ADVERTISEMENT

ಸ್ವಜನಪಕ್ಷಪಾತ ಎನ್ನುವ ಬದಲು ಹಾರೈಸಿ: ರಾಹುಲ್‌ ಮಗನ ಪರ ನಿಂತ ದೊಡ್ಡ ಗಣೇಶ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜನವರಿ 2023, 15:46 IST
Last Updated 19 ಜನವರಿ 2023, 15:46 IST
ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್‌
ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್‌    

ಬೆಂಗಳೂರು: ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಕಿರಿಯ ಮಗ ಅನ್ವಯ್ ದ್ರಾವಿಡ್ ಅವರನ್ನು 14 ವರ್ಷದೊಳಗಿನವರ (U-14) ಕರ್ನಾಟಕ ಕ್ರಿಕೆಟ್ ತಂಡದ ನಾಯಕರನ್ನಾಗಿ ಕೆಎಸ್‌ಸಿಎ ನಿಯುಕ್ತಿಗೊಳಿಸಿದೆ.

ರಾಹುಲ್‌ ದ್ರಾವಿಡ್‌ ಅವರ ಮಗ ಕಿರಿಯರ ತಂಡಕ್ಕೆ ನಾಯಕರಾಗಿ ನೇಮಕವಾಗಿರುವುದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಅನ್ವಯ್‌ಗೆ ಶುಭ ಹಾರೈಸಿದ್ದರೆ, ಕೆಲವರು ಇದು ಸ್ವಜನಪಕ್ಷಪಾತವೆಂದು ಆಕ್ಷೇಪಿಸಿದ್ದಾರೆ. ಕೆಲವರು ‘ಅವರಿಗೆ ಕನ್ನಡ ಬರುತ್ತದೆಯೇ’ ಎಂದೂ ಪ್ರಶ್ನಿಸಿದ್ದಾರೆ.

ಈ ಆಕ್ಷೇಪಗಳಿಗೆ ತಿರುಗೇಟು ನೀಡಿರುವ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್‌, ‘ರಾಹುಲ್ ಅವರ ಕಿರಿಯ ಮಗ ಅನ್ವಯ್ ದ್ರಾವಿಡ್ ಕರ್ನಾಟಕದಲ್ಲಿ ಜೂನಿಯರ್ ಹಂತಗಳ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಶ್ರೇಷ್ಠ ಕ್ರಿಕೆಟಿಗನ ಮಗ ಎಂಬ ಮಾತ್ರಕ್ಕೆ ಯಾರೂ ಕೂಡ ವೃತ್ತಿಪರ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವುದಿಲ್ಲ. ಸ್ವಜನಪಕ್ಷಪಾತವನ್ನು ಎಳೆದುತರುವ ಬದಲು ಆ ಮಗುವಿಗೆ ಶುಭ ಹಾರೈಸಿ’ ಎಂದು ಸಲಹೆ ನೀಡಿದ್ದಾರೆ.

ADVERTISEMENT

ಇದೇ 23 ಮತ್ತು ಫೆ.11ರಂದು ಕೇರಳದಲ್ಲಿ ನಡೆಯಲಿರುವ ಪಿ ಕೃಷ್ಣ ಮೂರ್ತಿ ಟ್ರೋಫಿ-ಅಂತರ ವಲಯ ಟೂರ್ನಿಯಲ್ಲಿ ಕರ್ನಾಟಕದ ಕಿರಿಯರ ತಂಡವನ್ನು ಅನ್ವಯ್‌ ಮುನ್ನಡೆಸಲಿದ್ದಾರೆ.

ದ್ರಾವಿಡ್‌ ಅವರ ಹಿರಿಯ ಮಗ ಸಮಿತ್ ಕೂಡ ಅಂಡರ್-14 ಹಂತದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.