ADVERTISEMENT

ಪೌರತ್ವ ಕಾಯ್ದೆ | ವಿದ್ಯಾರ್ಥಿಗಳ ಮೇಲಿನ ಕ್ರಮದ ಬಗ್ಗೆ ಕ್ರಿಕೆಟಿಗ ಪಠಾಣ್ ಟ್ವೀಟ್

ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 13:03 IST
Last Updated 16 ಡಿಸೆಂಬರ್ 2019, 13:03 IST
   

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೋರಾಟ ನಡೆಸುತ್ತಿದ್ದ ಜಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿರುವುದಕ್ಕೆ ಸಂಬಂಧಿಸಿದಂತೆ ಹಿರಿಯ ಕ್ರಿಕೆಟಿಗ ಇರ್ಫಾನ್‌ ಪಠಾಣ್‌ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

‘ರಾಜಕೀಯ ಕೆಸರೆರಚಾಟ ಯಾವಾಗಲೂ ನಡೆಯುತ್ತಿರುತ್ತದೆ. ಆದರೆ, ಜಮಿಯಾ ಮಿಲಿಯಾ ವಿದ್ಯಾರ್ಥಿಗಳ ಬಗ್ಗೆನಾನು ಮತ್ತು ನಮ್ಮ ದೇಶ ಕಳವಳಗೊಂಡಿದ್ದೇವೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ದೆಹಲಿಯ ಜಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಯ ವಿದ್ಯಾರ್ಥಿಗಳು ಕಳೆದ ಕೆಲದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಹೋರಾಟವು ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಲಾಠಿ ಚಾರ್ಜ್‌ ಮಾಡಿ ಅಶ್ರುವಾಯು ಪ್ರಯೋಗಿಸಿದ್ದರು. ಮಾತ್ರವಲ್ಲದೆ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದರು.

ಬಳಿಕ ದೇಶದಾದ್ಯಂತ ಪ್ರತಿಭಟನೆಯ ಕೂಗು ಜೋರಾಗಿ ಕೇಳಿಬಂದಿತ್ತು. ಹೀಗಾಗಿ ವಶಕ್ಕೆ ಪಡೆಯಲಾಗಿದ್ದ ಎಲ್ಲ ವಿದ್ಯಾರ್ಥಿಗಳನ್ನೂ ಮುಂಜಾನೆ 3.30ರ ಸುಮಾರಿಗೆ ಬಿಡುಗಡೆಗೊಳಿಸಿದ್ದರು.

ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಿಂದಾಗಿ ಸುಮಾರು 10ಕ್ಕೂ ಹೆಚ್ಚು ಪೊಲೀಸರು ಮತ್ತು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಸದ್ಯ ಮುನ್ನೆಚ್ಚರಿಕೆಯಾಗಿ ಅಲಿಗರ್‌ ಮುಸ್ಲಿಂ ವಿಶ್ವವಿದ್ಯಾಲಯವನ್ನೂ ಮುಂದಿನ ತಿಂಗಳವರೆಗೆ ಮುಚ್ಚಲಾಗಿದ್ದು, ಅಂತರ್ಜಾಲ ಕಡಿತಗೊಳಿಸಲಾಗಿದೆ.

ಹೈದರಾಬಾದ್‌ನ ಮೌಲಾನಾ ಆಜಾದ್‌ ವಿವಿ ಹಾಗೂ ಬನಾರಸ್‌ ಹಿಂದೂ ವಿವಿ ವಿದ್ಯಾರ್ಥಿಗಳೂ ಜಮಿಯಾ ವಿವಿ ವಿದ್ಯಾರ್ಥಿಗಳೊಂದಿಗೆ ಭಾನವಾರ ಪ್ರತಿಭಟನೆ ನಡೆಸಿದ್ದರು. ಕೋಲ್ಕತ್ತದ ಜಾದವಪುರ್ ವಿವಿ ಬಳಿ ಮಧ್ಯರಾತ್ರಿ ಮೆರವಣಿಗೆ ನಡೆಸಿದ್ದರು.ಮೌಲಾನಾ ಆಜಾದ್‌ ವಿವಿ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳನ್ನೂ ಮುಂದೂಡುವಂತೆ ಬೇಡಿಕೆ ಇಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.