ADVERTISEMENT

ಕ್ರಿಕೆಟಿಗ ಪಿ.ಎಸ್. ವಿಶ್ವನಾಥ್ ನಿಧನ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2023, 12:48 IST
Last Updated 3 ಮಾರ್ಚ್ 2023, 12:48 IST
ಪಿ.ಎಸ್. ವಿಶ್ವನಾಥ್
ಪಿ.ಎಸ್. ವಿಶ್ವನಾಥ್   

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಹಾಗೂ ಪ್ರಥಮ ದರ್ಜೆ ಕ್ರಿಕೆಟಿಗ ಪಿ.ಎಸ್. ವಿಶ್ವನಾಥ್ (97) ಅವರು ಶುಕ್ರವಾರ ಬೆಳಗಿನ ಜಾವ ನಿಧನರಾದರು.

ಪುಟ್ಟಣ್ಣಚೆಟ್ಟಿಯವರ ಮೊಮ್ಮಗ ವಿಶ್ವನಾಥ್ ಬಲಗೈ ಬ್ಯಾಟರ್ ಆಗಿದ್ದ ರು. ಅವರು ಮೈಸೂರು ರಾಜ್ಯ ತಂಡವನ್ನು ರಣಜಿ ಕ್ರಿಕೆಟ್‌ನಲ್ಲಿ ಪ್ರತಿನಿಧಿಸಿದ್ದರು. 1948–49ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಮಹಾರಾಷ್ಟ್ರ ವಿರುದ್ಧದ ರಣಜಿ ಪಂದ್ಯದಲ್ಲಿ ಅವರು ಪದಾರ್ಪಣೆ ಮಾಡಿದ್ದರು. 1957–58ರಲ್ಲಿ ಕೇರಳದ ವಿರುದ್ಧ ಮಂಗಳೂರಿನಲ್ಲಿ ಆಡಿದ್ದು ಕೊನೆಯ ಪಂದ್ಯವಾಗಿದೆ.

ಒಟ್ಟು ಒಂಬತ್ತು ಪಂದ್ಯಗಳಿಂದ 408 ರನ್‌ ಗಳಿಸಿದ್ದಾರೆ. ಒಂದು ಶತಕ ಹಾಗೂ ಮೂರು ಅರ್ಧಶತಕಗಳನ್ನು ಗಳಿಸಿದ್ದರು. 1950–51ರಲ್ಲಿ ಕಾಮನ್‌ವೆಲ್ತ್ ಇಲೆವನ್ ವಿರುದ್ಧದ ಪಂದ್ಯದಲ್ಲಿ ಮೈಸೂರು ಪರವಾಗಿ ಆಡಿದ್ದರು. ಎಂಸಿಸಿ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ದಕ್ಷಿಣ ವಲಯವನ್ನು ಪ್ರತಿನಿಧಿಸಿದ್ದರು. ಭಾರತೀಯ ವಿಶ್ವವಿದ್ಯಾಲಯಗಳ ತಂಡದಲ್ಲಿದ್ದ ಅವರು ಪಾಕಿಸ್ತಾನ ಎದುರೂ ಆಡಿದ್ದರು.

ADVERTISEMENT

ಆಟದಿಂದ ನಿವೃತ್ತಿಯ ನಂತರವೂ ಕ್ರಿಕೆಟ್‌ನ ವಿವಿಧ ವಿಭಾಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮಕ್ಕಳಿಗೆ ಕ್ರಿಕೆಟ್ ಕೋಚಿಂಗ್ ನೀಡುತ್ತಿದ್ದರು. ಎರಡು ರಣಜಿ ಟ್ರೋಫಿ ಪಂದ್ಯಗಳಲ್ಲಿ ರೆಫರಿಯಾಗಿಯೂ ಕಾರ್ಯನಿರ್ವಹಿಸಿದ್ದರು. 2010ರಲ್ಲಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗಿತ್ತು.

ವಿಶ್ವನಾಥ್ ಅವರ ಅಂತ್ಯಕ್ರಿಯೆಯು ಶುಕ್ರವಾರ ಮಧ್ಯಾಹ್ನ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.