ADVERTISEMENT

ದುಲೀಪ್‌ ಟ್ರೋಫಿ ಕ್ರಿಕೆಟ್‌: ಕರ್ನಾಟಕದ ಆರು ಮಂದಿಗೆ ಸ್ಥಾನ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2024, 2:34 IST
Last Updated 15 ಆಗಸ್ಟ್ 2024, 2:34 IST
ಕೆ.ಎಲ್‌. ರಾಹುಲ್‌
ಕೆ.ಎಲ್‌. ರಾಹುಲ್‌   

ಬೆಂಗಳೂರು: ಸೆಪ್ಟೆಂಬರ್ 5ರಿಂದ ಬೆಂಗಳೂರಿನಲ್ಲಿ ಪ್ರಾರಂಭವಾಗುವ ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಗೆ ರಾಷ್ಟ್ರೀಯ ಆಯ್ಕೆ ಸಮಿತಿಯು ನಾಲ್ಕು ತಂಡಗಳನ್ನು ಪ್ರಕಟಿಸಿದೆ. ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಮತ್ತು ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಅವರಿಗೆ ವಿನಾಯಿತಿ ನೀಡಲಾಗಿದೆ.

ನಾಲ್ಕು ತಂಡಗಳಲ್ಲಿ ಕರ್ನಾಟಕದ ಆರು ಆಟಗಾರರು ಸ್ಥಾನ ಪಡೆದಿದ್ದಾರೆ. ಕೆ.ಎಲ್‌.ರಾಹುಲ್‌, ಮಯಂಕ್‌ ಅಗರವಾಲ್, ಪ್ರಸಿದ್ಧ ಕೃಷ್ಣ ಮತ್ತು ವಿದ್ವತ್‌ ಕಾವೇರಪ್ಪ ಅವರು ಶುಭಮನ್ ಗಿಲ್ ನಾಯಕತ್ವದ ‘ಎ’ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ದೇವದತ್ತ ಪಡಿಕ್ಕಲ್‌ ಅವರು ಶ್ರೇಯಸ್‌ ಅಯ್ಯರ್‌ ನಾಯಕತ್ವದ ‘ಡಿ’ ತಂಡದಲ್ಲಿ ಮತ್ತು ವೈಶಾಖ ವಿಜಯಕುಮಾರ್‌ ಅವರು ಋತುರಾಜ್‌ ಗಾಯಕವಾಡ್‌ ನಾಯಕತ್ವದ ‘ಸಿ’ ತಂಡದಲ್ಲಿ ಅವಕಾಶ ಗಳಿಸಿದ್ದಾರೆ.

ಭಾರತ ತಂಡದ ಬ್ಯಾಟರ್‌ಗಳಾದ ಸೂರ್ಯಕುಮಾರ್ ಯಾದವ್, ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಆಲ್‌ರೌಂಡರ್‌ ರವೀಂದ್ರ ಜಡೇಜ, ವೇಗಿಗಳಾದ ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್ ಮತ್ತು ಸ್ಪಿನ್ನರ್‌ ಕುಲದೀಪ್ ಯಾದವ್ ಮೊದಲಾದವರು ವಿವಿಧ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ. ಐಪಿಎಲ್‌ನ ಕೊನೆಯ ಆವೃತ್ತಿಯಲ್ಲಿ ಪುನರಾಗಮನ ಮಾಡಿದ ವಿಕೆಟ್‌ ಕೀಪರ್ ರಿಷಭ್‌ ಪಂತ್ ಅವರೂ ತಂಡದಲ್ಲಿದ್ದಾರೆ.

ADVERTISEMENT

ಮತ್ತೊಂದು ಗಮನಾರ್ಹ ಸೇರ್ಪಡೆಯೆಂದರೆ ಇಶಾನ್ ಕಿಶನ್. ಕಳೆದ ಋತುವಿನಲ್ಲಿ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಟದ ಕಾರಣಕ್ಕಾಗಿ ಬಿಸಿಸಿಐ ಕೇಂದ್ರ ಒಪ್ಪಂದಗಳ ಪಟ್ಟಿಯಿಂದ ಹೊರಬಿದ್ದ ಕಿಶನ್‌ ಅವರಿಗೆ ಅವಕಾಶ ನೀಡಲಾಗಿದೆ.

ಇಂಗ್ಲೆಂಡ್ ವಿರುದ್ಧದ ತವರಿನ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸರ್ಫರಾಜ್ ಖಾನ್, ಧ್ರುವ್ ಜುರೇಲ್ ಸೇರಿದಂತೆ ಆರ್ಯನ್ ಜುಯಲ್ ಮತ್ತು ಅಭಿಷೇಕ್ ಪೊರೆಲ್ ಕೂಡ ವಿವಿಧ ತಂಡಗಳ ಭಾಗವಾಗಿದ್ದಾರೆ. ವೇಗಿ ಜಸ್‌ಪ್ರೀತ್ ಬೂಮ್ರಾ ಮತ್ತು ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಅವರಿಗೆ ವಿನಾಯಿತಿ ನೀಡಲಾಗಿದೆ.

