ADVERTISEMENT

ಸಿಎಸಿ–ಐಎಸಿಗೆ ಶಾಂತಾ ರಂಗಸ್ವಾಮಿ ರಾಜೀನಾಮೆ

ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆ ಆರೋಪ

ಪಿಟಿಐ
Published 29 ಸೆಪ್ಟೆಂಬರ್ 2019, 20:15 IST
Last Updated 29 ಸೆಪ್ಟೆಂಬರ್ 2019, 20:15 IST
ಶಾಂತಾ ರಂಗಸ್ವಾಮಿ
ಶಾಂತಾ ರಂಗಸ್ವಾಮಿ   

ನವದೆಹಲಿ:ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆಯ ನೋಟಿಸ್‌ ಪಡೆದ ಕಾರಣಕ್ಕೆ ಶಾಂತಾ ರಂಗಸ್ವಾಮಿ ಅವರು ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಮತ್ತು ಭಾರತ ಕ್ರಿಕೆಟಿಗರ ಸಂಸ್ಥೆಯ (ಐಸಿಎ) ನಿರ್ದೇಶಕ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

ಒಂದಕ್ಕಿಂತ ಹೆಚ್ಚು ಹುದ್ದೆಗಳಲ್ಲಿ ಇರುವ ಕಾರಣಕ್ಕೆ ಸಿಎಸಿಯ ಮುಖ್ಯಸ್ಥ ಕಪಿಲ್ ದೇವ್, ಅನ್ಷುಮನ್ ಗಾಯಕವಾಡ ಮತ್ತು ಶಾಂತಾ ರಂಗಸ್ವಾಮಿ ಅವರಿಗೆ ಬಿಸಿಸಿಐ ನೀತಿ ಅಧಿಕಾರಿ ಡಿ.ಕೆ. ಜೈನ್ ಅವರು ಶನಿವಾರ ನೋಟಿಸ್ ಜಾರಿ ಮಾಡಿದ್ದರು.

‘ನನಗೆ ಬೇರೆ ಯೋಜನೆಗಳಿವೆ. ಆದ್ದರಿಂದ ಈ ನಿರ್ಧಾರ ಮಾಡಿದೆ. ಈ ಸಮಿತಿಗಳಲ್ಲಿ ನಾವು ವರ್ಷದಲ್ಲಿ ಒಂದೋ ಅಥವಾ ಎರಡು ಬಾರಿ ಸಭೆ ಸೇರಿದರೆ ಹೆಚ್ಚು. ಇದರಲ್ಲಿ ಹಿತಾಸಕ್ತಿ ಸಂಘರ್ಷ ಹೇಗಾಗುತ್ತದೆ ಎಂಬುದ ನನಗೆ ಅರ್ಥವಾಗುತ್ತಿಲ್ಲ’ ಎಂದು ಶಾಂತಾ ಹೇಳಿದ್ದಾರೆ.

ADVERTISEMENT

‘ಸಿಎಸಿಯಲ್ಲಿ ಕಾರ್ಯನಿರ್ವಹಿಸಿದ್ದು ಖುಷಿ ಕೊಟ್ಟಿದೆ. ಭಾರತ ತಂಡದ ಮುಖ್ಯ ಕೋಚ್ ಆಯ್ಕೆಯಲ್ಲಿ ಪಾತ್ರ ವಹಿಸಿದ್ದ ಒಳ್ಳೆಯ ಅನುಭವ. ಆದರೆ ಇವತ್ತಿನ ಸ್ಥಿತಿಯಲ್ಲಿ ಆಡಳಿತಾತ್ಮಕ ವಿಷಯಗಳಲ್ಲಿ ಕಾರ್ಯನಿರ್ವಹಿಸುವುದು ಕಷ್ಟ. ಐಸಿಎಗೆ ಈ ಹಿಂದೆಯೇ ರಾಜೀನಾಮೆ ನೀಡಲು ನಿರ್ಧರಿಸಿದ್ದೆ. ಆದರೆ ಕಾರಣಾಂತರದಿಂದ ತಡವಾಗಿದೆ ಅಷ್ಟೇ’ ಎಂದು ಶಾಂತಾ ಹೇಳಿದ್ದಾರೆ.

ಅವರು ತಮ್ಮ ರಾಜೀನಾಮೆ ಪತ್ರವನ್ನು ಕ್ರಿಕೆಟ್ ಆಡಳಿತ ಸಮಿತಿ ಮತ್ತು ಬಿಸಿಸಿಐ ಮುಖ್ಯ ಕಾರ್ಯನಿರ್ವಹಣೆ ಅಧಿಕಾರಿ ರಾಹುಲ್ ಜೊಹ್ರಿ ಅವರಿಗೆ ಇಮೇಲ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.