಚನೆಯ ಬಳಿಕ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನು ವಜಾ ಮಾಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.