ಭಾರತವು ಬಾಂಗ್ಲಾದೇಶದ ವಿರುದ್ಧ ಸೆ.19ರಿಂದ ಚೆನ್ನೈನಲ್ಲಿ ಮತ್ತು ಸೆ.27 ರಿಂದ ಕಾನ್ಪುರದಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ.

‘ಬಾಂಗ್ಲಾದೇಶ ವಿರುದ್ಧದ ತವರಿನ ಟೆಸ್ಟ್ ಸರಣಿಗೆ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗುವ ಕ್ರೀಡಾಪಟುಗಳನ್ನು ದುಲೀಪ್ ಟ್ರೋಫಿಯಲ್ಲಿ ಬದಲಾಯಿಸಲಾಗುವುದು’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಂಡಗಳು ಇಂತಿವೆ:

‘ಎ’ ತಂಡ: ಶುಭಮನ್ ಗಿಲ್ (ನಾಯಕ), ಮಯಂಕ್‌ ಅಗರವಾಲ್, ರಿಯಾನ್ ಪರಾಗ್, ಧ್ರುವ್‌ ಜುರೇಲ್, ಕೆ.ಎಲ್. ರಾಹುಲ್, ತಿಲಕ್ ವರ್ಮಾ, ಶಿವಂ ದುಬೆ, ತನುಷ್ ಕೋಟ್ಯಾನ್‌, ಕುಲ್‌ದೀಪ್ ಯಾದವ್, ಆಕಾಶ್ ದೀಪ್, ಪ್ರಸಿದ್ಧ ಕೃಷ್ಣ, ಖಲೀಲ್ ಅಹ್ಮದ್, ಆವೇಶ್ ಖಾನ್, ವಿದ್ವತ್ ಕಾವೇರಪ್ಪ, ಕುಮಾರ್ ಕುಶಾಗ್ರ, ಶಾಶ್ವತ್ ರಾವತ್.

‘ಬಿ’ ತಂಡ: ಅಭಿಮನ್ಯು ಈಶ್ವರನ್ (ನಾಯಕ), ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್, ರಿಷಭ್ ಪಂತ್, ಮಷೀರ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜ, ಮೊಹಮ್ಮದ್ ಸಿರಾಜ್, ಯಶ್ ದಯಾಳ್, ಮುಕೇಶ್ ಕುಮಾರ್, ರಾಹುಲ್ ಚಹರ್, ಆರ್.ಸಾಯ್‌ ಕಿಶೋರ್, ಮೋಹಿತ್ ಆವಸ್ತಿ, ಎನ್. ಜಗದೀಸನ್ (ವಿಕೆಟ್‌ ಕೀಪರ್‌).

‘ಸಿ’ ತಂಡ: ಋತುರಾಜ್ ಗಾಯಕವಾಡ್ (ನಾಯಕ), ಸಾಯ್‌ ಸುದರ್ಶನ್, ರಜತ್ ಪಾಟೀದಾರ್, ಅಭಿಷೇಕ್ ಪೊರೆಲ್ (ವಿಕೆಟ್‌ ಕೀಪರ್‌), ಸೂರ್ಯಕುಮಾರ್ ಯಾದವ್, ಬಿ. ಇಂದ್ರಜಿತ್, ಹೃತಿಕ್ ಶೋಕೀನ್, ಮಾನವ್ ಸುತಾರ್, ಉಮ್ರಾನ್ ಮಲಿಕ್, ವೈಶಾಖ ವಿಜಯ್‌ಕುಮಾರ್, ಅನ್ಶುಲ್ ಖಂಬೋಜ್, ಹಿಮಾಂಶು ಚೌಹಾಣ್, ಮಯಾಂಕ ಮರ್ಕಂಡೆ, ಆರ್ಯನ್‌ ಜುಯೆಲ್‌ (ವಿಕೆಟ್‌ ಕೀಪರ್‌) ಸಂದೀಪ್ ವಾರಿಯರ್.

‘ಡಿ’ ತಂಡ: ಶ್ರೇಯಸ್ ಅಯ್ಯರ್‌ (ನಾಯಕ), ಅಥರ್ವ ಟೈಡೆ, ಯಶ್ ದುಬೆ, ದೇವದತ್ತ ಪಡಿಕ್ಕಲ್, ಇಶಾನ್ ಕಿಶನ್ (ವಿಕೆಟ್‌ ಕೀಪರ್‌), ರಿಕಿ ಭುಯಿ, ಸರನ್ಶ್ ಜೈನ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಆದಿತ್ಯ ಠಾಕರೆ, ಹರ್ಷಿತ್ ರಾಣಾ, ತುಷಾರ್ ದೇಶಪಾಂಡೆ, ಆಕಾಶ್ ಸೇನ್‌ಗುಪ್ತ, ಕೆ.ಎಸ್. ಭರತ್‌ (ವಿಕೆಟ್‌ ಕೀಪರ್‌), ಸೌರಭ್ ಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.